ನ್ಯೂಯಾರ್ಕ್/ಹೈದರಾಬಾದ್: ಪಿಜ್ಜಾ ಡೆಲಿವರಿ ಮಾಡಲು ತೆರಳಿದ್ದ ಭಾರತೀಯ ಮೂಲದ ಯುವಕನೊಬ್ಬನನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆದಿದೆ.
ವಾರಾಂತ್ಯದಲ್ಲಿ ಅರೆಕಾಲಿಕ ಪಿಜ್ಜಾ ಡೆಲಿವರಿ ಕೆಲಸ ಮಾಡುತ್ತಿದ್ದ ತೆಲಂಗಾಣ ಮೂಲದ 28 ವರ್ಷದ ಭಾರತೀಯ ಅಂಶುಲ್ ಕುಂಚ ಹತ್ಯೆಯಾದ ಯುವಕನಾಗಿದ್ದಾನೆ.
ಶನಿವಾರ ರಾತ್ರಿ ಅಂಶುಲ್'ಗೆ ನಿರ್ಜನ ಪ್ರದೇಶವೊಂದಕ್ಕೆ ಪಿಜ್ಜಾ ತಲುಪಿಸುವ ಆರ್ಡರ್ ಬಂದಿತ್ತು. ಆ ವಿಳಾಸಕ್ಕೆ ತೆರಳಿದಾಗ ದುಷ್ಕರ್ಮಿಯೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಅನ್ಶುಲ್ ಅವರ ತಲೆಗೆ ಹಲವು ಬಾರಿ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
ಘಟನೆಯ ನಂತರ ಅನ್ಶುಲ್ ಅವರ ಬಳಿಯಿಂದ ಯಾವುದೇ ವಸ್ತುಗಳನ್ನು ಕಳವು ಮಾಡಲಾಗಿಲ್ಲ. ಇದರಿಂದ ದರೋಡೆ ಉದ್ದೇಶವಲ್ಲದೆ, ಪೂರ್ವಯೋಜಿತ ಹತ್ಯೆಯಾಗಿರಬಹುದು ಎಂಬ ಅನುಮಾನಗಳು ವ್ಯಕ್ತವಾಗಿವೆ.
ಘಟನೆ ನಡೆದ ಸಮಯದಲ್ಲಿ ಬ್ಯಾಕ್ಪ್ಯಾಕ್ ಧರಿಸಿದ್ದ ಇಬ್ಬರು ಮುಸುಕುಧಾರಿ ವ್ಯಕ್ತಿಗಳು ಆ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದರು ಎಂದು ಅಂಶುಲ್ ಕುಟುಂಬದವರು ತಿಳಿಸಿದ್ದಾರೆ.
ಮೃತನ ಸಹೋದರಿ ತನ್ವಿ ಕುಂಚಾ ಮಾತನಾಡಿ, “ನನ್ನ ಸಹೋದರನನ್ನು ಕೊಲ್ಲುವ ಉದ್ದೇಶದಿಂದಲೇ ಈ ನಕಲಿ ಪಿಜ್ಜಾ ಆರ್ಡರ್ ನೀಡಲಾಗಿತ್ತು. ಅಲ್ಲಿ ಯಾರೂ ಇರಲಿಲ್ಲ. ಅದು ಕೇವಲ ಟ್ರ್ಯಾಪ್ ಆಗಿತ್ತು. ಅವರ ಉದ್ದೇಶ ಏನಿತ್ತು ಎಂಬುದು ನಮಗೆ ತಿಳಿದಿಲ್ಲ. ಆದರೆ, ನನ್ನ ಸಹೋದರನ ಜೀವವನ್ನು ಕಸಿದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಂಶುಲ್ ಸುಮಾರು ನಾಲ್ಕು ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದರು. ಈ ಹಿಂದೆ ದರೋಡೆ ಪ್ರಕರಣವೊಂದರಲ್ಲಿ ಅವರ ಮೊಬೈಲ್, ಸರ ಹಾಗೂ ಹಣವನ್ನು ಕಳವು ಮಾಡಲಾಗಿತ್ತು. ಆದರೆ ಜೀವಕ್ಕೆ ಅಪಾಯ ಎದುರಾದ ಘಟನೆ ಇದೇ ಮೊದಲು ಎಂದು ಕುಟುಂಬ ತಿಳಿಸಿದೆ.
“ನನ್ನ ಸಹೋದರ ಉತ್ತಮ ವ್ಯಕ್ತಿತ್ವವುಳ್ಳವನಾಗಿದ್ದ. ಆತನ ಮೃತದೇಹವನ್ನು ಆದಷ್ಟು ಬೇಗ ಭಾರತಕ್ಕೆ ತರಲು ನೆರವು ನೀಡಬೇಕು. ಅಂತ್ಯಕ್ರಿಯೆಯನ್ನು ವಿಳಂಬವಿಲ್ಲದೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಇದೇ ವೇಳೆ, ಅಮೆರಿಕಕ್ಕೆ ಮಕ್ಕಳನ್ನು ಕಳುಹಿಸುವ ಕುರಿತು ಪೋಷಕರು ಮರುಚಿಂತನೆ ಮಾಡಬೇಕು ಎಂಬ ಭಾವನಾತ್ಮಕ ಮನವಿಯನ್ನೂ ಅವರು ಮಾಡಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ನ್ಯೂಯಾರ್ಕ್ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್, ಅಂಶುಲ್ ಕುಂಚಾ ಅವರ ಅಕಾಲಿಕ ನಿಧನದಿಂದ ತೀವ್ರ ದುಃಖವಾಗಿದೆ ಎಂದು ಹೇಳಿದ್ದು, ಸ್ಥಳೀಯ ಅಧಿಕಾರಿಗಳು ಮತ್ತು ಕುಟುಂಬದವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅಗತ್ಯ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದೆ.
ಈ ಘಟನೆ ಅಮೆರಿಕದಲ್ಲಿರುವ ತೆಲುಗು ಸಮುದಾಯ ಹಾಗೂ ತೆಲಂಗಾಣದ ಅಂಶುಲ್ ಅವರ ಸ್ವಗ್ರಾಮದ ಜನರಲ್ಲಿ ತೀವ್ರ ಆಘಾತ ಮತ್ತು ದುಃಖಕ್ಕೆ ಕಾರಣವಾಗಿದೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ದುಷ್ಕರ್ಮಿಗಳನ್ನು ಶೀಘ್ರ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಕುಟುಂಬ ಒತ್ತಾಯಿಸಿದೆ.