ಟೆಹ್ರಾನ್: ಹೋರ್ಮುಜ್ ಜಲಸಂಧಿಯ ಸಮೀಪ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯ ನಾವಿಕರು ಮತ್ತು ಓರ್ವ ಮುಖ್ಯ ಇಂಜಿನಿಯರ್ ಸಾವನ್ನಪ್ಪಿದ್ದಾರೆ ಎಂದು ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಆಫ್ ಇಂಡಿಯಾ (FSUI) ತಿಳಿಸಿದೆ.
FSUI ಪ್ರಧಾನ ಕಾರ್ಯದರ್ಶಿ ಮನೋಜ್ ಯಾದವ್ ಅವರು, ಹಡಗಿನೊಂದಿಗೆ ಸಂಪರ್ಕ ತೀವ್ರವಾಗಿ ವ್ಯತ್ಯಯಗೊಂಡಿದ್ದು, ಸಂಪೂರ್ಣ ಮಾಹಿತಿ ಇನ್ನೂ ಪರಿಶೀಲನೆಯಲ್ಲಿದೆ ಎಂದು ಹೇಳಿದ್ದಾರೆ. “ನಾವು ಹಡಗಿನೊಂದಿಗೆ ಸಂಪರ್ಕ ಸ್ಥಾಪಿಸಲು ಸಾಧ್ಯವಾಗಿಲ್ಲ,” ಎಂದು ಯಾದವ್ ಸುದ್ದಿಸಂಸ್ಥೆಗೆ ತಿಳಿಸಿದರು.
“ನನಗೆ ಲಭ್ಯವಾದ ಇತ್ತೀಚಿನ ಮಾಹಿತಿಯ ಪ್ರಕಾರ, ಇಬ್ಬರು ನಾವಿಕರು ಸಾವನ್ನಪ್ಪಿದ್ದಾರೆ, ಮುಖ್ಯ ಇಂಜಿನಿಯರ್ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ' ಎಂದು ಹೇಳಿದರು.
ಸಾವನ್ನಪ್ಪಿದ ಹಾಗೂ ನಾಪತ್ತೆಯಾಗಿರುವ ಮೂವರು ಭಾರತೀಯರು ವಿಭಿನ್ನ ರಾಜ್ಯಗಳವರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. “ಈ ಮೂವರು ಹಿಮಾಚಲ ಪ್ರದೇಶ, ದೇಓರಿಯಾ (ಉತ್ತರ ಪ್ರದೇಶ) ಮತ್ತು ಆಂಧ್ರ ಪ್ರದೇಶದವರು,” ಎಂದು ಅವರು ಹೇಳಿದರು.
ಕೇಂದ್ರ ಸಚಿವರಿಂದ ಮಾಹಿತಿ
ಕೇಂದ್ರ ಹಡಗು ಸಚಿವ ಸರ್ಬಾನಂದ ಸೋನೋವಾಲ್ ಅವರು MT ಸೆಟ್ಟೆಬೆಲ್ಲೊ ಹಡಗಿನ ಮೂವರು ಭಾರತೀಯ ನಾವಿಕರ ದುರಂತ ಸಾವನ್ನು ದೃಢಪಡಿಸಿದ್ದು, ಒಮನ್ ಕರಾವಳಿಯಲ್ಲಿ ಹಡಗಿನ ಮೇಲೆ ಅಮೆರಿಕದ ಮಿಲಿಟರಿ ದಾಳಿಯನ್ನು ಭಾರತ ತೀವ್ರವಾಗಿ ಪ್ರತಿಭಟಿಸಿದೆ ಎಂದು ಹೇಳಿದ್ದಾರೆ.
'ಪಲಾವ್ ಧ್ವಜ ಹೊತ್ತ ಎಂಟಿ ಸೆಟ್ಟೆಬೆಲ್ಲೊ ಹಡಗಿನಲ್ಲಿ ನಡೆದ ದುರಂತ ಘಟನೆಯು ತೀವ್ರ ದುರದೃಷ್ಟಕರ. ದುಃಖಕರವೆಂದರೆ, ಆರಂಭದಲ್ಲಿ ಕಾಣೆಯಾಗಿದ್ದ ಮೂವರು ಭಾರತೀಯ ನಾವಿಕರ ಶವಗಳನ್ನು ಪತ್ತೆಹಚ್ಚಿ ಗುರುತಿಸಿದ ನಂತರ ಅವರು ಈಗ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ" ಎಂದು ಅವರು ಹೇಳಿದರು.
ಇದು "ನಮ್ಮ ಸಮುದ್ರ ಕುಟುಂಬಕ್ಕೆ ಭಾರಿ ನಷ್ಟ. ಈ ಕಷ್ಟದ ಸಮಯದಲ್ಲಿ ಮೋದಿ ಸರ್ಕಾರ ದುಃಖಿತರೊಂದಿಗೆ ದೃಢವಾಗಿ ನಿಲ್ಲುತ್ತದೆ ಮತ್ತು ಅವರ ಹತ್ತಿರದ ಸಂಬಂಧಿಕರನ್ನು ಬೆಂಬಲಿಸಲು ಸಂಪೂರ್ಣವಾಗಿ ಬದ್ಧವಾಗಿದೆ" ಎಂದು ಅವರು ಹೇಳಿದರು.
ರಕ್ಷಿಸಲ್ಪಟ್ಟ ಸಿಬ್ಬಂದಿಯನ್ನು ತಕ್ಷಣ ಸ್ವದೇಶಕ್ಕೆ ಕಳುಹಿಸಲು ಮತ್ತು ಮೃತರ ಮೃತದೇಹಗಳನ್ನು ಅವರ ಅಂತಿಮ ವಿಧಿವಿಧಾನಗಳಿಗಾಗಿ ತ್ವರಿತವಾಗಿ ಹಿಂದಿರುಗಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಸೋನೊವಾಲ್ ಹೇಳಿದರು.
ಅಮೆರಿಕ ಸೇನೆ ವಿರುದ್ಧ ಆಕ್ರೋಶ
ಅಮೆರಿಕದ ನೌಕಾಪಡೆಗೆ ಹಡಗಿನಲ್ಲಿದ್ದವರ ರಾಷ್ಟ್ರೀಯತೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇದ್ದೇ ಇರುತ್ತಿತ್ತು ಮತ್ತು ಹಡಗುಗಳು ಸೂಚನೆಗಳನ್ನು ಪಾಲಿಸದಿದ್ದರೆ ಅವುಗಳನ್ನು ವಶಕ್ಕೆ ಪಡೆಯಬಹುದಾಗಿತ್ತು ಎಂದು ಯಾದವ್ ಇದೇ ವೇಳೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಹಡಗಿನಲ್ಲಿ ಎಷ್ಟು ಭಾರತೀಯರು ಮತ್ತು ವಿದೇಶಿಗರು ಇದ್ದರು ಎಂಬ ಮಾಹಿತಿ ಅಮೆರಿಕಕ್ಕೆ ಇರಲಿಲ್ಲ ಎಂದು ನಾನು ನಂಬುವುದಿಲ್ಲ. ಅದು ಅಸಾಧ್ಯ. ಅಮೆರಿಕದ ನೌಕಾಪಡೆಗೆ ಎಲ್ಲ ವಿವರಗಳೂ ತಿಳಿದಿದ್ದವು ಎಂಬುದರಲ್ಲಿ ಶೇಕಡಾ 101 ರಷ್ಟು ಖಚಿತತೆ ಇದೆ. ಹಡಗುಗಳು ಅವರ ಸೂಚನೆಗಳನ್ನು ಪಾಲಿಸದಿದ್ದರೆ, ಅವುಗಳನ್ನು ಬಂಧಿಸುವುದು ಒಂದು ಪರ್ಯಾಯವಾಗಿತ್ತು,” ಎಂದು ಯಾದವ್ ಹೇಳಿದರು.
ಇದಕ್ಕೂ ಮುನ್ನ, ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಸೋಮವಾರ ಒಮನ್ ಕರಾವಳಿಯ ಬಳಿ MT Settebello ಹಡಗಿನ ಮೇಲೆ ನಡೆದ ದಾಳಿಯನ್ನು ಖಂಡಿಸಿತ್ತು. ಹಡಗಿನಲ್ಲಿ ಇದ್ದ 24 ಭಾರತೀಯ ಸಿಬ್ಬಂದಿಯಲ್ಲಿ 21 ಮಂದಿಯನ್ನು ರಕ್ಷಿಸಲಾಗಿದ್ದು, ಮೂವರು ಭಾರತೀಯರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಸಚಿವಾಲಯ ತಿಳಿಸಿತ್ತು.
“ಒಮನ್ ಕರಾವಳಿಯ ಬಳಿ ಇಂದು ನಡೆದ ವಾಣಿಜ್ಯ ಹಡಗು Settebello ಮೇಲಿನ ದಾಳಿಯನ್ನು ನಾವು ಖಂಡಿಸುತ್ತೇವೆ. ಹಡಗಿನಲ್ಲಿ ಇದ್ದ 24 ಭಾರತೀಯ ಸಿಬ್ಬಂದಿಯಲ್ಲಿ 21 ಮಂದಿಯನ್ನು ಇದುವರೆಗೆ ರಕ್ಷಿಸಲಾಗಿದೆ ಮತ್ತು 03 ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಒಮನ್ನಲ್ಲಿರುವ ನಮ್ಮ ರಾಯಭಾರಿ ಕಚೇರಿ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದು, ನಡೆಯುತ್ತಿರುವ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಒಮಾನ್ ಅಧಿಕಾರಿಗಳೊಂದಿಗೆ ಸಕ್ರಿಯವಾಗಿ ಸಮನ್ವಯ ಸಾಧಿಸುತ್ತಿದೆ,” ಎಂದು MEA ಹೇಳಿಕೆಯಲ್ಲಿ ತಿಳಿಸಿದೆ.