ಜೆರುಸಲೇಮ್: ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದರೂ ಪಶ್ಚಿಮ ಏಷ್ಯಾದಲ್ಲಿ ಮತ್ತೊಮ್ಮೆ ಉದ್ವಿಗ್ನತೆ ಉಂಟಾಗಿದ್ದು, ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ಪಡೆಗಳು ರಾತ್ರೋರಾತ್ರಿ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಕನಿಷ್ಠ 16 ಜನ ಮೃತಪಟ್ಟಿದ್ದಾರೆ.
ಲೆಬನಾನ್ ಮೇಲೆ ಇಸ್ರೇಲ್ ವಾಯುಪಡೆ ದಾಳಿ ಮುಂದುವರೆಸಿದ್ದು, ಬೆಕಾ ಕಣಿವೆಯಲ್ಲಿರುವ ಹೆಜ್ಬೊಲ್ಲಾ ಭಯೋತ್ಪಾದಕ ಸಂಘಟನೆಯ ಮೂಲಸೌಕರ್ಯದ ಮೇಲೆ ದಾಳಿ ಮಾಡಲಾಗಿದೆ. ಇದು ಹೆಜ್ಬೊಲ್ಲಾ ಭಯೋತ್ಪಾದಕ ಸಂಘಟನೆಯಿಂದ ಪದೇ ಪದೇ ಕದನ ವಿರಾಮ ಉಲ್ಲಂಘನೆಗೆ ಪ್ರತಿಕ್ರಿಯೆ" ಎಂದು ಹೇಳಿದೆ.
ಇರಾನ್ ಬೆಂಬಲಿತ ಹೆಜ್ಬೊಲ್ಲಾ ಭಯೋತ್ಪಾದಕರು ಪದೇಪದೆ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿದ್ದು, ದಾಳಿಯಲ್ಲಿ ಇಸ್ರೇಲ್ ನ 52ನೇ ಬೆಟಾಲಿಯನ್ನ ಕಮಾಂಡರ್ ಲೆಫ್ಟಿನೆಂಟ್ ಕರ್ನಲ್ ಡೋರ್ ಗೆಡಾಲಿಯಾ ಬೆನ್ ಸಿಮ್ಹಾನ್ (32) ಮೃತಪಟ್ಟಿದ್ದಾರೆ ಮತ್ತು ಐವರು ಸೈನಿಕರು ಗಾಯಗೊಂಡಿದ್ದಾರೆ. ಈ ದಾಳಿಗೆ ಪ್ರತೀಕಾರವಾಗಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.
ಈ ಹೊಸ ದಾಳಿಗಳ ಬಗ್ಗೆ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿರುವ ಇಸ್ರೇಲ್ ರಾಷ್ಟ್ರೀಯ ಭದ್ರತಾ ಸಚಿವ ಇಟಮರ್ ಬೆನ್ ಗ್ವಿರ್ ಅವರು, "ಇಡೀ ಲೆಬನಾನ್ ಸುಟ್ಟು ಬೂದಿ ಮಾಡಬೇಕು" ಎಂದು ಹೇಳಿದ್ದಾರೆ.
"ಇಸ್ರೇಲಿ ತಾಯಿಯ ಪ್ರತಿ ಕಣ್ಣೀರಿಗೆ, ಸಾವಿರ ಲೆಬನಾನ್ ತಾಯಂದಿರು ಅಳಬೇಕು. ಇಡೀ ಲೆಬನಾನ್ ಸುಡಬೇಕು! ಅಮೆರಿಕನ್ನರಿಗೆ ಎಲ್ಲಾ ಗೌರವಗಳೊಂದಿಗೆ, ನಮ್ಮ ಪುತ್ರರ ರಕ್ತ ಮತ್ತು ನಮ್ಮ ನಾಗರಿಕರ ಭದ್ರತೆಯನ್ನು ಕಳೆದುಕೊಳ್ಳುವುದಿಲ್ಲ ಎಂದು ಇಸ್ರೇಲ್ ಇಡೀ ಜಗತ್ತಿಗೆ ಸ್ಪಷ್ಟಪಡಿಸಬೇಕು. ಇಡೀ ಲೆಬನಾನ್ ಅನ್ನು ಸುಟ್ಟು ಬೂದಿ ಮಾಡಬೇಕು. ಇಸ್ರೇಲ್ ನಾಗರಿಕರು ಮತ್ತು ಐಡಿಎಫ್ ಸೈನಿಕರನ್ನು ರಕ್ಷಿಸುವುದು ನಮ್ಮ ಅತ್ಯುನ್ನತ ಕರ್ತವ್ಯವಾಗಿದೆ ಮತ್ತು ಈ ಬದ್ಧತೆಯು ಇತರ ಎಲ್ಲ ಪರಿಗಣನೆಗಳಿಗಿಂತ ಹೆಚ್ಚು ಆದ್ಯತೆಯಾಗಿದೆ" ಎಂದು ಗ್ವಿರ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗ್ವಿರ್ ಅವರು ಸಂಯಮದಿಂದ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದ್ದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಅದನ್ನೇ ತಿಳಿಸಿದ್ದಾರೆ.
ಲೆಬನಾನ್ನಲ್ಲಿ ಮುಂದುವರಿದಿರುವ ಈ ಹಿಂಸಾಚಾರ, ಅಮೆರಿಕಾ-ಇರಾನ್ ನಡುವಿನ ಹೊಸ ಶಾಂತಿ ಒಪ್ಪಂದಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ.
ಈ ಒಪ್ಪಂದದ ಪ್ರಕಾರ ಲೆಬನಾನ್ ಸೇರಿದಂತೆ ಸಂಘರ್ಷ ಪೀಡಿತ ಎಲ್ಲಾ ಪ್ರದೇಶಗಳಲ್ಲಿ ತಕ್ಷಣದ ಕದನ ವಿರಾಮ ಜಾರಿಯಾಗಬೇಕು ಹಾಗೂ ಲೆಬನಾನ್ನ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡಬೇಕು ಎಂದು ಉಲ್ಲೇಖಿಸಲಾಗಿದೆ.
ಆದರೆ, ಈ ವರ್ಷದ ಅಂತ್ಯದೊಳಗೆ ಚುನಾವಣೆ ಎದುರಿಸಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಹಿಜ್ಬುಲ್ಲಾ ಬೆದರಿಕೆ ಸಂಪೂರ್ಣವಾಗಿ ನಿವಾರಣೆಯಾಗುವವರೆಗೆ ಲೆಬನಾನ್ನಿಂದ ಇಸ್ರೇಲ್ ಸೇನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.