ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಗ್ಚಿ, 
ವಿದೇಶ

ಸ್ವಿಟ್ಜರ್ಲೆಂಡ್‌ನಲ್ಲಿ ಮಹಾ ಸಂಧಾನ: US-Iran ಹಸ್ತಲಾಘವ, ಹಿಜ್ಬುಲ್ಲಾ–ಇಸ್ರೇಲ್ ಸಂಘರ್ಷ ತಡೆಯಲು ಹೊಸ ಸಮನ್ವಯ ವ್ಯವಸ್ಥೆ ಜಾರಿಗೆ ಸಮ್ಮತಿ..!

ಪಾಕಿಸ್ತಾನ ಮತ್ತು ಕತಾರ್ ಮಧ್ಯಸ್ಥಿಕೆಯಲ್ಲಿ ನಡೆದ ಈ ಮಾತುಕತೆಯ ಮೊದಲ ಸುತ್ತು ಸೋಮವಾರ ಮುಕ್ತಾಯಗೊಂಡಿದ್ದು, ಮುಂದಿನ ಕೆಲವು ದಿನಗಳ ಕಾಲ ತಾಂತ್ರಿಕ ಮಟ್ಟದ ಚರ್ಚೆಗಳು ಮುಂದುವರಿಯಲಿವೆ.

ಮಧ್ಯಪ್ರಾಚ್ಯದಲ್ಲಿ ತಿಂಗಳುಗಳ ಕಾಲ ಮುಂದುವರಿದ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದ ಅಮೆರಿಕ–ಇರಾನ್ ಉನ್ನತ ಮಟ್ಟದ ಮಾತುಕತೆಗಳಲ್ಲಿ ಮಹತ್ವದ ಪ್ರಗತಿ ಸಾಧಿಸಲಾಗಿದೆ.

ಲೆಬನಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷವನ್ನು ನಿಯಂತ್ರಿಸಲು ಮತ್ತು ಕದನ ವಿರಾಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ವಿಶೇಷ 'ಡಿ-ಕಾನ್ಫ್ಲಿಕ್ಶನ್ ಸೆಲ್' (De-confliction Cell) ರಚಿಸಲು ಉಭಯ ದೇಶಗಳು ಒಪ್ಪಿಗೆ ನೀಡಿವೆ.

ಪಾಕಿಸ್ತಾನ ಮತ್ತು ಕತಾರ್ ಮಧ್ಯಸ್ಥಿಕೆಯಲ್ಲಿ ನಡೆದ ಈ ಮಾತುಕತೆಯ ಮೊದಲ ಸುತ್ತು ಸೋಮವಾರ ಮುಕ್ತಾಯಗೊಂಡಿದ್ದು, ಮುಂದಿನ ಕೆಲವು ದಿನಗಳ ಕಾಲ ತಾಂತ್ರಿಕ ಮಟ್ಟದ ಚರ್ಚೆಗಳು ಮುಂದುವರಿಯಲಿವೆ. ಈ ಬೆಳವಣಿಗೆಯನ್ನು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ "ದೊಡ್ಡ ಮುನ್ನಡೆ" ಎಂದು ಬಣ್ಣಿಸಿದ್ದಾರೆ.

ಮಧ್ಯಸ್ಥಿಕೆ ವಹಿಸಿದ್ದ ಪಾಕಿಸ್ತಾನ ಮತ್ತು ಕತಾರ್ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯ ಪ್ರಕಾರ, ಲೆಬನಾನ್ ಸರ್ಕಾರದ ಪ್ರತಿನಿಧಿಗಳನ್ನೂ ಒಳಗೊಂಡಿರುವ ಹೊಸ ವ್ಯವಸ್ಥೆಯ ಮೂಲಕ ಲೆಬನಾನ್‌ನಲ್ಲಿ ಸೇನಾ ಕಾರ್ಯಾಚರಣೆಗಳ ಅಂತ್ಯವನ್ನು ಖಚಿತಪಡಿಸುವ ಪ್ರಯತ್ನ ನಡೆಯಲಿದೆ. ಈ ವ್ಯವಸ್ಥೆಯ ಮುಖ್ಯ ಉದ್ದೇಶ, ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಘರ್ಷಣೆ ಮತ್ತಷ್ಟು ಉಲ್ಬಣವಾಗದಂತೆ ತಡೆಯುವುದಾಗಿದೆ.

ಇರಾನ್ ಆರಂಭದಿಂದಲೇ ಲೆಬನಾನ್‌ನಲ್ಲಿನ ಯುದ್ಧ ನಿಲ್ಲದೆ ಯಾವುದೇ ಶಾಂತಿ ಒಪ್ಪಂದ ಯಶಸ್ವಿಯಾಗುವುದಿಲ್ಲ ಎಂದು ವಾದಿಸುತ್ತಿತ್ತು. ಹೀಗಾಗಿ ಈ 'ಡಿ-ಕಾನ್ಫ್ಲಿಕ್ಶನ್ ಸೆಲ್' ಮುಂದಿನ ಮಾತುಕತೆಗಳ ಯಶಸ್ಸಿಗೆ ಮೊದಲ ಪರೀಕ್ಷೆಯಾಗಲಿದೆ ಎಂದು ಅರಾಘ್ಚಿ ಅಭಿಪ್ರಾಯಪಟ್ಟಿದ್ದಾರೆ.

ಆದಾಗ್ಯೂ ಲೆಬನಾನ್‌ನಲ್ಲಿ ಶಾಶ್ವತ ಶಾಂತಿ ಸ್ಥಾಪಿಸುವುದು ಇನ್ನೂ ಸವಾಲಿನ ಕೆಲಸವಾಗಿಯೇ ಉಳಿದಿದೆ. ಇಸ್ರೇಲ್, ತನ್ನ ಭದ್ರತೆಗೆ ಅಪಾಯವಿರುವವರೆಗೂ ದಕ್ಷಿಣ ಲೆಬನಾನ್‌ನಲ್ಲಿನ ಸೇನಾ ಹಾಜರಾತಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ. ಮತ್ತೊಂದೆಡೆ, ಇಸ್ರೇಲ್ ಪಡೆಗಳು ಹಿಂತೆಗೆದುಕೊಳ್ಳದ ಹೊರತು ದಾಳಿಗಳನ್ನು ನಿಲ್ಲಿಸುವುದಿಲ್ಲ ಎಂದು ಹಿಜ್ಬುಲ್ಲಾ ಹೇಳಿದೆ.

ಈ ನಡುವೆ ಮಾತುಕತೆಗಳ ಆರಂಭವೇ ಉದ್ವಿಗ್ನ ವಾತಾವರಣದಲ್ಲಿ ನಡೆದಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಲೆಬನಾನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಇರಾನ್ ಬೆಂಬಲಿತ ಗುಂಪುಗಳು ತಮ್ಮ ಚಟುವಟಿಕೆಗಳನ್ನು ತಕ್ಷಣ ನಿಲ್ಲಿಸದಿದ್ದರೆ ಮತ್ತೆ ಕಠಿಣ ಸೇನಾ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಟ್ರಂಪ್ ಅವರ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಇರಾನ್ ನಿಯೋಗ ಕೆಲಕಾಲ ಮಾತುಕತೆಯಿಂದ ಹೊರನಡೆದಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ಇರಾನ್ ಮುಖ್ಯ ಸಂಧಾನಕಾರ ಮೊಹಮ್ಮದ್ ಬಾಘರ್ ಖಾಲಿಬಾಫ್, ಅಮೆರಿಕ ತನ್ನ ಹೇಳಿಕೆಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು ಮತ್ತು ಇರಾನ್ ಸಶಸ್ತ್ರ ಪಡೆಗಳು ಯಾವುದೇ ಕ್ರಮಕ್ಕೆ ತಕ್ಕ ಪ್ರತಿಕ್ರಿಯೆ ನೀಡಲು ಸಿದ್ಧವಾಗಿವೆ ಎಂದು ಹೇಳಿದ್ದರು.

ಸುಮಾರು 80 ನಿಮಿಷಗಳ ಕಾಲ ನಡೆದ ಮೊದಲ ಸುತ್ತಿನ ಸಭೆಯಲ್ಲಿ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ವಿಶೇಷ ಪ್ರತಿನಿಧಿ ಸ್ಟೀವ್ ವಿಟ್‌ಕಾಫ್, ಜಾರೆಡ್ ಕುಶ್ನರ್ ಹಾಗೂ ಇರಾನ್ ನಿಯೋಗದ ಹಿರಿಯ ನಾಯಕರು ಭಾಗವಹಿಸಿದ್ದರು. ಸಭೆಯಲ್ಲಿ ಲೆಬನಾನ್ ಕದನ ವಿರಾಮ, ಹಾರ್ಮುಜ್ ಜಲಸಂಧಿಯ ಭದ್ರತೆ, ಇರಾನ್ ಅಣು ಕಾರ್ಯಕ್ರಮ ಮತ್ತು ಪ್ರಾದೇಶಿಕ ಸ್ಥಿರತೆ ಕುರಿತಂತೆ ಚರ್ಚೆ ನಡೆದಿರುವುದಾಗಿ ವರದಿಯಾಗಿದೆ.

ಅಮೆರಿಕದ ಪ್ರಮುಖ ಗುರಿ ಇರಾನ್ ಅನ್ನು ಅದರ ಅಣು ಕಾರ್ಯಕ್ರಮದ ಕುರಿತು ದೀರ್ಘಾವಧಿಯ ಮಾತುಕತೆಗೆ ಕರೆದೊಯ್ಯುವುದಾಗಿದೆ. ಅಣು ಕಾರ್ಯಕ್ರಮವನ್ನು ಶಾಂತಿಯುತ ಉದ್ದೇಶಗಳಿಗೆ ಮಾತ್ರ ಬಳಸಲಾಗುತ್ತಿದೆ ಎಂದು ಇರಾನ್ ಹೇಳುತ್ತಿದ್ದರೂ, ಅದನ್ನು ಸೇನಾ ಉದ್ದೇಶಗಳಿಗೆ ಬಳಸುವ ಸಾಧ್ಯತೆಯ ಬಗ್ಗೆ ಪಾಶ್ಚಾತ್ಯ ರಾಷ್ಟ್ರಗಳು ಆತಂಕ ವ್ಯಕ್ತಪಡಿಸುತ್ತಿವೆ.

ಇದಕ್ಕೆ ಸಮಾನವಾಗಿ, ಹಾರ್ಮುಜ್ ಜಲಸಂಧಿ ಮುಚ್ಚುವ ಬಗ್ಗೆ ಇರಾನ್ ಮಾಡಿರುವ ಹೇಳಿಕೆಗಳ ಬಗ್ಗೆಯೂ ಚರ್ಚೆ ನಡೆದಿದೆ. ವಿಶ್ವದ ತೈಲ ಸಾಗಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಈ ಜಲಸಂಧಿ ಮುಚ್ಚಿದರೆ ಜಾಗತಿಕ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.

ಮುಂದಿನ 60 ದಿನಗಳನ್ನು ಅತ್ಯಂತ ಮಹತ್ವದ ರಾಜತಾಂತ್ರಿಕ ಅವಧಿ ಎಂದು ಪರಿಗಣಿಸಲಾಗುತ್ತಿದ್ದು, ಈ ಅವಧಿಯಲ್ಲಿ ಶಾಶ್ವತ ಶಾಂತಿ ಒಪ್ಪಂದದ ರೂಪುರೇಷೆ ಸಿದ್ಧಪಡಿಸುವ ಗುರಿ ಹೊಂದಲಾಗಿದೆ. ಆದರೆ, ಲೆಬನಾನ್‌ನಲ್ಲಿ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಸಂಘರ್ಷ ಸಂಪೂರ್ಣವಾಗಿ ನಿಲ್ಲದಿದ್ದರೆ, ಅಮೆರಿಕ–ಇರಾನ್ ಮಾತುಕತೆಗಳ ಯಶಸ್ಸಿನ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್ ಬೆದರಿಕೆಗೆ ಇರಾನ್ ತಿರುಗೇಟು: ಶಾಂತಿ ಮಾತುಕತೆ ಮಧ್ಯೆಯೇ ವಾಕ್‌ಔಟ್‌; ಬೆದರಿಕೆಗಳಿಗೆ ಹೆದರಲ್ಲ-ನಮ್ಮ ತಾಳ್ಮೆ ಪರೀಕ್ಷಿಸಬೇಡಿ- ಅಮೆರಿಕಕ್ಕೆ ಕಠಿಣ ಎಚ್ಚರಿಕೆ

ಸಿಂಧೂ ನದಿ ನೀರು ತಡೆದರೆ ಸುಮ್ಮನಿರಲ್ಲ, ಯುದ್ಧ ಖಚಿತ: ಭಾರತದ ವಿರುದ್ಧ ಮತ್ತೆ ಉದ್ಧಟತನ ತೋರಿದ ಪಾಕಿಸ್ತಾನ..!

ಗೋಡ್ಸೆ ದೇಶದ ಮೊದಲ ಭಯೋತ್ಪಾದಕ: ದೇಶಕ್ಕಾಗಿ ಇಂದಿರಾ- ರಾಜೀವ್ ಗಾಂಧಿ ಪ್ರಾಣ ತ್ಯಾಗ; ಬಿ.ಕೆ ಹರಿಪ್ರಸಾದ್

ರಾಮನ ಹೆಸರಿನಲ್ಲಿ ಲೂಟಿ: ಸುಮಾರು 5,000 ಕೋಟಿ ರೂ ಹಣ ದುರ್ಬಳಕೆ, ಬಿಜೆಪಿ ವಿರುದ್ಧ ಖರ್ಗೆ ಕಿಡಿ!

ಶೀಘ್ರದಲ್ಲೇ ಪಂಚಾಯಿತಿ, ವಾರ್ಡ್ ಮಟ್ಟದಲ್ಲಿ ಗ್ಯಾರಂಟಿ ಸಮಿತಿ ರಚನೆ: ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆ- ಸಿಎಂ ಡಿಕೆ ಶಿವಕುಮಾರ್