ನವದೆಹಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆ ಕೊಚ್ಚಿಯ ಬಂದರಿನಲ್ಲಿ ಇರಾನಿನ ನೌಕಾ ಹಡಗನ್ನು ನಿಲ್ಲಿಸಲು ಅನುಮತಿ ನೀಡಿದ ಭಾರತದ ನಿರ್ಧಾರದ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಶನಿವಾರ ಮಾತನಾಡಿದ್ದಾರೆ.
2026 ರೈಸಿನಿಯಾ ಡೈಲಾಗ್ ನಲ್ಲಿ ಮಾತನಾಡಿದ ಜೈಶಂಕರ್, ಇರಾನ್ ನೌಕಾ ಹಡಗು ನಿಲ್ಲಿಸಲು ಅನುಮತಿ ಕುರಿತ ಘಟಾನಾವಳಿಗಳನ್ನು ವಿವರಿಸಿದರು. ಆ ಸಮಯದಲ್ಲಿ ಭಾರತದ ಗಡಿಗೆ ಸಮೀಪದಲ್ಲಿದ್ದ ಇರಾನ್ ಹಡಗುಗಳಲ್ಲಿ ಒಂದು ಸಮಸ್ಯೆಗೆ ಸಿಲುಕಿದ್ದು, ನಮ್ಮ ಬಂದರಿಗೆ ಬರಲು ಬಯಸಿದೆ ಎಂದು ಇರಾನ್ ನಿಂದ ನಮಗೆ ಸಂದೇಶ ಬಂದಿತು.
ತದನಂತರ ಭಾರತದೊಳಗೆ ಬರಬಹುದು, ಕೆಲವು ದಿನಗಳ ಕಾಲ ಇರಬಹುದು ಎಂದು ಮಾರ್ಚ್ 1 ರಂದು ನಾವು ಹೇಳಿದ್ದೇವು. ತದನಂತರ ಅವರು ಕೊಚ್ಚಿಯಲ್ಲಿ ಲಂಗರು ಹಾಕಿದರು. ಈ ಹಡಗು ಇಲ್ಲಿಗೆ ಬಂದಾಗ ಪರಿಸ್ಥಿತಿ ಸಂಪೂರ್ಣವಾಗಿ ವಿಭಿನ್ನವಾಗಿತ್ತು ಎಂದು ತಿಳಿಸಿದರು.
ಕಡಲ ಸಮರಭ್ಯಾಸ ಮಿಲನದಲ್ಲಿ ಪಾಲ್ಗೊಳ್ಳಲು ಇರಾನ್ ಹಡಗು ಬರುತಿತ್ತು. ಆದರೆ ಕಾರ್ಯಕ್ರಮ ಆಯೋಜನೆ ಸ್ಥಳದ ಬಗ್ಗೆ ಸರಿಯಾಗಿ ತಿಳಿಯದೆ ತಪ್ಪಾದ ಕಡೆಯಿಂದ ಬರುತ್ತಿದ್ದರು ಎಂದು ಜೈಶಂಕರ್ ವಿವರಿಸಿದರು. ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧದ ಸಂದರ್ಭದಲ್ಲಿ ಹಿಂದೂ ಮಹಾಸಾಗರದಲ್ಲಿ ಮೂರು ಇರಾನಿನ ಹಡಗುಗಳ ಸಂಚಾರ ಕುರಿತು ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಜೈಶಂಕರ್ ಈ ಮಾಹಿತಿ ನೀಡಿದರು.
ಇರಾನಿನ ಯುದ್ಧನೌಕೆ IRIS ದೇನಾವನ್ನು ಮಾ.4 ರಂದು ಶ್ರೀಲಂಕಾದ ಕರಾವಳಿಯಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆ ಮುಳುಗಿಸಿತ್ತು. ಭಾರತ ಆಯೋಜಿಸಿದ್ದ ನೌಕಾಪಡೆಗಳ ತಾಲೀಮು ‘ಮಿಲನ್’ನಲ್ಲಿ ಪಾಲ್ಗೊಂಡು ಮರಳುವ ವೇಳೆ ಹಡಗಿನ ಮೇಲೆ ಅಮೆರಿಕ ದಾಳಿ ನಡೆಸಿತ್ತು. ದಾಳಿಯಲ್ಲಿ ಕನಿಷ್ಠ 87 ಇರಾನಿನ ನಾವಿಕರು ಸಾವನ್ನಪ್ಪಿದ್ದಾರೆ.
ಕೊಲ್ಲಿ ಯುದ್ಧದ ಸಮಯದಲ್ಲಿ ಇರಾನಿನ ಮೂರು ಹಡಗುಗಳು ಹಿಂದೂ ಮಹಾಸಗರದಲ್ಲಿ ಸಂಚರಿಸುತ್ತಿದ್ದವು. IRIS ದೇನಾವನ್ನು ಅಮೆರಿಕ ಮುಳುಗಿಸಿದರೆ IRIS Lavan ಕೊಚ್ಚಿಯಲ್ಲಿ ಲಂಗರು ಹಾಕಿದೆ. IRIS ಬುಶೆಹರ್ ಹಡಗಿನಲ್ಲಿ ಎಂಜಿನ್ನಲ್ಲಿ ದೋಶ ಕಂಡು ಬಂದಿದ್ದರಿಂದ ಶ್ರೀಲಂಕಾದ ಟ್ರಿಂಕೋಮಲಿಯಲ್ಲಿ ಈಗ ನಿಂತಿದೆ.
ಕೊಚ್ಚಿಯ ಬಂದರಿನಲ್ಲಿ ಇರಾನಿನ ನೌಕಾ ಹಡಗನ್ನು ನಿಲ್ಲಿಸಲು ಭಾರತ ಮಾನವೀಯತೆ ದೃಷ್ಟಿಯಿಂದ ನಿರ್ಧಾರ ತೆಗೆದುಕೊಂಡಿದೆ ಎಂದು ಜೈಶಂಕರ್ ಸಮರ್ಥಿಸಿಕೊಂಡಿದ್ದಾರೆ.