ಅಬುಧಾಬಿ: ಪಶ್ಚಿಮ ಏಷ್ಯಾದಲ್ಲಿ ಶಾಂತಿ ನೆಲೆಸಲು ಭಾರತ "ಸಾಧ್ಯವಿರುವ ಎಲ್ಲ ರೀತಿಯ ಬೆಂಬಲ" ನೀಡಲು ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ಗಲ್ಫ್ ರಾಷ್ಟ್ರಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ ಅವರು, ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಪ್ರಧಾನಿ ಮೋದಿ ಅವರು ಐದು ರಾಷ್ಟ್ರಗಳ ಪ್ರವಾಸದ ಮೊದಲ ಹಂತದಲ್ಲಿ ಗಲ್ಫ್ ರಾಷ್ಟ್ರಕ್ಕೆ ಆಗಮಿಸಿದ್ದಾರೆ. ನಂತರ ನಾಲ್ಕು ಯುರೋಪಿಯನ್ ರಾಷ್ಟ್ರಗಳಾದ ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿಗೆ ಭೇಟಿ ನೀಡಲಿದ್ದಾರೆ.
ಯುಎಇ ಅಧ್ಯಕ್ಷರ ಜೊತೆ ನಡೆದ ಸಭೆಯ ಸಂದರ್ಭದಲ್ಲಿ ಮೋದಿ ತಮ್ಮ ಆರಂಭಿಕ ಭಾಷಣದಲ್ಲಿ, "ಯುಎಇ ಮೇಲಿನ ದಾಳಿಗಳನ್ನು ನಾವು ಖಂಡಿಸಿದ್ದೇವೆ" ಎಂದು ಹೇಳಿದರು.
ಅಮೆರಿಕದ ಪ್ರಮುಖ ಮಿಲಿಟರಿ ನೆಲೆಯನ್ನು ಹೊಂದಿರುವ ಯುಎಇ ಮೇಲೆ ಇರಾನ್ ಹಲವು ಬಾರಿ ದಾಳಿ ನಡೆಸಿದೆ.
"ಇರಾನ್, ಯುಎಇಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು ಸ್ವೀಕಾರಾರ್ಹವಲ್ಲ" ಎಂದು ಮೋದಿ ಹೇಳಿದರು. ಆದರೆ "ಯುಎಇ ಪ್ರಸ್ತುತ ಪರಿಸ್ಥಿತಿಯನ್ನು ಸಂಯಮದಿಂದ ನಿಭಾಯಿಸಿದ ರೀತಿ ಶ್ಲಾಘನೀಯ" ಎಂದು ಪ್ರಧಾನಿ ತಿಳಿಸಿದರು.
"ಪಶ್ಚಿಮ ಏಷ್ಯಾ ಸಂಘರ್ಷದ ಪರಿಣಾಮ ಇಡೀ ಜಗತ್ತಿನ ಮೇಲೆ ಬೀರುತ್ತಿದೆ. ಪಶ್ಚಿಮ ಏಷ್ಯಾದಲ್ಲಿ ಶಾಂತಿ ನೆಲೆಸಲು ಭಾರತ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಲು ಸಿದ್ಧವಾಗಿದೆ" ಎಂದು ಮೋದಿ ಹೇಳಿದರು.
ಯುಎಇ ಭೇಟಿಗೆ ನೀಡಿದ ಪ್ರಧಾನಿ ಮೋದಿ ಅವರನ್ನು ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಖುದ್ದು ವಿಮಾನ ನಿಲ್ದಾಣಕ್ಕೆ ಆಗಮಿಸಿ ಬರಮಾಡಿಕೊಂಡರು. ಇದು, ಪ್ರಧಾನಿ ಮೋದಿಯವರಿಗೆ ಯುಎಇ ಅಧ್ಯಕ್ಷ ಮೊಹಮ್ಮದ್ ಬಿಜ್ ಜಾಯೆದ್ ಅಲ್ ನಹ್ಯಾನ್ ನೀಡಿದ ವಿಶೇಷ ಗೌರವವಾಗಿತ್ತು.