ಶೇಖುಪುರಾ (ಪಾಕಿಸ್ತಾನ): ಮುಂಬೈ ಉಗ್ರರ ದಾಳಿಯ (26/11) ಮಾಸ್ಟರ್ಮೈಂಡ್ ಹಾಗೂ ಲಷ್ಕರ್-ಎ-ತೊಯ್ಬಾ (LeT) ಮುಖ್ಯಸ್ಥ ಹಫೀಜ್ ಸಯೀದ್ನ ಮಗ, ಜಾಗತಿಕ ಉಗ್ರ ಹಫೀಜ್ ತಲ್ಹಾ ಸಯೀದ್ ಭಾರತದ ವಿರುದ್ಧ ಮತ್ತೆ ವಿಷ ಕಾರಿದ್ದಾನೆ. ಪಾಕಿಸ್ತಾನದ ಶೇಖುಪುರಾದಲ್ಲಿ ಸಾರ್ವಜನಿಕ ಸಭೆಯೊಂದನ್ನುದ್ದೇಶಿಸಿ ಮಾತನಾಡಿದ ಈತ, "ನಾವು ಬದುಕಿರುವವರೆಗೂ ಮತ್ತು ನಮ್ಮಲ್ಲಿ ಶಕ್ತಿ ಇರುವವರೆಗೂ ಭಾರತದ ವಿರುದ್ಧ ಜಿಹಾದ್ ಮುಂದುವರಿಸುತ್ತೇವೆ" ಎಂದು ಉದ್ಧಟತನದ ಹೇಳಿಕೆ ನೀಡಿದ್ದಾನೆ. ಆ ಕುರಿತ ವರದಿ ಇಲ್ಲಿದೆ:
ಬದುಕಿರುವವರೆಗೂ ಜಿಹಾದ್
ಭಾರತ ಮತ್ತು ಅಮೆರಿಕ ಜಂಟಿಯಾಗಿ ಜಾಗತಿಕ ಉಗ್ರ ಎಂದು ಘೋಷಿಸಿರುವ ತಲ್ಹಾ ಸಯೀದ್, "ನಾವು ಪ್ರವಾದಿ ಮುಹಮ್ಮದ್ ಅವರ ಹೆಸರಿನಲ್ಲಿ ಜಿಹಾದ್ನ ಪ್ರಮಾಣ ವಚನ ಸ್ವೀಕರಿಸಿದ್ದೇವೆ. ಹಾಗಾಗಿ, ನಮ್ಮ ಉಸಿರಿರುವವರೆಗೂ ಈ ಜಿಹಾದ್ ಅಭಿಯಾನ ಮತ್ತು ತ್ಯಾಗಗಳು ನಿಲ್ಲುವುದಿಲ್ಲ" ಎಂದು ಶಪಥ ಮಾಡಿದ್ದಾನೆ. ಜೊತೆಗೆ, ಭಾರತದ ನಾಯಕರನ್ನು ಗುರಿಯಾಗಿಸಿಕೊಂಡು ಮಾತನಾಡಿದ ಉಗ್ರ ಸಯೀದ್, "ದೆಹಲಿಯಲ್ಲಿ ಕುಳಿತು ಪಾಕಿಸ್ತಾನದ ವಿರುದ್ಧ ಮಾತನಾಡುವವರು ಇತಿಹಾಸವನ್ನು ಮರೆತಿದ್ದಾರೆಯೇ? ಈ ಉಪಖಂಡದಲ್ಲಿ ಮುಸ್ಲಿಮರು 500 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದಾರೆ. ದೆಹಲಿ ಮತ್ತು ಹಿಂದೂಸ್ತಾನ್ ಯಾರಿಗೆ ಸೇರಿದ್ದು ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು" ಎಂದು ದೆಹಲಿಗೆ ಜಿಹಾದ್ ತರುವುದಾಗಿ ಬೆದರಿಕೆ ಹಾಕಿದ್ದಾನೆ.
ಇದೆ ವೇಳೆ, ತಲ್ಹಾ ಸಯೀದ್ ತನ್ನ ಭಾಷಣದಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಅವರನ್ನು ಶ್ಲಾಘಿಸಿ, ಆಸಿಮ್ ಮುನೀರ್ ಅವರು ಕುರಾನ್ ಪಠಣ ಮಾಡುವವರಾಗಿದ್ದು, ಪಾಕಿಸ್ತಾನ ಸೇನೆಯು ಮತ್ತೊಮ್ಮೆ 'ನಂಬಿಕೆ, ಧರ್ಮನಿಷ್ಠೆ ಮತ್ತು ಜಿಹಾದ್' ಪರಿಕಲ್ಪನೆಗೆ ಜೀವ ನೀಡುತ್ತಿದೆ ಎಂದು ಹೊಗಳಿದ್ದಾನೆ. ಈ ಮೂಲಕ ಉಗ್ರನೊಬ್ಬ ಸೇನಾ ಮುಖ್ಯಸ್ಥನನ್ನು ಬಹಿರಂಗವಾಗಿ ಶ್ಲಾಘಿಸಿರುವುದು ಪಾಕಿಸ್ತಾನ ಸೇನೆ ಹಾಗೂ ಲಷ್ಕರ್ ಉಗ್ರರ ನಡುವಿನ ಅಪವಿತ್ರ ಮೈತ್ರಿಯನ್ನು ಮತ್ತೊಮ್ಮೆ ಬಯಲು ಮಾಡಿದೆ.
ಯಾರು ಈ ತಲ್ಹಾ ಸಯೀದ್?
ಭಾರತ ಸರ್ಕಾರವು 2022 ರಲ್ಲೇ ತಲ್ಹಾ ಸಯೀದ್ನನ್ನು ಯುಎಪಿಎ ಕಾಯ್ದೆಯಡಿ ಭಯೋತ್ಪಾದಕ ಎಂದು ಘೋಷಿಸಿದೆ.ಭಾರತದ ವಿರುದ್ಧ ಉಗ್ರರನ್ನು ನೇಮಕ ಮಾಡಿಕೊಳ್ಳುವುದು, ಉಗ್ರ ಕೃತ್ಯಗಳಿಗೆ ನಿಧಿ ಸಂಗ್ರಹಿಸುವುದು ಮತ್ತು ಜಮ್ಮು-ಕಾಶ್ಮೀರ ಸೇರಿದಂತೆ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸುವ ಪ್ರಮುಖ ಜವಾಬ್ದಾರಿಯನ್ನು ಈತ ಹೊತ್ತಿದ್ದಾನೆ. ಸದ್ಯ ಹಫೀಜ್ ಸಯೀದ್ ಅನಾರೋಗ್ಯ ಪೀಡಿತನಾಗಿರುವುದರಿಂದ, ಲಷ್ಕರ್-ಎ-ತೊಯ್ಬಾ ಸಂಘಟನೆಯ ಸಂಪೂರ್ಣ ಪ್ರಚಾರ ಮತ್ತು ಉಗ್ರರ ನೇಮಕಾತಿಯ ಮುಂಚೂಣಿ ಜವಾಬ್ದಾರಿಯನ್ನು ತಲ್ಹಾ ಸಯೀದ್ ಮುನ್ನಡೆಸುತ್ತಿದ್ದಾನೆ ಎನ್ನಲಾಗಿದೆ.