ಗಾಂಧಿನಗರ: ಭಾರತದಲ್ಲಿ ಚೀನಾ ಸರಕುಗಳನ್ನು ಬಹಿಷ್ಕರಿಸಬೇಕೆಂಬ ಅಭಿಯಾನ ಪ್ರಾರಂಭವಾಗಿರುವುದು ಒಂದೆಡೆಯಾದರೆ ಮತ್ತೊಂದೆಡೆ ಗುಜರಾತ್ ನಲ್ಲಿ ಚೀನಾ ಹೂಡಿಕೆದಾರರನ್ನು ಸೆಳೆಯುವ ಯತ್ನ ನಡೆಯುತ್ತಿದೆ.
ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಸ್ವದೇಶೀ ವಸ್ತುಗಳನ್ನು ಉಪಯೋಗಿಸುವಂತೆ ಕರೆ ನೀಡಿದ್ದರೂ ಸಹ ವೈಬ್ರಂಟ್ ಗುಜರಾತ್ ಶೃಂಗಸಭೆಗಾಗಿ ಸರ್ಕಾರದ ಹಿರಿಯ ಅಧಿಕಾರಿಗಳು ವೈಬ್ರಂಟ್ ಗುಜರಾತ್ ಶೃಂಗಸಭೆಗಾಗಿ ಹೂಡಿಕೆದಾರರನ್ನು ಸೆಳೆಯಲು ಚೀನಾಗೆ ತೆರಳಿದ್ದಾರೆ. ಭಾರತ-ಚೀನಾ- ಹಾಂಕ್ ಕಾಂಗ್ ನಡುವಿನ ವ್ಯಾವಹಾರಿಕ ಸಂಬಂಧವನ್ನು ಬಲಪಡಿಸುವಲ್ಲಿ ಗುಜರಾತ್ ಪ್ರಮುಖ ಪಾತ್ರ ವಹಿಸುತ್ತದೆ.ಈ ಹಿನ್ನೆಲೆಯಲ್ಲಿ ಗುಜರಾತ್ ನ ಅಧಿಕಾರಿಗಳು ಚೀನಾಗೆ ತೆರಳಿ ಹೂಡಿಕೆದಾರರೊಂದಿಗೆ ಮಾತನಾಡಿದ್ದಾರೆ ಎಂದು ಗುಜರಾತ್ ನ ಕೃಷಿ ಹಾಗು ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.
2017 ರ ಜನವರಿಯಲ್ಲಿ ವೈಬ್ರಂಟ್ ಗುಜರಾತ್ ಶೃಂಗಸಭೆ ನಡೆಯಲಿದೆ. ಸ್ಥಳೀಯ ವ್ಯಾಪಾರ ಸಮುದಾಯ ಚೀನಾ ಸರಕುಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದರೂ ಮತ್ತೊಂದೆಡೆ ಸರ್ಕಾರದ ಪ್ರತಿನಿಧಿಗಳೇ ಚೀನಾಗೆ ತೆರಳಿ ಚೀನಾ ಹೂಡಿಕೆದಾರರನ್ನು ಭಾರತದಲ್ಲಿ ಹೂಡಿಕೆ ಮಾಡುವಂತೆ ಮಾತುಕತೆ ನಡೆಸುತ್ತಿದ್ದಾರೆ.
Advertisement