ರಾಜ್ಯದಲ್ಲಿ ಹೂಡಿಕೆ ಹೆಚ್ಚಳ: ಕಾನ್ಸುಲ್ ಜನರಲ್ ಜತೆ ಸಚಿವ ಎಂಬಿ ಪಾಟೀಲ ಚರ್ಚೆ

ಅಮೆರಿಕದ ಕಂಪನಿಗಳು ಕರ್ನಾಟಕದೊಂದಿಗೆ ಹೆಚ್ಚುಹೆಚ್ಚು ಆರ್ಥಿಕ ಸಹಭಾಗಿತ್ವ ಹೊಂದುವ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಅವರು ಇಲ್ಲಿನ ಭಾರತೀಯ ಕಾನ್ಸುಲ್ ಜನರಲ್ ಡಿ ಸಿ ಮಂಜುನಾಥ್ ಅವರೊಂದಿಗೆ ಭಾನುವಾರ ವಿಸ್ತೃತ ವಿಚಾರ ವಿನಿಮಯ ನಡೆಸಿದ್ದಾರೆ.
ರಾಜ್ಯದಲ್ಲಿ ಹೂಡಿಕೆ ಹೆಚ್ಚಳ: ಕಾನ್ಸುಲ್ ಜನರಲ್ ಜತೆ ಸಚಿವ ಎಂಬಿ ಪಾಟೀಲ ಚರ್ಚೆ

ಡಲ್ಲಾಸ್: ಅಮೆರಿಕದ ಕಂಪನಿಗಳು ಕರ್ನಾಟಕದೊಂದಿಗೆ ಹೆಚ್ಚುಹೆಚ್ಚು ಆರ್ಥಿಕ ಸಹಭಾಗಿತ್ವ ಹೊಂದುವ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಅವರು ಇಲ್ಲಿನ ಭಾರತೀಯ ಕಾನ್ಸುಲ್ ಜನರಲ್ ಡಿ ಸಿ ಮಂಜುನಾಥ್ ಅವರೊಂದಿಗೆ ಭಾನುವಾರ ವಿಸ್ತೃತ ವಿಚಾರ ವಿನಿಮಯ ನಡೆಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಕರ್ನಾಟಕ ಸರಕಾರ ಮತ್ತು ಅಮೆರಿಕ ಪರಸ್ಪರ ಲಾಭದಾಯಕವಾಗುವ ರೀತಿಯಲ್ಲಿ ಆರ್ಥಿಕ ಮತ್ತು ವಾಣಿಜ್ಯ ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳುವ ಒಲವು ಹೊಂದಿವೆ. ಇದಕ್ಕೆ ತಕ್ಕಂತೆ, ಹೂಡಿಕೆದಾರರಿಗೆ ನಷ್ಟವಾಗದಂತೆ ಸುಲಲಿತ ವಹಿವಾಟು ಸಂಸ್ಕೃತಿಯನ್ನು ಮತ್ತು ಅನಗತ್ಯವಾದ ಯಾವುದೇ ಕಠಿಣ ನಿಯಂತ್ರಣವಿಲ್ಲದಂತಹ ನೀತಿಗಳನ್ನು ಜಾರಿಗೆ ತರುವ ಖಾತ್ರಿ ನೀಡಲಾಗಿದೆ ಎಂದಿದ್ದಾರೆ.

ಐಟಿ, ಬಿಟಿ, ಎಲೆಕ್ಟ್ರಾನಿಕ್ಸ್, ಸೆಮಿ ಕಂಡಕ್ಟರ್, ವಿದ್ಯುತ್ ಚಾಲಿತ ವಾಹನ ತಯಾರಿಕೆ ಮುಂತಾದ ವಲಯಗಳಲ್ಲಿ ಕರ್ನಾಟಕವು ಪರಿಣತಿ ಹೊಂದಿದೆ. ಈ ಕ್ಷೇತ್ರಗಳಲ್ಲೇ ಅಮೆರಿಕದ ಕಂಪನಿಗಳೊಂದಿಗೆ ಹೆಚ್ಚಿನ ಸಹಭಾಗಿತ್ವ ಸ್ಥಾಪಿಸಿಕೊಳ್ಳುವುದು ಅಪೇಕ್ಷಣೀಯವಾಗಿದೆ. ಸ್ಪರ್ಧಾತ್ಮಕ ವಾತಾವರಣವಿದ್ದಾಗ ಇದು ಅಗತ್ಯವಾಗಿದ್ದು, ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಹರಿದು ಬರಲಿದೆ ಎಂದು ಅವರು ಹೇಳಿದ್ದಾರೆ.

ಅಮೆರಿಕ ಕೂಡ ಭಾರತದಂತೆಯೇ ಪ್ರಜಾಸತ್ತಾತ್ಮಕ ರಾಷ್ಟ್ರವಾಗಿರುವುದು ನಮಗೆ ಅನುಕೂಲಕರವಾಗಿದೆ. ಪಾಶ್ಚಾತ್ಯ ಜಗತ್ತಿನಲ್ಲಿ ಈ ದೇಶವು ಇಂದಿಗೂ ಬಲಾಢ್ಯ ಆರ್ಥಿಕತೆಯಾಗಿದೆ. ಚೀನಾದಿಂದ ನಮಗೆ ಎದುರಾಗುತ್ತಿರುವ ಸ್ಪರ್ಧೆಯನ್ನು ಎದುರಿಸಲು ನಮಗಿರುವ ಪರಿಣತಿಯನ್ನು ಮುನ್ನೆಲೆಗೆ ತರಬೇಕು. ಜೊತೆಗೆ ಹೂಡಿಕೆದಾರರಿಗೆ ನಷ್ಟವಾಗದಂತೆ ನೋಡಿಕೊಂಡು, ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಅಮೆರಿಕದ ಉದ್ಯಮಗಳೊಂದಿಗೆ ಕೈಜೋಡಿಸಬೇಕು ಎಂದು ಸಚಿವರು ಪ್ರತಿಪಾದಿಸಿದ್ದಾರೆ.

ರಾಜ್ಯದ ಹಿತದೃಷ್ಟಿಯಿಂದ ಸಹಭಾಗಿತ್ವ ಮತ್ತು ಹೂಡಿಕೆ ಎರಡೂ ಏರುತ್ತಾ ಹೋಗಬೇಕಾಗಿದೆ. ಇದು ಸಾಧ್ಯವಾಗಬೇಕೆಂದರೆ ಕೌಶಲ್ಯ ಪೂರೈಕೆ, ಕೈಗಾರಿಕಾ ರಂಗ ಮತ್ತು ಶಿಕ್ಷಣ ಕ್ಷೇತ್ರಗಳ ನಡುವೆ ಸಮನ್ವಯ, ಗುಣಮಟ್ಟದ ಕಲಿಕೆ ಎಲ್ಲವೂ ಇರುವಂತೆ ನೋಡಿಕೊಳ್ಳಬೇಕಿದ್ದು, ಇದಕ್ಕೆ ರಾಜ್ಯ ಸರಕಾರವು ಬದ್ಧವಾಗಿದೆ. ಇಂತಹ ದೂರದೃಷ್ಟಿ ಇಟ್ಟುಕೊಂಡೇ ಕರ್ನಾಟಕವು ಹಲವು ಉಪಯುಕ್ತ ನೀತಿಗಳನ್ನು ರೂಪಿಸಿದೆ ಎನ್ನುವುದನ್ನು ಕಾನ್ಸುಲ್ ಜನರಲ್ ಅವರ ಗಮನಕ್ಕೆ ತರಲಾಗಿದೆ ಎಂದು ಪಾಟೀಲ ವಿವರಿಸಿದ್ದಾರೆ.

ರಾಜ್ಯ ಸರಕಾರದ ನಿಯೋಗದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com