

ಮುಂಬೈ: ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿ ಭಾರತೀಯ ಷೇರು ಮಾರುಕಟ್ಟೆಯ ನಿದ್ದೆಗೆಡಿಸಿದೆ. ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 1,550 ಪಾಯಿಂಟ್ ಹಾಗೂ ನಿಫ್ಟಿ 500 ಪಾಯಿಂಟ್ಗಳ ಕುಸಿತ ಅನುಭವಿಸಿವೆ.
ಮಾರುಕಟ್ಟೆ ತೆರೆಯುತ್ತಿದ್ದಂತೆ ರಕ್ತಪಾತ ಮುಂದುವರಿದಿದೆ. ಸೆನ್ಸೆಕ್ಸ್ ಸುಮಾರು 1,550 ಅಂಕಗಳಷ್ಟು ಕುಸಿದು 72,977 ಮಟ್ಟಕ್ಕೆ ಇಳಿದರೆ, ನಿಫ್ಟಿ ಸುಮಾರು 500 ಅಂಕಗಳಷ್ಟು ಕುಸಿದು 22,634 ಮಟ್ಟಕ್ಕೆ ತಲುಪಿದೆ.
ಈ ಭಾರೀ ಕುಸಿತದಿಂದ ಕೆಲವೇ ನಿಮಿಷಗಳಲ್ಲಿ ಹೂಡಿಕೆದಾರರು 8 ಲಕ್ಷ ಕೋಟಿ ರೂ. ಹಣ ಕಳೆದುಕೊಂಡಿದ್ದಾರೆ. ಬಿಎಸ್ಇಯಲ್ಲಿ ಪಟ್ಟಿ ಹೊಂದಿರುವ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ ರೂ.429 ಲಕ್ಷ ಕೋಟಿಯಿಂದ ರೂ.421 ಲಕ್ಷ ಕೋಟಿಗೆ ಇಳಿಕೆಯಾಗಿದೆ.
ಈ ಕುಸಿತಕ್ಕೆ ಮುಖ್ಯ ಕಾರಣ ಮಧ್ಯ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಂಘರ್ಷ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ಗೆ ಕಠಿಣ ಎಚ್ಚರಿಕೆ ನೀಡಿದ್ದು, ಹಾರ್ಮುಜ್ ಜಲಸಂಧಿ ಮಾರ್ಗವನ್ನು ತೆರೆಯದಿದ್ದರೆ ವಿದ್ಯುತ್ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದಾಗಿ ನೀಡಿದ್ದಾರೆ.
ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ತಿರುಗೇಟು ನೀಡಿದ್ದು, ಇದರಿಂದ ಯುದ್ಧದ ಭೀತಿ ಮತ್ತಷ್ಟು ಹೆಚ್ಚಾಗಿದೆ. ಜಗತ್ತಿನ ಪ್ರಮುಖ ತೈಲ ಸಾಗಣೆ ಮಾರ್ಗವಾದ Strait of Hormuz ನಲ್ಲಿ ಉಂಟಾದ ವ್ಯತ್ಯಯ ಜಾಗತಿಕ ಮಾರುಕಟ್ಟೆಗಳಿಗೆ ದೊಡ್ಡ ಹೊಡೆತ ನೀಡಿದೆ.
ಈ ಪರಿಸ್ಥಿತಿಯು ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ $110 ರಿಂದ $115 ಏರಿಕೆಯಾಗುವಂತೆ ಮಾಡಿದೆ. ತೈಲ ಬೆಲೆ ಏರಿಕೆಯಿಂದ ಮುಂದಿನ ದಿನಗಳಲ್ಲಿ ದರ ಏರಿಕೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಇದರ ಪರಿಣಾಮ ಕಂಪನಿಗಳ ಮೇಲೆ ಬೀರಲಿದ್ದು, ಲಾಭಾಂಶ ಕಡಿಮೆಯಾಗುವ ಸಾಧ್ಯತೆ ಇದೆ. ಅಲ್ಲದೆ, ಆರ್ಥಿಕ ಸ್ಥಿರತೆಗೆ ಒತ್ತಡ ಉಂಟಾಗಲಿದೆ ಎಂದೂ ಹೇಳಲಾಗುತ್ತಿದೆ.
ಭಾರತೀಯ ಮಾರುಕಟ್ಟೆಯ ಕುಸಿತಕ್ಕೆ ಜಾಗತಿಕ ಮಾರುಕಟ್ಟೆಗಳ ಕುಸಿತವೂ ಕಾರಣವಾಗಿದೆ. ಜಪಾನ್ನ ನಿಕ್ಕಿ 225, ಚೀನಾದ ಶಾಂಘೈ ಕಾಂಪೋಸಿಟ್, ದಕ್ಷಿಣ ಕೊರಿಯಾದ ಕೋಸ್ಪಿ (KOSPI) ಸೂಚ್ಯಂಕಗಳು ಶೇ.2 ರಿಂದ ಶೇ.6 ವರೆಗೆ ಕುಸಿದಿವೆ.
ಇನ್ನೊಂದೆಡೆ ರೂಪಾಯಿ ಮೌಲ್ಯ ಡಾಲರ್ ವಿರುದ್ಧ 93.89 ಮಟ್ಟಕ್ಕೆ ಇಳಿದು ಇತಿಹಾಸದಲ್ಲೇ ಅತಿ ಕಡಿಮೆ ಮಟ್ಟ ತಲುಪಿದೆ. ವಿದೇಶಿ ಹೂಡಿಕೆದಾರರ ನಿರಂತರ ಮಾರಾಟ ಇದಕ್ಕೆ ಪ್ರಮುಖ ಕಾರಣವಾಗಿದೆ.
ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ ಮಾಹಿತಿಯ ಪ್ರಕಾರ, ಮಾರ್ಚ್ ತಿಂಗಳಲ್ಲಿ ಇದುವರೆಗೆ ವಿದೇಶಿ ಹೂಡಿಕೆದಾರರು (FII) ಷೇರು ವಿನಿಮಯಗಳ ಮೂಲಕ ರೂ.90,152 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ತಿಂಗಳ ಪ್ರತಿಯೊಂದು ವಹಿವಾಟಿನ ದಿನವೂ ವಿದೇಶಿ ಹೂಡಿಕೆದಾರರು ಮಾರಾಟಗಾರರಾಗಿ ಉಳಿದಿರುವುದು ಮಾರುಕಟ್ಟೆಯ ಮೇಲಿನ ಒತ್ತಡವನ್ನು ಹೆಚ್ಚಿಸಿದೆ ಎಂದು ತಿಳಿಸಿದೆ.
ಜಿಯೋಜಿತ್ ಇನ್ವೆಸ್ಟ್ಮೆಂಟ್ಸ್ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ಅವರು ಮಾತನಾಡಿ, ಮಧ್ಯ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಇದು ಯಾವಾಗ ಅಂತ್ಯಗೊಳ್ಳುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ಗೆ 48 ಗಂಟೆಗಳ ಗಡುವು ನೀಡಿ ಹೋರ್ಮುಜ್ ಸಮುದ್ರ ಮಾರ್ಗವನ್ನು ತೆರೆಯಲು ಎಚ್ಚರಿಕೆ ನೀಡಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ “ನಮ್ಮ ವಿರುದ್ಧ ತಿರುಗಿಬಿದ್ದವರನ್ನು ಹೊರತುಪಡಿಸಿ ಹಾರ್ಮುಜ್ ಜಲಸಂಧಿ ಎಲ್ಲರಿಗೂ ಮುಕ್ತವಾಗಿದೆ ಎಂದು ಹೇಳಿದೆ. ಈ ಹೇಳಿಕೆ ತೈಲ ಮಾರುಕಟ್ಟೆಯಲ್ಲಿ ಎದುರಾಗಿರುವ ಭೀತಿಯನ್ನು ತಾತ್ಕಾಲಿಕವಾಗಿ ತಗ್ಗಿಸಿದರೂ, ಅನಿಶ್ಚಿತತೆ ಇನ್ನೂ ಮುಂದುವರಿದಿದೆ.
ಯುದ್ಧದ ಪರಿಣಾಮ ಕೇವಲ ತೈಲ ಮಾರುಕಟ್ಟೆಯಲ್ಲಿ ಅಷ್ಟೇ ಅಲ್ಲದೆ, ಚಿನ್ನ ಮತ್ತು ಬೆಳ್ಳಿಯ ಮೇಲೂ ಪರಿಣಾಮ ಬೀರಿದೆ. ಚಿನ್ನ-ಬೆಳ್ಳಿ ಬೆಲೆಯಲ್ಲೂ ಕುಸಿತ ಕಂಡು ಬಂದಿದೆ. ಸಾಮಾನ್ಯವಾಗಿ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲ್ಪಡುವ ಚಿನ್ನವೇ ಹೆಚ್ಚು ಕುಸಿತ ಕಂಡಿರುವುದು ಗಮನಾರ್ಹ ವಿಚಾರವಾಗಿದೆ.
ಎಂಸಿಎಕ್ಸ್ನಲ್ಲಿ ಚಿನ್ನದ ಬೆಲೆ ಸೋಮವಾರ ಶೇ.3ರಷ್ಟು ಇಳಿಕೆಯಾಗಿದ್ದು 10 ಗ್ರಾಂ ಚಿನ್ನವು ರೂ.1,40,158 ರಿಂದ ರೂ.1,36,403ಕ್ಕೆ ಕುಸಿತ ಕಂಡಿದೆ.
ಪಶ್ಚಿಮ ಏಷ್ಯಾದ ಉದ್ವಿಗ್ನತೆ ಫೆಬ್ರವರಿ 28ರಂದು ಅಮೆರಿಕಾ-ಇಸ್ರೇಲ್ ಪಡೆಗಳು ಇರಾನ್ನ ಪ್ರಮುಖ ತಾಣಗಳ ಮೇಲೆ ದಾಳಿ ನಡೆಸಿದ ನಂತರ ಹೆಚ್ಚಾಯಿತು. ಇದಕ್ಕೆ ಪ್ರತಿಯಾಗಿ ಇರಾನ್ ರಾಷ್ಟ್ರವು ಇಸ್ರೇಲ್ ನಗರಗಳ ಜೊತೆಗೆ ಮಧ್ಯಪೂರ್ವದ ಪ್ರಮುಖ ಕೇಂದ್ರಗಳಾದ ದುಬೈ, ಕುವೈತ್, ಕತಾರ್, ಸೌದಿ ಅರೇಬಿಯಾ ಮತ್ತು ಬಹ್ರೇನ್ ಕಡೆಗೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರಯೋಗಿಸಿತು.
ಪ್ರಸ್ತುತ, ಅಮೆರಿಕ-ಇಸ್ರೇಲ್ ಮೈತ್ರಿ ಮತ್ತು ಇರಾನ್ ಪರಸ್ಪರ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ಮುಂದುವರೆಸುತ್ತಿದ್ದು, ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿಯೇ ಉಳಿದಿದೆ.
Advertisement