ಪ್ರಧಾನಿ ಮೋದಿಯಿಂದ ಹಾಸ್ಯ ನಟನಿಗೆ ಕಸಿವಿಸಿ

ಖ್ಯಾತ ಹಾಸ್ಯನಟ ರಾಜು ಶ್ರೀವಾತ್ಸವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯಿಂದಾಗಿ ತೀವ್ರ ಕಸಿವಿಸಿಗೆ ಒಳಗಾಗಿದ್ದಾರಂತೆ..
ಹಾಸ್ಯನಟ ರಾಜು ಶ್ರೀವಾತ್ಸವ್ (ಸಾಂದರ್ಭಿಕ ಚಿತ್ರ)
ಹಾಸ್ಯನಟ ರಾಜು ಶ್ರೀವಾತ್ಸವ್ (ಸಾಂದರ್ಭಿಕ ಚಿತ್ರ)

ಮುಂಬೈ: ಖ್ಯಾತ ಹಾಸ್ಯನಟ ರಾಜು ಶ್ರೀವಾತ್ಸವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯಿಂದಾಗಿ ತೀವ್ರ ಕಸಿವಿಸಿಗೆ ಒಳಗಾಗಿದ್ದಾರಂತೆ..

ಇಷ್ಟಕ್ಕೂ ರಾಜು ಶ್ರೀವಾತ್ಸವ್‌ಗೆ ಕಸಿವಿಸಿ ಉಂಟುಮಾಡುವಂತಹ ಯಾವ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು ಗೊತ್ತೆ..?

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ 'ಸ್ವಚ್ಛಭಾರತ ಅಭಿಯಾನ' ಕುರಿತಂತೆ ಇತ್ತೀಚೆಗೆ ವಾರಣಾಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಅಭಿಯಾನಕ್ಕಾಗಿ 9 ಗಣ್ಯರ ಹೆಸರನ್ನು ನಾಮಿನೇಟ್ ಮಾಡಿದ್ದರು. ಈ ಒಂಭತ್ತು ಜನರ ಪಟ್ಟಿಯಲ್ಲಿ ಖ್ಯಾತ ಹಾಸ್ಯನಟ ರಾಜು ಶ್ರೀವಾತ್ಸವ್ ಅವರು ಕೂಡ ಒಬ್ಬರಾಗಿದ್ದರು. ಆದರೆ ಈ ವಿಚಾರ ರಾಜು ಶ್ರೀವಾತ್ಸವ್ ಅವರಿಗೆ ತಿಳಿದೇ ಇರಲಿಲ್ಲವಂತೆ. ಅತ್ತ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ಪೊರಕೆ ಹಿಡಿದು ಕಸ ಗುಡಿಸುತ್ತಿದ್ದರೆ ಇತ್ತ ರಾಜು ಶ್ರೀವಾತ್ಸವ್ ಅವರು ತಮ್ಮ ಮನೆಯಲ್ಲಿ ಸುಖವಾಗಿ ಮಲಗಿದ್ದರಂತೆ.

ಕೊನೆಗೆ ರಾಜು ಅವರ ಸ್ನೇಹಿತರು ಕರೆ ಮಾಡಿ ಟಿ.ವಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನ ಹೆಸರು ಹೇಳುತ್ತಿದ್ದಾರೆ ಎಂದು ಹೇಳಿದಾಗಲೇ ರಾಜು ಶ್ರೀವಾತ್ಸವ್ ಟಿವಿ ಹಾಕಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಕೇಳಿದರಂತೆ. ಈ ವಿಚಾರವನ್ನು ಸ್ವತಃ ರಾಜು ಶ್ರೀವಾತ್ಸವ್ ಅವರೇ ಮಾಧ್ಯಮಗಳೊಂದಿಗೆ ಹೇಳಿಕೊಂಡಿದ್ದಾರೆ.

'ದೇಶದ ಪ್ರಧಾನಿಯಾದವರು ಬೆಳ್ಳಂಬೆಳಗ್ಗೆಯೇ ಎದ್ದು ಬೀದಿ ಬೀದಿಯ ಕಸ ಗುಡಿಸುತ್ತಿದ್ದರೆ ನಾನು ಮಾತ್ರ ಮನೆಯಲ್ಲಿ ಮಲಗಿದ್ದೇನೆ. ಇದು ನನಗೆ ತೀವ್ರ ಕಸಿವಿಸಿ ಉಂಟುಮಾಡಿತ್ತು. ಹೀಗಾಗಿ ನಾನು ಅಂದೇ ನಿರ್ಧರಿಸಿದ್ದೆ. ನಾನು ಯಾವುದೇ ಪ್ರದೇಶ, ಜಿಲ್ಲೆ, ಅಥವಾ ರಾಜ್ಯಕ್ಕೆ ತೆರಳಿ ಹಾಸ್ಯ ಕಾರ್ಯಕ್ರಮ ಮಾಡಿದರೂ ಮೊದಲು ಅಲ್ಲಿನ ಕಸ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಕಸವನ್ನು ತೆಗೆದ ಬಳಿಕವಷ್ಟೇ ಕಾರ್ಯಕ್ರಮದಲ್ಲಿ ಪಾಲ್ದೊಳ್ಳುತ್ತೇನೆ' ಎಂದು ರಾಜು ಶ್ರೀವಾತ್ಸವ್ ಶಪಥ ಮಾಡಿದ್ದಾರೆ.

ಪ್ರಸ್ತುತ ಮುಂಬೈನಲ್ಲಿರುವ ರಾಜು ಶ್ರೀವಾತ್ಸವ್ ಅವರು ಅಲ್ಲಿಯೇ ತಮ್ಮ ಸ್ವಚ್ಛಭಾರತ ಅಭಿಯಾನವನ್ನು ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ತಮ್ಮ ತವರು ರಾಜ್ಯವಾದ ಉತ್ತರ ಪ್ರದೇಶದ ಕಾನ್‌ಪುರದಲ್ಲಿ ಸ್ವಚ್ಛತಾ ಕಾರ್ಯ ಮಾಡುವುದಾಗಿ ರಾಜು ಹೇಳಿದ್ದಾರೆ. ಇದಲ್ಲದೇ ಬನಾರಸ್, ಲಖನೌ, ಅಲಹಾಬಾದ್‌ನಲ್ಲಿಯೂ ತಾವು ಹಾಸ್ಯ ಕಾರ್ಯಕ್ರಮ ನಡೆಸಿಕೊಡಲಿದ್ದು, ಅಲ್ಲಿಯೂ ಕಾರ್ಯಕ್ರಮಕ್ಕೆ ಮೊದಲು ಸ್ವಚ್ಛತಾ ಕಾರ್ಯ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

ಒಟ್ಟಾರೆ ಕಳೆದ ಅಕ್ಟೋಬರ್ 2ರಂದು ಪ್ರಾರಂಭವಾದ ನರೇಂದ್ರ ಮೋದಿ ಅವರ ಸ್ವಚ್ಛತಾ ಅಭಿಯಾನ ಆರಂಭವಾದ ದಿನದಿಂದ ಇಂದಿನವರೆಗೂ ಪ್ರತಿನಿತ್ಯ ತಡೆ ಇಲ್ಲದೇ ನಡೆಯುತ್ತಿದೆ. ಪ್ರಧಾನಿ ಹೇಳಿಕೆಯಿಂದ ಹಾಸ್ಯನಟ ರಾಜು ಶ್ರೀವಾತ್ಸವ್ ಅವರು ಪ್ರೇರಿತರಾಗಿದ್ದು, ರಾಜು ಅವರಿಂದ ಮತ್ತಷ್ಟು ಪ್ರೇರಿತರಾಗುತ್ತಾರೆಯೇ ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com