ಖ್ಯಾತ ಸಂಗೀತ ನಿರ್ದೇಶಕ ರವೀಂದ್ರ ಜೈನ್ ನಿಧನ
ಮುಂಬೈ: ಬಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಮತ್ತು ಸಾಹಿತಿ ರವೀಂದ್ರ ಜೈನ್ (71 ವರ್ಷ) ಅವರು ಶುಕ್ರವಾರ ನಿಧನರಾಗಿದ್ದು, ಅವರ ಪತ್ನಿ ದಿವ್ಯಾ ಮತ್ತು ಪುತ್ರ ಆಯುಶ್ ಅವರನ್ನು ಅಗಲಿದ್ದಾರೆ.
ಸಾಕಷ್ಟು ವರ್ಷಗಳಿಂದ ಬಹು ಅಂಗಾಂಗಳ ವೈಫಲ್ಯತೆಯಿಂದ ಬಳಲುತ್ತಿದ್ದ ರವೀಂದ್ರ ಜೈನ್ ಅವರು ಇಂದು ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಸಂಜೆ ಸುಮಾರು 4.10ರಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಮೂತ್ರದ ಸೋಂಕು ಖಾಯಿಲೆಯಿಂದ ಬಳಲುತ್ತಿದ್ದ ರವೀಂದ್ರ ಜೈನ್ ಅವರನ್ನು ಮೊದಲಿಗೆ ವೊಕ್ ಹಾರ್ಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಹೆಚ್ಚಿನ ಚಿಕಿತ್ಸೆಗಾಗಿ ಇತ್ತೀಚೆಗಷ್ಟೇ ಏರ್ ಆ್ಯಂಬುಲೆನ್ಸ್ ಮೂಲಕ ಬಾಂದ್ರಾದಲ್ಲಿರುವ ಲೀಲಾವತಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ರವೀಂದ್ರ ಜೈನ್ ಅವರು ನಿಧನರಾಗಿದ್ದಾರೆ.
70ರ ದಶಕದ ಅತ್ಯಂತ ಯಶಸ್ವೀ ಸಂಗೀತ ನಿರ್ದೇಶಕರಾಗಿದ್ದ ರವೀಂದ್ರ ಜೈನ್ ಅವರು, ಸೂಪರ್ ಸ್ಟಾರ್ ರಾಜ್ ಕಪೂರ್ ಅವರಿಗೆ ರಾಮ್ ತೇರಿ ಗಂಗಾ ಮೈಲಿ (೧೯೮೫) ಮೂಲಕ ದೊಡ್ಡ ಬ್ರೇಕ್ ನೀಡಿದ್ದರು. ಇದಲ್ಲದೆ ಚೋರ್ ಮಚಾಯೇ ಶೋರ್, ಗೀತ್ ಗಾತಾ ಚಲ್, ದೊ ಜಸೂಸ್, ಹೀನಾ, ಆಂಕಿಯೋನ್ ಕಿ ಜಾರ್ ಕೋನ್ ಸೆ ನಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದರು. 80ರ ದಶಕದಲ್ಲಿ ಸಾಕಷ್ಟು ಬಾಲಿವುಡ್ ಚಿತ್ರಗಳಿಗೆ ಸಂಗೀತ ನೀಡಿದ್ದ ರವೀಂದ್ರ ಜೈನ್, ಶ್ರೀ ಕೃಷ್ಣ, ಮಹಾಲಕ್ಷ್ಮಿ, ಆಲಿಫ್ ಲೈಲಾ, ಜೈ ಗಂಗಾ ಮೈಯ್ಯಾ, ಸಾಯಿ ಬಾಬಾ, ಜೈ ಹನುಮಾನ್ ಸೇರಿದಂತೆ ಹಲವು ಖ್ಯಾತ ಕಿರುತೆರೆ ಧಾರಾವಾಹಿಗಳಿಗೂ ಸಂಗೀತ ನೀಡುವ ಮೂಲಕ ಮನೆ ಮಾತಾಗಿದ್ದರು.
ರವೀಂದ್ರ ಜೈನ್ ಅವರ ನಿಧನಕ್ಕೆ ಬಾಲಿವುಡ್ ಗಣ್ಯರು ಕಂಬನಿ ಮಿಡಿದಿದ್ದಾರೆ.