ಮುಂಬಯಿ: ಖ್ಯಾತ ನಿರ್ದೇಶಕ ಕಮ್ ನಟ ಕರಣ್ ಜೋಹರ್ ಮತ್ತು ಅಜಯ್ ದೇವಗನ್ ಅವರ ಮುಸುಕಿನ ಗುದ್ದಾಟ ಬಹಿರಂಗವಾಗಿದೆ.
ನಿರ್ಮಾಪಕ ಕರಣ್ ಜೋಹರ್ ಮತ್ತು ಚಿತ್ರ ವಿಮರ್ಶಕ ಕಮಲ್ ಆರ್ ಖಾನ್ ಅವರ ವಿರುದ್ಧ ತನಿಖೆ ನಡೆಯುವಂತೆ ನಿರ್ಮಾಪಕರೂ ಆಗಿರುವ ಅಜಯ್ ದೇವಗನ್ ಒತ್ತಾಯಿಸಿದ್ದಾರೆ.
ಅಜಯ್ ದೇವಗನ್ ಅಭಿನಯದ 'ಶಿವಾಯ್' ಸಿನಿಮಾ ಮತ್ತು ಕರಣ್ ಜೋಹರ್ ನಿರ್ದೇಶನದ 'ಏ ದಿಲ್ ಹೈ ಮುಷ್ಕಿಲ್' ಚಿತ್ರಗಳು ಬಿಡುಗಡೆಗೆ ತಯಾರಾಗಿವೆ. ಈ ಹಿನ್ನೆಲೆಯಲ್ಲಿ ಶಿವಾಯ್ ಚಿತ್ರದ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡಿ, ಏ ದಿಲ್ ಹೈ ಮುಷ್ಕಿಲ್' ಸಿನಿಮಾವನ್ನು ಹೊಗಳಿ ಟ್ವಿಟ್ಟರ್ ನಲ್ಲಿ ಬರೆಯುವಂತೆ ಕರಣ್ ಜೋಹರ್ ಕಮಲ್ ಆರ್ ಖಾನ್ ಅವರಿಗೆ 25 ಲಕ್ಷ ರೂ ಹಣ ನೀಡಿದ್ದಾರೆ ಎಂದು ಅಜಯ್ ದೇವಗನ್ ಆರೋಪಿಸಿದ್ದಾರೆ.
ಈ ಎರಡೂ ಸಿನಿಮಾಗಳು ಒಟ್ಟೊಟ್ಟಿಗೆ (ಅಕ್ಟೋಬರ್ 28ಕ್ಕೆ) ಒಂದೇ ದಿನ ತೆರೆ ಕಾಣುತ್ತಿದೆ. ಆದ್ದರಿಂದ ಈ ಎರಡೂ ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಕ್ಲ್ಯಾಷ್ ಆಗೋದು ಪಕ್ಕಾ. ಆದರೆ ಕ್ಲ್ಯಾಷ್ ಆಗೋ ಮುನ್ನವೇ ಕರಣ್ ಜೋಹರ್ ಅವರು ಅಜಯ್ ದೇವಗನ್ ಅವರ ಸಿನಿಮಾದ ಮೇಲೆ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಅಜಯ್ ದೇವಗನ್ ಅವರು ದೂರಿದ್ದಾರೆ.
ಕಮಲ್ ಆರ್ ಖಾನ್ ಅವರು ಕರಣ್ ಜೋಹರ್ ಅವರ ಬಳಿಯಿಂದ ಬರೋಬ್ಬರಿ 25 ಲಕ್ಷ ಸ್ವೀಕರಿಸಿದ ವಿಚಾರವನ್ನು ನಿರ್ಮಾಪಕ ಕುಮಾರ್ ಮಂಗತ್ ಪಾಠಕ್ ಅವರ ಬಳಿ ಬಾಯಿ ಬಿಟ್ಟಿದ್ದಾರೆ. ಇದೀಗ ಇವರಿಬ್ಬರ ಫೋನ್ ಸಂಭಾಷಣೆ ಬಗ್ಗೆ ತನಿಖೆ ನಡೆಸಬೇಕು ಎಂದು ತೀವ್ರವಾಗಿ ಅಸಮಾಧಾನಗೊಂಡಿರುವ ಅಜಯ್ ದೇವಗನ್ ಆಗ್ರಹಿಸಿದ್ದಾರೆ.
ಕಳೆದ 25 ವರ್ಷಗಳಿಂದ ನಾನು ಸಿನಿಮಾ ಇಂಡಸ್ಟ್ರಿಯಲ್ಲಿದ್ದೇನೆ. ಸುಮಾರು 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ನನ್ನ ತಂದೆ ಸಾಹಸ ಚಿತ್ರ ನಿರ್ದೇಶಕರಾಗಿದ್ದರು. ನನಗೆ ಸಿನಿಮಾ ಉದ್ಯಮದ ಜೊತೆ ಭಾವನಾತ್ಮಕ ಸಂಬಂಧವಿದೆ. ಕಮಲ್ ಆರ್ ಖಾನ್ ಅಂತರು ಸಿನಿಮ ಇಂಡಸ್ಟ್ರಿಯನ್ನು ತಮ್ಮ ಮುಷ್ಠಿಯಲ್ಲಿ ಹಿಡಿದು ಇಟ್ಟುಕೊಂಡಿರುವುದರ ಬಗ್ಗೆ ನೋವುಂಟಾಗುತ್ತದೆ. ಹಣದ ಆಸೆಗಾಗಿ ಒಳ್ಳೆಯ ಸಿನಿಮಾಗಳ ಬಗ್ಗೆ ಕೆಟ್ಟದಾಗಿ ಪ್ರಚಾರ ಮಾಡಲಾಗುತ್ತಿದೆ ಎಂದು ಅಜಯ್ ದೇವಗನ್ ನೋವು ತೋಡಿಕೊಂಡಿದ್ದಾರೆ.
ನಮ್ಮ ಸಿನಿಮಾದವರೇ ಇಂಥವರಿಗೆ ಬೆಂಬಲ ನೀಡುತ್ತಿರುವುದು ದುಃಖದ ವಿಷಯವಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
Advertisement