ನಟಿ ಮಧುಬಾಲಾ ದಿಲೀಪ್ ಕುಮಾರ್ ಮತ್ತು ಪ್ರೇಮ್ ನಾಥ್ ರನ್ನು ಏಕಕಾಲದಲ್ಲಿ ಪ್ರೀತಿಸುತ್ತಿದ್ದರು: ಪುಸ್ತಕದಲ್ಲಿ ಬಹಿರಂಗ
ಮುಂಬೈ: ಹಿಂದಿ ಚಿತ್ರರಂಗದ ಮೇರು ಕಲಾವಿದರು, ಬಾಲಿವುಡ್ ಎವರ್ ಗ್ರೀನ್ ಹೀರೋ-ಹಿರೋಯಿಲ್ ಗಳಾದ ಮಧುಬಾಲಾ-ದಿಲೀಪ್ ಕುಮಾರ್ ಅವರ ಚಿತ್ರಗಳು ಎಷ್ಟು ಸದ್ದು ಮಾಡಿದ್ದವೊ ಅವರ ಖಾಸಗಿ ಪ್ರೀತಿ, ಪ್ರೇಮ-ಪ್ರಣಯದ ವಿಷಯಗಳು ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದವು. ಇದೀಗ ಅವರ ರೊಮ್ಯಾಂಟಿಕ್ ಬದುಕಿನ ಮತ್ತೊಂದು ವಿಷಯ ಸುದ್ದಿಯಾಗಿದೆ.
ಅದು ತ್ರಿನೇತ್ರ ಬಾಜ್ ಪೇಯಿ ಮತ್ತು ಅನ್ಷುಲ ಬಾಜ್ ಪೇಯಿ ಅವರ ಪುಸ್ತಕ ''ದಿಲೀಪ್ ಕುಮಾರ್: ಪೀರ್ ಲೆಸ್ ಐಕಾನ್ ಇನ್ಸ್ಪೈರಿಂಗ್ ಜನರೇಷನ್ಸ್'ನಲ್ಲಿ ಮಧುಬಾಲಾ ಅವರು ಹಿಂದಿ ಚಿತ್ರರಂಗದ ದಂತಕಥೆಗಳಾದ ದಿಲೀಪ್ ಕುಮಾರ್ ಮತ್ತು ಪ್ರೇಮ್ ನಾಥ್ ಅವರನ್ನು ಒಟ್ಟೊಟ್ಟಿಗೆ ಪ್ರೀತಿಸುತ್ತಿದ್ದರು ಎಂಬುದು.
ಬಾದಲ್ ಚಿತ್ರದಲ್ಲಿ ನಟಿಸುವ ಹೊತ್ತಿಗೆ ಮಧುಬಾಲಾ ಮತ್ತು ಪ್ರೇಮ್ ನಾಥ್ ಅವರು ಹತ್ತಿರವಾಗಿ ಪ್ರೀತಿಸಲಾರಂಭಿಸಿದ್ದರು. ಆದರೆ ಮಧುಬಾಲಾಗೆ ದಿಲೀಪ್ ಕುಮಾರ್ ಅವರ ಜೊತೆ ಕೂಡ ಪ್ರೀತಿಯಿದೆ ಎಂಬ ವಿಷಯ ಗೊತ್ತಾಗಿ ಪ್ರೇಮ್ ನಾಥ್ ಅವರೇ ದೂರವಾದರು ಎಂದು ದಿಲೀಪ್ ಕುಮಾರ್ ಅವರ ಬದುಕು, ವೃತ್ತಿ ಬಗ್ಗೆ ಬರೆದಿರುವ ಈ ಪುಸ್ತಕದಲ್ಲಿ ಹೇಳಲಾಗಿದೆ.
'ಆನ್' ಚಿತ್ರದಲ್ಲಿ ಒಟ್ಟಿಗೆ ನಟಿಸಿದ ನಂತರ ದಿಲೀಪ್ ಕುಮಾರ್ ಮತ್ತು ಪ್ರೇಮ್ ನಾಥ್ ಉತ್ತಮ ಗೆಳೆಯರಾಗಿದ್ದರು. ತನ್ನ ಗೆಳೆಯ ದಿಲೀಪ್ ಕುಮಾರ್ ಮಧುಬಾಲಾಳನ್ನು ತೀವ್ರವಾಗಿ ಪ್ರೀತಿಸುತ್ತಿದ್ದಾನೆ ಮತ್ತು ಮಧುಬಾಲಾ ಕೂಡ ದಿಲೀಪ್ ಮೇಲೆ ಪ್ರೀತಿ ಹೊಂದಿದ್ದಾಳೆ ಎಂದು ಗೊತ್ತಾದಾಗ ಆಕೆಯಿಂದ ಪ್ರೇಮ್ ನಾಥ್ ಅವರೇ ದೂರವಾದರು.
ನಂತರ ಪ್ರೇಮನಾಥ್ ಬಿನಾ ರೈ ಎಂಬಾಕೆಯನ್ನು ವಿವಾಹವಾದರು. ಆಮೇಲೆ ಮಧುಬಾಲಾ ಮತ್ತು ದಿಲೀಪ್ ಕುಮಾರ್ ನಡುವಿನ ಪ್ರೀತಿ ಸಂಬಂಧ ಕೂಡ ಹಳಸಿತು. ಇದಕ್ಕೆ ಮುಖ್ಯ ಕಾರಣ ಮಧುಬಾಲಾಳ ತಂದೆ ಅತ್ತೌಲ್ಲಾ ಖಾನ್ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಆ ಕಾಲದಲ್ಲಿ ಬೇಡಿಕೆಯ ನಟಿಯಾಗಿದ್ದ ಮಧುಬಾಲಾರ ಆದಾಯದ ಮೇಲೆ ಇಡೀ ಸಂಸಾರದ ನಿರ್ವಹಣೆ ಸಾಗುತ್ತಿತ್ತು. ಹೀಗಿರುವಾಗ ತನ್ನ ಮಗಳು ದಿಲೀಪ್ ಕುಮಾರ್ ನನ್ನು ಮದುವೆಯಾದರೆ ಆಕೆ ನಟಿಸುವುದನ್ನು ನಿಲ್ಲಿಸಿ ತಮ್ಮ ಕುಟುಂಬಕ್ಕೆ ಬರುವ ಆದಾಯ ನಿಲ್ಲುತ್ತದೆ ಎಂಬ ಆತಂಕದಿಂದ ಅತ್ತೌಲ್ಲಾ ಖಾನ್ ದಿಲೀಪ್ ಕುಮಾರ್ ಜೊತೆ ಮಗಳ ಮದುವೆ ತಪ್ಪಿಸಿದ್ದರು ಎಂದು ಜನ ಮಾತನಾಡಿಕೊಳ್ಳುತ್ತಿದ್ದರು.
ಆದರೆ ಈ ಪುಸ್ತಕದಲ್ಲಿ ಮಾತ್ರ ಬೇರೆ ರೀತಿಯಿದೆ. ದಿಲೀಪ್ ಮತ್ತು ಮಧುಬಾಲಾರ ಪ್ರೀತಿ-ಪ್ರಣಯದ ಉತ್ತುಂಗ ಸಮಯದಲ್ಲಿ ಅವರಿಬ್ಬರನ್ನೂ ಹಾಕಿಕೊಂಡು ಅತ್ತೌಲ್ಲಾ ಖಾನ್ ಒಂದು ಚಿತ್ರ ನಿರ್ಮಾಣ ಮಾಡಬೇಕೆಂದು ಯೋಚಿಸಿದ್ದರಂತೆ. ಅಷ್ಟೇ ಅಲ್ಲದೆ ದಿಲೀಪ್ ಕುಮಾರ್ ತಮ್ಮ ಬ್ಯಾನರಿನಡಿಯ ಚಿತ್ರಗಳಲ್ಲಿ ಮಾತ್ರ ನಟಿಸಬೇಕೆಂದು ಮಧುಬಾಲಾಳ ತಂದೆ ಷರತ್ತು ಹಾಕುತ್ತಿದ್ದರು. ಈ ಷರತ್ತುಗಳಿಗೆ ದಿಲೀಪ್ ಕುಮಾರ್ ಒಪ್ಪಲಿಲ್ಲ. ಬದಲಿಗೆ ನಟಿಸುವುದನ್ನು ನಿಲ್ಲಿಸಿ ಮದುವೆಯಾಗಲು ದಿಲೀಪ್ ಮಧುಬಾಲಾರಿಗೆ ಒತ್ತಡ ಹಾಕಿದ್ದರಂತೆ. ಇದಕ್ಕೆ ಆಕೆಯ ತಂದೆ ಒಪ್ಪದಿದ್ದಾಗ ವೈಮನಸ್ಸು ಉಂಟಾಗಿ ಇಬ್ಬರ ಸಂಬಂಧ ಮುರಿದುಬಿತ್ತು ಎಂದು ಪುಸ್ತಕದಲ್ಲಿ ಹೇಳಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ