ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಸುಶಾಂತ್ ಸಿಂಗ್ ರಜಪೂತ್ ಅವರದ್ದು ಆತ್ಮಹತ್ಯೆಯಲ್ಲಿ, ಅದು ಕೊಲೆ ಎಂದು ಶವ ಪರೀಕ್ಷೆ ಮಾಡಿದ್ದ ಶವಾಗಾರದ ಸಿಬ್ಬಂದಿ ಹೇಳಿದ್ದಾರೆ.
ಸುಶಾಂತ್ ಸಿಂಗ್ 2020ರ ಜೂನ್ 14 ರಂದು ಮುಂಬೈನ ತಮ್ಮ ಫ್ಲಾಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರನ್ನು ಕೊಲೆ ಮಾಡಲಾಗಿದೆ ಎಂಬ ವಾದಗಳು ಕೇಳಿಬಂದಿದ್ದವು. ಶವ ಪರೀಕ್ಷೆ ವರದಿಯಲ್ಲಿ ಆತ್ಮಹತ್ಯೆ ಎಂದು ಉಲ್ಲೇಖಿಸಲಾಗಿದ್ದರೂ, ಅದನ್ನು ಕೊಲೆ ಎಂದೇ ಸುಶಾಂತ್ ಸಿಂಗ್ ಕುಟುಂಬಸ್ಥರು ಹೇಳುತ್ತಿದ್ದರು.
ಇದಕ್ಕೆ ಪುಷ್ಟಿ ನೀಡುವಂತೆ ಮುಂಬೈನ ಕೂಪರ್ ಆಸ್ಪತ್ರೆ ಶವಾಗಾರದ ಸಿಬ್ಬಂದಿ ರೂಪಕುಮಾರ್ ಶಾ ಹೇಳಿಕೆ ನೀಡಿದ್ದಾರೆ. ಸುಶಾಂತ್ ಸಿಂಗ್ ಮೃತದೇಹ ನೋಡಿದಾಗ ಅದರ ಮೇಲೆ ಗಾಯದ ಗುರುತುಗಳಿದ್ದವು. ಈ ವಿಚಾರವನ್ನು ಅಧಿಕಾರಿಗಳಿಗೆ ಹೇಳಿದ್ದೆ. ಆದರೆ, ಅವರು ನನ್ನ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಸುಶಾಂತ್ ಸಿಂಗ್ ಅವರಿಗೆ ನ್ಯಾಯ ಸಿಗಬೇಕು, ತನಿಖಾ ಸಂಸ್ಥೆಗಳು ಕರೆದರೆ ಎಲ್ಲಾ ಸತ್ಯಾಂಶವನ್ನು ಅವರಿಗೆ ವಿವರಿಸುವುದಾಗಿ ರೂಪಕುಮಾರ್ ಶಾ ಹೇಳಿದ್ದಾರೆ.
Advertisement