ಮುಂಬೈ: ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರದ ಹಾಡುಗಳನ್ನು ಒಳಗೊಂಡಂತೆ ಸಿನಿಮಾದಲ್ಲಿ ಕೆಲ ಬದಲಾವಣೆಗಳನ್ನು ಮಾಡಬೇಕೆಂದು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ'ಗೆ(ಸಿಬಿಎಫ್ಸಿ) ಚಿತ್ರತಂಡಕ್ಕೆ ನಿರ್ದೇಶನ ನೀಡಿದೆ ಎಂದು ಅಧ್ಯಕ್ಷ ಪ್ರಸೂನ್ ಜೋಶಿ ಗುರುವಾರ ಹೇಳಿದ್ದಾರೆ.
ಮಂಡಳಿಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸ್ಪೈ ಆಕ್ಷನ್ ಥ್ರಿಲ್ಲರ್ನ ಪರಿಷ್ಕೃತ ಆವೃತ್ತಿಯನ್ನು ಸಲ್ಲಿಸಲು ಸಿಬಿಎಫ್ಸಿ ಯಶ್ ರಾಜ್ ಫಿಲ್ಮ್ಸ್ ಪ್ರೊಡಕ್ಷನ್ ಬ್ಯಾನರ್ಗೆ ಕೇಳಿದೆ ಎಂದು ಜೋಶಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆದರೆ, ಚಿತ್ರತಂಡಕ್ಕೆ ಸೂಚಿಸಿರುವ ಬದಲಾವಣೆಗಳೇನು ಎಂಬುದನ್ನು ಅವರು ವಿವರಿಸಿಲ್ಲ.
ಡಿಸೆಂಬರ್ 12 ರಂದು ಪಠಾಣ್ ಸಿನಿಮಾದ 'ಬೇಷರಂ ರಂಗ್' ಹಾಡು ಬಿಡುಗಡೆಯಾದ ನಂತರ ತೀವ್ರ ವಿವಾದ ಎದುರಿಸಿತು ಮತ್ತು ಸಿನಿಮಾವನ್ನು ನಿಷೇಧಿಸುವಂತೆ ಕೆಲವರು ಕರೆ ನೀಡಿದರು. ಹಾಡಿನಲ್ಲಿ ಕೇಸರಿ ಬಿಕಿನಿಯಲ್ಲಿ ದೀಪಿಕಾರನ್ನು ತೋರಿಸಿರುವುದು 'ಹಿಂದೂಗಳ ಭಾವನೆಗಳನ್ನು' ಘಾಸಿಗೊಳಿಸಿದೆ ಎಂದು ಆರೋಪಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆದವು. ಕಾರಣವಾಯಿತು.
ಚಿತ್ರವು ಇತ್ತೀಚೆಗೆ ಪ್ರಮಾಣಪತ್ರಕ್ಕಾಗಿ ಸಿಬಿಎಫ್ಸಿ ಪರೀಕ್ಷಾ ಸಮಿತಿಯನ್ನು ತಲುಪಿದೆ. ಇದೀಗ ಹಾಡುಗಳು ಸೇರಿದಂತೆ ಚಿತ್ರದಲ್ಲಿ ಕೆಲ ಬದಲಾವಣೆಗಳಿಗೆ ಸೂಚಿಸಲಾಗಿದೆ.
ಹಾಡುಗಳು ಸೇರಿದಂತೆ ಸಿನಿಮಾದಲ್ಲಿ ಮಂಡಳಿಯು ನೀಡಿರುವ ಸೂಚನೆಯಂತೆ ಬದಲಾವಣೆ ಮಾಡಲು ಮತ್ತು ಪರಿಷ್ಕೃತ ಆವೃತ್ತಿಯನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಮುನ್ನ ಮಂಡಳಿಗೆ ಸಲ್ಲಿಸಲು ಸಮಿತಿಯು ಚಿತ್ರತಂಡಕ್ಕೆ ಸೂಚನೆ ನೀಡಿದೆ ಎಂದು ಜೋಶಿ ಸುದ್ದಿಸಂಸ್ಥೆ ಪಿಟಿಐಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಿನಿಮಾ ತಯಾರಕರ ಸೃಜನಶೀಲತೆ ಮತ್ತು ಪ್ರೇಕ್ಷಕರ ಭಾವನೆಗಳ ನಡುವೆ ಸಮತೋಲನವನ್ನು ಸಾಧಿಸುವುದು ಮತ್ತು ಅದಕ್ಕೆ ಅನುಗುಣವಾಗಿ ಪರಿಹಾರವನ್ನು ಕಂಡುಹಿಡಿಯುವುದು ಸಿಬಿಎಫ್ಸಿಯ ಗುರಿಯಾಗಿದೆ ಎಂದು ಜೋಶಿ ಹೇಳಿದರು.
'ನಮ್ಮ ಸಂಸ್ಕೃತಿ ಮತ್ತು ನಂಬಿಕೆಯು ವೈಭವಯುತ, ಸಂಕೀರ್ಣ ಮತ್ತು ಸೂಕ್ಷ್ಮತೆಯಿಂದ ಕೂಡಿದೆ ಮತ್ತು ನಾವು ಇದನ್ನು ಗಮನಹರಿಸಬೇಕು. ನೈಜ ಮತ್ತು ಸತ್ಯದಿಂದ ದೂರವಿಡುವ ವಿಚಾರಗಳನ್ನು ವ್ಯಾಖ್ಯಾನಿಸುವುದಿಲ್ಲ ಎಂಬ ಬಗ್ಗೆ ನಾವು ಜಾಗರೂಕರಾಗಿರಬೇಕು. ಮತ್ತು ನಾನು ಮೊದಲೇ ಹೇಳಿದಂತೆ, ಚಿತ್ರತಂಡ ಮತ್ತು ಪ್ರೇಕ್ಷಕರ ನಡುವಿನ ನಂಬಿಕೆಯನ್ನು ರಕ್ಷಿಸಲು ಅತ್ಯಂತ ಮುಖ್ಯವಾಗಿದೆ. ಸಿನಿಮಾ ತಯಾರಕರು ಅದರ ಕಡೆಗೆ ಕೆಲಸ ಮಾಡುತ್ತಲೇ ಇರಬೇಕು' ಎಂದು ಜೋಶಿ ಹೇಳಿದರು.
ಸೂಚನೆಯ ಪ್ರಕಾರ, ಅಗತ್ಯ ಮಾರ್ಪಾಡುಗಳನ್ನು ಕೈಗೊಂಡ ನಂತರ ಮತ್ತು ಅಂತಿಮ ಪರಿಷ್ಕೃತ ಆವೃತ್ತಿಯನ್ನು ಸಲ್ಲಿಸಿದ ನಂತರವೇ ಸಿನಿಮಾಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
'ಬೇಷರಮ್ ರಂಗ್' ಹಾಡಿನ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದವರು ಮತ್ತು ಅದರಲ್ಲಿ ಬದಲಾವಣೆಗೆ ಒತ್ತಾಯಿಸಿದವರಲ್ಲಿ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಮತ್ತು ವಿಶ್ವ ಹಿಂದೂ ಪರಿಷತ್ ಸೇರಿದೆ.
ಮಧ್ಯಪ್ರದೇಶದ ಉಲೇಮಾ ಮಂಡಳಿಯು ಕೂಡ, 'ಇಸ್ಲಾಂ ಧರ್ಮವನ್ನು ತಪ್ಪಾಗಿ ಪ್ರತಿನಿಧಿಸುವುದಕ್ಕಾಗಿ' ಚಿತ್ರದ ಮೇಲೆ ನಿಷೇಧವನ್ನು ಕೋರಿದೆ.
ಹಾಡಿನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಶಾರುಖ್, ದೀಪಿಕಾ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಬಿಹಾರದ ಮುಜಾಫರ್ಪುರ ಜಿಲ್ಲೆಯ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ.
ಚಿತ್ರತಂಡ ಕಳೆದ ವಾರ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದೆ. ಜಾನ್ ಅಬ್ರಾಹಂ ಕೂಡ ನಟಿಸಿರುವ ಪಠಾಣ್ ಸಿನಿಮಾ ಮುಂದಿನ ವರ್ಷ ಜನವರಿ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
Advertisement