ರಾಜಕಾರಣಿಗಳು, ದೇಶವಿರೋಧಿಗಳ ವಿರುದ್ಧ ಮಾತನಾಡಿದ ನಂತರ ವರ್ಷಕ್ಕೆ 30-40 ಕೋಟಿ ರೂ. ನಷ್ಟವಾಗುತ್ತಿದೆ: ಕಂಗನಾ ರಣಾವತ್
ಮುಂಬೈ: 'ರಾಜಕಾರಣಿಗಳು, ದೇಶವಿರೋಧಿಗಳು, ತುಕ್ಡೆ-ತುಕ್ಡೆ ಗ್ಯಾಂಗ್' ವಿರುದ್ಧ ಮಾತನಾಡಿದ್ದರಿಂದ 25 ಬ್ರಾಂಡ್ ಜಾಹೀರಾತುಗಳಿಂದ ನನ್ನನ್ನು ಕೈಬಿಡಲಾಗಿದೆ ಮತ್ತು ಇದರಿಂದ ಪ್ರತಿ ವರ್ಷ 30-40 ಕೋಟಿ ರೂಪಾಯಿಗಳಷ್ಟು ನಷ್ಟವನ್ನು ಅನುಭವಿಸುತ್ತಿದ್ದೇನೆ ಎಂದು ನಟಿ ಕಂಗನಾ ರಣಾವತ್ ಹೇಳಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿರುವ ಅವರು, ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ ಅವರ ಸಂದರ್ಶನದ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ 'ಎಲಾನ್ ಮಸ್ಕ್ ಅವರು: ನನಗೆ ಬೇಕಾದುದನ್ನು ನಾನು ಹೇಳುತ್ತೇನೆ ಮತ್ತು ಅದರ ಪರಿಣಾಮವಾಗಿ ಹಣವನ್ನು ಕಳೆದುಕೊಳ್ಳುತ್ತಿದ್ದರೆ, ಹಾಗೆಯೇ ಇರಲಿ' ಎಂಬ ಶೀರ್ಷಿಕೆ ಇದೆ.
'ಇದು ಒಂದು ಪಾತ್ರ, ನಿಜವಾದ ಸ್ವಾತಂತ್ರ್ಯ ಮತ್ತು ಯಶಸ್ಸು, ಹಿಂದೂ ಧರ್ಮದ ಪರವಾಗ, ರಾಜಕಾರಣಿಗಳು/ದೇಶವಿರೋಧಿಗಳು/ತುಕ್ಡೆ ಗ್ಯಾಂಗ್ ವಿರುದ್ಧ ಮಾತನಾಡಿದ್ದಕ್ಕಾಗಿ ನನ್ನನ್ನು 20-25 ಬ್ರ್ಯಾಂಡ್ ಜಾಹೀರಾತುಗಳಿಂದ ತೆಗೆಯಲಾಗಿದೆ. ಅವರು ನನ್ನನ್ನು ರಾತ್ರೋರಾತ್ರಿ ಕೈಬಿಟ್ಟರು ಮತ್ತು ಅದರಿಂದ ವರ್ಷಕ್ಕೆ 30-40 ಕೋಟಿ ರೂಪಾಯಿಗಳು ನಷ್ಟವಾಗಿದೆ' ಎಂದಿದ್ದಾರೆ
ಆದರೆ, ನನಗೆ ಏನು ಬೇಕೋ ಅದನ್ನು ಹೇಳುವುದರಿಂದ ನನ್ನನ್ನು ಯಾವುದೂ ತಡೆಯಲು ಸಾಧ್ಯವಿಲ್ಲ ಎಂದು ಕಂಗನಾ ಹೇಳಿದ್ದಾರೆ.
'ಆದರೆ, ನಾನು ಸ್ವತಂತ್ರನಾಗಿದ್ದೇನೆ ಮತ್ತು ನನಗೆ ಬೇಕಾದುದನ್ನು ಹೇಳುವುದನ್ನು ಯಾವುದೂ ತಡೆಯಬಾರದು, ಭಾರತದ ಸಂಸ್ಕೃತಿ ಮತ್ತು ಸಮಗ್ರತೆಯನ್ನು ಧ್ವೇಷಿಸುವ ಅಜೆಂಡಾ ಚಾಲಿತ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಅವರ ಕಾರ್ಪೊರೇಟ್ ಬ್ರ್ಯಾಂಡ್ ಮುಖ್ಯಸ್ಥರು ನನಗೆ ಬೇಕಾಗಿಲ್ಲ. ನಾನು ಎಲಾನ್ ಅವರನ್ನು ಪ್ರಶಂಸಿಸುತ್ತೇನೆ. ಏಕೆಂದರೆ, ಪ್ರತಿಯೊಬ್ಬರೂ ದೌರ್ಬಲ್ಯಗಳನ್ನು ಮಾತ್ರ ಪ್ರದರ್ಶಿಸುತ್ತಾರೆ. ಶ್ರೀಮಂತ ವ್ಯಕ್ತಿಗಳು ತಮನಗನಿಸಿದ್ದನ್ನು ಹೇಳುತ್ತಾರೆ. ಅವರು, ಹಣಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ' ಎಂದು ಹೇಳಿದ್ದಾರೆ.
ಸದ್ಯ ಕಂಗನಾ ಅವರು 'ಎಮರ್ಜೆನ್ಸಿ', 'ತೇಜಸ್', 'ಚಂದ್ರಮುಖಿ 2', 'ಮಣಿಕರ್ಣಿಕಾ ರಿಟರ್ನ್ಸ್: ದಿ ಲೆಜೆಂಡ್ ಆಫ್ ದಿಡ್ಡಾ' ಮತ್ತು 'ದಿ ಇನ್ಕಾರ್ನೇಷನ್: ಸೀತಾ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.