

ಮಂಗಳೂರು/ಗೋವಾ/ಮುಂಬೈ: ಗೋವಾದಲ್ಲಿ ನಡೆದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ʼಕಾಂತಾರ ಚಾಪ್ಟರ್ 1’ ಚಿತ್ರದ ದೈವವನ್ನು ದೆವ್ವ ಎಂದಿದ್ದು, ನಟ ನಿರ್ಗೇಶಕ ರಿಷಬ್ ಶೆಟ್ಟಿ ನಟನೆಯನ್ನು ತಮಾಷೆಯಾಗಿ ಅನುಕರಣೆ ಮಾಡಿ ವಿವಾದಕ್ಕೀಡಾಗಿತ್ತು.
ʼಕಾಂತಾರʼ ಚಿತ್ರದ ದೈವವನ್ನು ‘ಹೆಣ್ಣು ದೆವ್ವ’ ಎಂದು ಹೇಳಿ ರಣವೀರ್ ಟೀಕೆಗೆ ಗುರಿಯಾಗಿದ್ದು, ಅವರು ಕ್ಷಮೆಯಾಚಿಸಬೇಕು ಎಂದು ವ್ಯಾಪಕ ಆಗ್ರಹ ಕೇಳಿ ಬಂದಿದೆ. ಕರಾವಳಿಯ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ರಣವೀರ್ ಸಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೇಮ್ ಆನ್ ಯು ರಣವೀರ್ ಸಿಂಗ್ ಹ್ಯಾಶ್ ಟಾಗ್ ಎಕ್ಸ್ ನಲ್ಲಿ ಟ್ರೆಂಡಿಂಗ್ ಆಗಿದೆ. ಅಲ್ಲದೆ ಅವರ ಮುಂಬರುವ ಚಿತ್ರ ಧುರಂಧರ್ ಚಿತ್ರವನ್ನು ಯಾರೂ ವೀಕ್ಷಿಸಬಾರದು, ಬಹಿಷ್ಕರಿಸಬೇಕು ಎಂಬ ಕೂಗು ಕೇಳಿಬರುತ್ತಿದೆ.
ಹಿಂದೂ ಜಾಗೃತಿ ಸಂಘಟನೆ ಕಾರ್ಯಕರ್ತರು ಪೊಲೀಸರಿಗೆ ರಣವೀರ್ ಸಿಂಗ್ ವಿರುದ್ಧ ದೂರು ನೀಡಿದ್ದಾರೆ.
ತುಳುನಾಡಿನ ದೈವಾರಾಧಕರೂ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ನಟ ರಿಷಬ್ ಶೆಟ್ಟಿ ಅವರನ್ನು ಶ್ಲಾಘಿಸುತ್ತಾ, “ನಾನು ಥಿಯೇಟರ್ನಲ್ಲಿ “ನಾನು ಥಿಯೇಟರ್ನಲ್ಲಿ ‘ಕಾಂತಾರ ಚಾಪ್ಟರ್ 1’ ನೋಡಿದೆ. ನಿಮ್ಮ ಅಭಿನಯ ಅದ್ಭುತವಾಗಿತ್ತು, ವಿಶೇಷವಾಗಿ ಹೆಣ್ಣು ದೆವ್ವ ನಿಮ್ಮ ಮೈಸೇರುವ ದೃಶ್ಯವಂತೂ ಅತ್ಯದ್ಭುತವಾಗಿತ್ತು” ಎಂದು ಹೇಳಿ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು ರಣವೀರ್ ಸಿಂಗ್ ಅನುಕರಣೆ ಮಾಡಿದ್ದಾರೆ. ಆದರೆ ಹಾಗೆ ಮಾಡುವಾಗ ತಮಾಷೆಯ ರೀತಿಯಲ್ಲಿ ರಣವೀರ್ ಸಿಂಗ್ ಅನುಕರಣೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ನಟ ರಣವೀರ್ ಸಿಂಗ್ ಸ್ಪಷ್ಟನೆ: ಕಾಂತಾರ ಅನುಕರಣೆ ವಿವಾದದ ಬಗ್ಗೆ ಇಂದು ಮೌನ ಮುರಿದ ರಣವೀರ್ ಸಿಂಗ್, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಕಾಂತಾರ ಅಧ್ಯಾಯ 1 ರಲ್ಲಿ ರಿಷಬ್ ಅವರ ಅದ್ಭುತ ಅಭಿನಯವನ್ನು ಎತ್ತಿ ತೋರಿಸುವುದು ತಮ್ಮ ಉದ್ದೇಶವಾಗಿತ್ತು ಹೊರತು ಬೇರೇನೂ ಅಲ್ಲ,ನಾನು ಭಾರತದಲ್ಲಿನ ಪ್ರತಿಯೊಂದು ಸಂಸ್ಕೃತಿ, ಸಂಪ್ರದಾಯ ಮತ್ತು ನಂಬಿಕೆಯನ್ನು ಗೌರವಿಸುತ್ತೇನೆ ಎಂದಿದ್ದಾರೆ.
ಧುರಂಧರ್ ಸಿನಿಮಾ ಡಿಸೆಂಬರ್ 5ರಂದು ತೆರೆಗೆ ಬರುತ್ತಿದೆ. ರಣವೀರ್ ಸಿಂಗ್ ಅವರ ಕಾಂತಾರ ವಿವಾದ ಚಿತ್ರತಂಡಕ್ಕೆ, ಚಿತ್ರದ ಯಶಸ್ಸಿಗೆ ಮೈನಸ್ ಆಗುವ ಸಾಧ್ಯತೆಯಿದೆ. ರಣವೀರ್ ಸಿಂಗ್ ಅವರು ಇತ್ತೀಚೆಗೆ ಸಾಲು ಸಾಲು ಸೋಲು ಕಂಡಿದ್ದಾರೆ.
Advertisement