ತನುಶ್ರೀ ದತ್ತಾ
ತನುಶ್ರೀ ದತ್ತಾ

ನನ್ನ ಮನೆಯಲ್ಲೇ ನನಗೆ ಕಿರುಕುಳ; ದಯವಿಟ್ಟು ಯಾರಾದರೂ ಸಹಾಯ ಮಾಡಿ: ವಿಡಿಯೋ ಮಾಡಿ ಅಂಗಲಾಚಿದ ನಟಿ ತನುಶ್ರೀ ದತ್ತಾ!

ನಾನು ಈ ಕಿರುಕುಳದಿಂದ ಬೇಸತ್ತು ಹೋಗಿದ್ದೇನೆ. ಇದು 2018 ರಿಂದ ನಡೆಯುತ್ತಿದೆ. ಕೊನೆಗೆ ಬೇಸತ್ತು ಪೊಲೀಸರಿಗೆ ಫೋನ್ ಮಾಡಿದ್ದೆ. ದಯವಿಟ್ಟು ಯಾರಾದರೂ ನನಗೆ ಸಹಾಯ ಮಾಡಿ.
Published on

ಮುಂಬೈ: ಬಾಲಿವುಡ್ ನಟಿ ತನುಶ್ರೀ ದತ್ತಾ ಶಾಕಿಂಗ್ ವೀಡಿಯೋ ಹಂಚಿಕೊಂಡಿದ್ದಾರೆ. ನನ್ನ ಮನೆಯಲ್ಲೇ ನನಗೆ ಕಿರುಕುಳ ಕೊಡುತ್ತಿದ್ದಾರೆ. ಯಾರಾದರೂ ಕಾಪಾಡಿ ಎಂದು ವೀಡಿಯೋ ಮಾಡಿ ಅತ್ತಿದ್ದಾರೆ. ಕೆಲ ವರ್ಷಗಳಿಂದ ನನಗೆ ಹೀಗೆ ಹಿಂಸೆ ಕೊಡುತ್ತಿದ್ದಾರೆ. ಮನೆ ಕೆಲಸದವರನ್ನು ಸೇರಿಸಿಕೊಂಡರೆ ಅವ್ರು ನನ್ನ ವಸ್ತುಗಳನ್ನು ಕದಿಯುತ್ತಾರೆ ಎಂದು ತನುಶ್ರೀ ಹೇಳಿದ್ದಾರೆ.

ನಾನು ಈ ಕಿರುಕುಳದಿಂದ ಬೇಸತ್ತು ಹೋಗಿದ್ದೇನೆ. ಇದು 2018 ರಿಂದ ನಡೆಯುತ್ತಿದೆ. ಕೊನೆಗೆ ಬೇಸತ್ತು ಪೊಲೀಸರಿಗೆ ಫೋನ್ ಮಾಡಿದ್ದೆ. ದಯವಿಟ್ಟು ಯಾರಾದರೂ ನನಗೆ ಸಹಾಯ ಮಾಡಿ. ತಡವಾಗುವ ಮುನ್ನ ಏನಾದರೂ ಮಾಡಿ" ಎಂದು ಕ್ಯಾಪ್ಷನ್ ಬರೆದು ಇನ್‌ಸ್ಟಾಗ್ರಾಮ್‌ನಲ್ಲಿ ತನುಶ್ರೀ ದತ್ತಾ ವೀಡಿಯೋ ಪೋಸ್ಟ್ ಮಾಡಿದ್ದಾರೆ.

ನನ್ನ ಮನೆಯಲ್ಲೇ ನನಗೆ ಕಿರುಕುಳ ನೀಡಲಾಗುತ್ತಿದೆ. ಈ ಬಗ್ಗೆ ನಾನು ಪೊಲೀಸರಿಗೆ ಕರೆ ಮಾಡಿ ಹೇಳಿದ್ದೇನೆ. ಠಾಣೆಗೆ ಬಂದು ದೂರು ದಾಖಲಿಸುವಂತೆ ಪೊಲೀಸರು ನನಗೆ ಹೇಳಿದ್ದಾರೆ. ನನಗೆ ಆರೋಗ್ಯ ಸರಿಯಿಲ್ಲ. ಕಳೆದ ಐದು ವರ್ಷಗಳಿಂದ ತುಂಬಾ ಕಿರುಕುಳ ಅನುಭವಿಸುತ್ತಿದ್ದು, ನನ್ನ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ ಎಂದು ಹೇಳಿಕೊಂಡಿದ್ದಾರೆ.

ನನ್ನ ಮನೆಯ ಹೊರಗಿನಿಂದ ಜೋರಾದ ಶಬ್ದ ಕೇಳಿಬರುತ್ತದೆ. ಒಮ್ಮೊಮ್ಮೆ ಮನೆಯ ಬಾಗಿಲು ಬಡಿಯುತ್ತಾರೆ. ಮನೆ ಕೆಲಸಕ್ಕೆಂದು ಬಂದು ಕಳ್ಳತನ ಮಾಡುತ್ತಾರೆ. ಈ ಬಗ್ಗೆ ಕಟ್ಟಡದ ಆಡಳಿತ ಮಂಡಳಿಗೆ ತಿಳಿಸಿದ್ದೇನೆ. ಆದರೆ, ಅದರಿಂದ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ನನಗೆ ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲಸದವರ ಮೇಲೂ ನಂಬಿಕೆ ಕಳೆದುಕೊಂಡಿದ್ದರಿಂದ ಕೆಲಸಕ್ಕಾಗಿ ಯಾರನ್ನು ನೇಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ಸಮಸ್ಯೆ ನಡುವೆಯೇ ಮನೆಯ ಎಲ್ಲಾ ಕೆಲಸವನ್ನು ನಾನೇ ಮಾಡಿಕೊಳ್ಳುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಕಿರುಕುಳಗಳ ನಡುವೆಯೇ ನಾನು ಬದುಕು ಸಾಗಿಸುತ್ತಿದ್ದೇನೆ. ಇದರಿಂದ ನನ್ನ ಮನಸ್ಸನ್ನು ಬೇರೆಡೆ ಸೆಳೆಯಲು ಪ್ರಯತ್ನ ಮಾಡುತ್ತಿದ್ದೇನೆ. ಹೊರಗಿನ ಶಬ್ಧ ಕೇಳದಿರಲೆಂದು ಹೆಡ್‌ಫೋನ್‌ ಹಾಕಿಕೊಂಡೇ ಕುಳಿತುಕೊಳ್ಳುತ್ತೇನೆ ಎಂದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನನಗೆ ಸಹಾಯ ಬೇಕಿದೆ. ದಯವಿಟ್ಟು ಯಾರಾದರೂ ಸಹಾಯ ಮಾಡಿ ಎಂದು ಅಂಗಲಾಚಿದ್ದಾರೆ.

ಮನೆಯಲ್ಲೇ ಕಿರುಕುಳ ನೀಡುತ್ತಿದ್ದಾರೆ ಎಂದು ತನುಶ್ರೀ ದತ್ತಾ ಹೇಳಿದ್ರು, ಯಾರು ಕಿರುಕುಳ ಕೊಡುತ್ತಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಿಲ್ಲ. ಜಾರ್ಖಂಡ್ ಮೂಲದ ತನುಶ್ರೀ ಮಾಡೆಲ್ ಆಗಿ ಬಳಿಕ ಸಿನಿಮಾ ನಟಿಯಾಗಿ ಗುರ್ತಿಸಿಕೊಂಡಿದ್ದರು. 'ಆಶಿಕ್ ಬನಾಯ ಅಪ್ನೆ' ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು.

ತನುಶ್ರೀ ದತ್ತಾ
ಕುಸ್ತಿಪಟುವಿನಿಂದ ಏಟು: ಇದು ತನುಶ್ರೀ ದತ್ತಾ ಅವರ 'ಯೋಜಿತ ದಾಳಿ' ಎಂದ ರಾಖಿ ಸಾವಂತ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com