

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ 'ಸ್ಪಿರಿಟ್' ಚಿತ್ರದಿಂದ ಹೊರಬಂದು ಒಂದು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಆದಾಗ್ಯೂ, ನಟಿ ಚಿತ್ರದ ಲಾಭದಲ್ಲಿ ಶೇ 10ರಷ್ಟು ಪಾಲು ಕೇಳಿದ್ದರು ಎಂದು ಸಂದೀಪ್ ರೆಡ್ಡಿ ವಂಗಾ ಅವರ ಸಹೋದರ ಹೇಳಿಕೆ ನೀಡಿದ ನಂತರ, ದೀಪಿಕಾ ಅವರ ನಿರ್ಗಮನಕ್ಕೆ ಸಂಬಂಧಿಸಿದ ವಿವಾದವು ಮತ್ತೆ ಮುನ್ನೆಲೆಗೆ ಬಂದಿದೆ.
ಈ ಹೇಳಿಕೆಗಳ ಬೆನ್ನಲ್ಲೇ, ಶುಕ್ರವಾರ ಪತ್ರಕರ್ತೆ ಜಾನ್ವಿ ಮಂಚಂದಾ ಅವರು ಇನ್ಸ್ಟಾಗ್ರಾಂನಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, 'ಸಂದೀಪ್ ರೆಡ್ಡಿ ವಂಗಾ ಅವರ ಸಹೋದರ ಪ್ರಣಯ್, ದೀಪಿಕಾ ಪಡುಕೋಣೆ 'ಸ್ಪಿರಿಟ್' ಚಿತ್ರದ ಲಾಭದಲ್ಲಿ ಶೇ 10ರಷ್ಟು ಪಾಲು ಕೇಳಿದ್ದರು ಎಂದು ಹೇಳಿದ್ದಾರೆ. ಆದರೆ, ಪುರುಷ ನಟರು ವರ್ಷಗಳಿಂದಲೂ ಹೀಗೆಯೇ ಮಾಡುತ್ತಾ ಬಂದಿದ್ದಾರೆ ಎಂಬುದನ್ನು ನಾವೇನಾದರೂ ಮರೆತಿದ್ದೇವೆಯೇ?' ಎಂದು ಪ್ರಶ್ನಿಸಿದ್ದಾರೆ.
'ಬ್ರೇಕಿಂಗ್: ದೀಪಿಕಾ ಪಡುಕೋಣೆ ಅವರು 'ಸ್ಪಿರಿಟ್' ಚಿತ್ರದ ಲಾಭದಲ್ಲಿ ಶೇ 10 ರಷ್ಟು ಪಾಲು ಕೇಳಿದ್ದರು ಎನ್ನಲಾಗಿದ್ದು, ಈ ಕುರಿತು ಉಂಟಾಗಿರುವ ಆಕ್ರೋಶ ನೋಡಿದರೆ, ಅವರು ಇಡೀ ಸಿನಿಮಾವನ್ನೇ ಅಥವಾ ನಿರ್ದೇಶಕ ವಂಗಾ ಅವರ ಸಂಪೂರ್ಣ ಆಸ್ತಿಯನ್ನೇ ಕೇಳಿದರೇನೋ ಎಂಬಂತೆ ಭಾಸವಾಗುತ್ತದೆ. ಇದು ಪುರುಷ ಅಹಂಕಾರದ (male-ego) ತೀವ್ರ ಬಿಕ್ಕಟ್ಟು. ಒಬ್ಬ ಮಹಿಳೆ ಒಪ್ಪಂದವೊಂದನ್ನು ತಿರಸ್ಕರಿಸಿದರು; ಆದರೆ ಮಹಿಳೆಯೊಬ್ಬರ 'ಇಲ್ಲ' ಎಂಬ ನಿಲುವನ್ನು ಸಹಿಸಿಕೊಳ್ಳಲು ಸ್ತ್ರೀದ್ವೇಷಕ್ಕೆ ಸಾಧ್ಯವಾಗಲಿಲ್ಲ' ಎಂದು ಪೋಸ್ಟ್ನ ಮೊದಲ ಸ್ಲೈಡ್ನಲ್ಲಿ ಬರೆಯಲಾಗಿದೆ.
ನಟಿ ದೀಪಿಕಾ ಪಡುಕೋಣೆ ಆ ಪೋಸ್ಟ್ ಅನ್ನು 'ಲೈಕ್' ಮಾಡುವ ಮೂಲಕ ತಮ್ಮ ಬೆಂಬಲ ಸೂಚಿಸಿದ್ದಾರೆ. ಇಲ್ಲಿಯವರೆಗೆ, ಈ ಪೋಸ್ಟ್ 10,900 'ಲೈಕ್'ಗಳನ್ನು ಹಾಗೂ ಸುಮಾರು 2,000 ರೀಪೋಸ್ಟ್ ಆಗಿದೆ. ಜೊತೆಗೆ, 500ಕ್ಕೂ ಹೆಚ್ಚು ಕಾಮೆಂಟ್ಗಳು ದೀಪಿಕಾ ಅವರಿಗೆ ಬೆಂಬಲ ವ್ಯಕ್ತಪಡಿಸಿವೆ.
ಕಳೆದ ವರ್ಷ ದೀಪಿಕಾ 'ಸ್ಪಿರಿಟ್' ಚಿತ್ರದಿಂದ ಹೊರಬಂದಾಗ, ಚಿತ್ರತಂಡದ ಬೇಡಿಕೆಗಳಿಗೆ ಹೊಂದಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ ಮತ್ತು ಚೊಚ್ಚಲ ಮಗುವಿಗೆ ತಾಯಿಯಾಗಿರುವ ಕಾರಣ ತಮಗೆ ದಿನಕ್ಕೆ 8 ಗಂಟೆಗಳ ಕೆಲಸದ ಅವಧಿ ಬೇಕೆಂದು ಪಟ್ಟು ಹಿಡಿದಿದ್ದರು ಎಂದು ವರದಿಯಾಗಿತ್ತು. ಆದರೆ, 'ಎನ್ಟಿವಿ ತೆಲುಗು' ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಪ್ರಣಯ್ ರೆಡ್ಡಿ ವಂಗಾ ಅವರು, ದೀಪಿಕಾ ಚಿತ್ರದಿಂದ ಹೊರಬಂದಿದ್ದಕ್ಕೆ ಕಾರಣವನ್ನು ವಿವರಿಸಿದ್ದಾರೆ.
'ಇದಕ್ಕೆ ಕಾರಣ ಒಂದು ಸಂಭಾವನೆ, ಇನ್ನೊಂದು ಸಮಯದ ಹೊಂದಾಣಿಕೆ. ಇವುಗಳಲ್ಲದೆ, ಇನ್ನೂ ಕೆಲವು ಕಾರಣಗಳೂ ಇವೆ. ಅವರು ಚಿತ್ರದ ಲಾಭದಲ್ಲಿ ಶೇ 10ರಷ್ಟು ಪಾಲನ್ನು ನೀಡುವಂತೆ ಕೇಳಿದರು. ಆ ನಂತರ ಪರಿಸ್ಥಿತಿ ಕೈಮೀರಿ ಹೋಯಿತು. ನೋಡಿ, ಅವರು ಏನನ್ನಾದರೂ ಕೇಳಬಹುದು; ನಮಗೆ ನೀಡಲು ಇಷ್ಟವಿದ್ದರೆ ನೀಡಬಹುದು. ಆದರೆ ಬಜೆಟ್ ದೃಷ್ಟಿಯಿಂದ ಅದು ನಮಗೆ ಹೊಂದಿಕೆಯಾಗಬೇಕಲ್ಲವೇ? ಅದು ಲಾಭದಾಯಕವಾಗಿಲ್ಲ ಎಂದು ನಮಗೆ ಅನ್ನಿಸಿತು. ಹಾಗಾಗಿ ನಾವು ಇತರ ಆಯ್ಕೆಗಳ ಬಗ್ಗೆ ಯೋಚಿಸಿದೆವು. ನಾವು ಬೇರೆ ಆಯ್ಕೆಗಳನ್ನು ಹುಡುಕಲು ಪ್ರಾರಂಭಿಸುತ್ತಿದ್ದಂತೆಯೇ, ಅವರು ಎಲ್ಲ ವಿಷಯಗಳನ್ನೂ ಹೊರಗೆ ಸೋರಿಕೆ ಮಾಡಲು ಶುರು ಮಾಡಿದರು' ಎಂದು ವಿವರಿಸಿದರು.
ಪ್ರಣಯ್ ಅವರು ದೀಪಿಕಾ ಅವರೊಂದಿಗೆ ಕಥೆ ಮತ್ತು ಪಾತ್ರದ ಬಗ್ಗೆ ಚರ್ಚಿಸಿದ್ದಾಗಿ ತಿಳಿಸಿದರು ಹಾಗೂ ನಂತರ ಅವರು ಆ ಎಲ್ಲ ವಿವರಗಳನ್ನು ಸೋರಿಕೆ ಮಾಡಿದರು ಎಂದು ಆರೋಪಿಸಿದರು. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಸ್ಪಿರಿಟ್' ಚಿತ್ರದಲ್ಲಿ ಪ್ರಭಾಸ್ ಮತ್ತು ತೃಪ್ತಿ ದಿಮ್ರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಇದು ಮಾರ್ಚ್ 2027ರಲ್ಲಿ ಬಿಡುಗಡೆಯಾಗಲಿದೆ.