ಸದ್ಗುರು ಜಗ್ಗಿ ವಾಸುದೇವ್ ಸಲಹೆ ಮೇರೆಗೆ ನಟನೆ ಬಿಟ್ಟು ಕೃಷಿ ಆರಂಭಿಸಿದ ರಾಜೇಶ್ ಕುಮಾರ್; ₹2 ಕೋಟಿ ಸಾಲದ ಸುಳಿಗೆ ಸಿಲುಕಿದ್ದೇಗೆ?

ಸದ್ಗುರು ಅವರ 'ರ್ಯಾಲಿ ಫಾರ್ ರಿವರ್ಸ್' (Rally for Rivers) ಅಭಿಯಾನದೊಂದಿಗೂ ರಾಜೇಶ್ ಗುರುತಿಸಿಕೊಂಡಿದ್ದರು ಮತ್ತು ಆ ಅಭಿಯಾನದ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ನೆರವಾಗಿದ್ದರು.
Rajesh Kumar with Sadhguru
Photo | Instagram
Updated on

ಜನಪ್ರಿಯ ಹಾಸ್ಯ ಧಾರಾವಾಹಿ 'ಸರಾಭಾಯ್ ವರ್ಸಸ್ ಸರಾಭಾಯ್'ನಲ್ಲಿ 'ರೋಶೇಶ್' ಪಾತ್ರದ ಮೂಲಕ ಖ್ಯಾತಿ ಪಡೆದ ನಟ ರಾಜೇಶ್ ಕುಮಾರ್, 2017ರಲ್ಲಿ ನಟನೆಯಿಂದ ವಿರಾಮ ಪಡೆದು ಕೃಷಿ ಚಟುವಟಿಕೆಗಾಗಿ ತಮ್ಮ ತವರೂರಾದ ಬಿಹಾರದ ಗಯಾಗೆ ಮರಳಿದರು. ಕೃಷಿಯನ್ನು ಹತ್ತಿರದಿಂದ ಅರಿಯುವ ಪ್ರಯತ್ನವಾಗಿ ಆರಂಭವಾದ ಈ ಹಾದಿಯು, ಅಂತಿಮವಾಗಿ ಐದು ವರ್ಷಗಳ ಸವಾಲಿನ ಪ್ರಯಾಣವಾಗಿ ಪರಿವರ್ತನೆಗೊಂಡು, ಅವರನ್ನು 2 ಕೋಟಿ ರೂಪಾಯಿಗಳ ಸಾಲದ ಸುಳಿಗೆ ಸಿಲುಕಿಸಿತು.

ಆಧ್ಯಾತ್ಮಿಕ ನಾಯಕ ಸದ್ಗುರು ಅವರೊಂದಿಗಿನ ಹಲವು ಸಂವಾದಗಳ ನಂತರ ಕೃಷಿಯತ್ತ ರಾಜೇಶ್ ಅವರ ಆಸಕ್ತಿ ಹೆಚ್ಚಾಯಿತು. ಆರಂಭದಲ್ಲಿ ಸದ್ಗುರು ಅವರ ಬೋಧನೆಗಳ ಬಗ್ಗೆ ಅವರಿಗೆ ಪೂರ್ಣ ಮನವರಿಕೆಯಾಗಿರಲಿಲ್ಲವಾದರೂ, ಕಾಲಕ್ರಮೇಣ ಅವರು ಅವರ ಅನುಯಾಯಿಯಾದರು ಮತ್ತು ಇಶಾ ಫೌಂಡೇಶನ್‌ಗಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದರು.

ಸದ್ಗುರು ಅವರ 'ರ್ಯಾಲಿ ಫಾರ್ ರಿವರ್ಸ್' (Rally for Rivers) ಅಭಿಯಾನದೊಂದಿಗೂ ರಾಜೇಶ್ ಗುರುತಿಸಿಕೊಂಡಿದ್ದರು ಮತ್ತು ಆ ಅಭಿಯಾನದ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ನೆರವಾಗಿದ್ದರು.

ಸದ್ಗುರುಗಳ ಒಂದು ನಿರ್ದಿಷ್ಟ ಮಾತು ಅವರ ಮನಸ್ಸಿನಲ್ಲಿ ಆಳವಾಗಿ ಉಳಿದುಕೊಂಡಿತು ಮತ್ತು ಅಂತಿಮವಾಗಿ ಅವರು ಕೃಷಿ ವಲಯಕ್ಕೆ ಕಾಲಿರಿಸುವ ನಿರ್ಧಾರವನ್ನು ತೆಗೆದುಕೊಳ್ಳಲು ಅದು ಪ್ರೇರಣೆಯಾಯಿತು.

'ಆ ರ್ಯಾಲಿಯ ಸಂದರ್ಭದಲ್ಲಿ ಸದ್ಗುರುಗಳು ಪದೇ ಪದೆ ಒಂದು ಮಾತನ್ನು ಹೇಳುತ್ತಿದ್ದರು: 'ನಿಮ್ಮ ರಾಜ್ಯದಿಂದ ನನಗೆ 100 ಮಂದಿ ಯುವಕರನ್ನು ಕೊಡಿ, ನಾನು ಕೃಷಿ ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸುತ್ತೇನೆ. ಆದರೆ, ಮುಂದಿನ ಮೂರು ವರ್ಷಗಳ ಕಾಲ ನನ್ನ ಪಾಡೇನು ಅಥವಾ ನನಗೇನು ಲಾಭ ಎಂದು ನನ್ನನ್ನು ಕೇಳಬೇಡಿ.' ಹೀಗಾಗಿ, ನಾನು ನನ್ನ ಊರಿಗೆ ತಲುಪಿದಾಗ ಆ ಮಾತನ್ನು ನನಗೆ ನಾನೇ ಹೇಳಿಕೊಂಡೆ. 'ಯಾವ ದಿನ ನೀವು ನಿಮ್ಮ ಸ್ವಂತ ಹಿತಾಸಕ್ತಿಯ ಬಗ್ಗೆ ಯೋಚಿಸುವುದನ್ನು ನಿಲ್ಲಿಸುತ್ತೀರೋ, ಅಂದೇ ನೀವು ಇತರರ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತೀರಿ; ಮತ್ತು ಯಾವಾಗ ನೀವು ಇತರರ ಬಗ್ಗೆ ಯೋಚಿಸಲು ಶುರು ಮಾಡುತ್ತೀರೋ, ಆಗ ಇತರರು ನಿಮ್ಮ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತಾರೆ' .'"

ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಮಗೆ ಮೂಡಿದ ಅರಿವು, ಕೇವಲ ಇತರರಿಗೆ ಸಲಹೆ ನೀಡುವ ಬದಲು ಆ ಸವಾಲುಗಳನ್ನು ಸ್ವತಃ ಅನುಭವಿಸುವಂತೆ ತನ್ನನ್ನು ಪ್ರೇರೇಪಿಸಿತು ಎಂದು ರಾಜೇಶ್ ಹೇಳಿದರು.

Rajesh Kumar with Sadhguru
ಸದ್ಗುರು ಜಗ್ಗಿ ವಾಸುದೇವ್ ಸ್ಥಾಪಿತ ಈಶಾ ಫೌಂಡೇಶನ್‌ಗೆ ನುಗ್ಗಿದ 150 ಪೊಲೀಸ್ ಅಧಿಕಾರಿಗಳು, ವಿಡಿಯೋ!

'ನಮ್ಮಲ್ಲಿರುವ ಮಾಹಿತಿ ಮತ್ತು ನಾವು ಪಡೆದ ಶಿಕ್ಷಣದ ಹಿನ್ನೆಲೆಯಲ್ಲಿ, ಕೇವಲ ಒಂದು ಬದಿಯಲ್ಲಿ ನಿಂತು ರೈತರಿಗೆ ಕೀಟನಾಶಕಗಳನ್ನು ಬಳಸಬೇಡಿ ಎಂದು ಹೇಳುವ ಬದಲು, ಆಚೆಗೆ ಹೋಗಿ ಸಮಸ್ಯೆಯ ಮೂಲವನ್ನು ಅರ್ಥಮಾಡಿಕೊಳ್ಳುವುದು ಉತ್ತಮ ಎಂದು ನನಗೆ ಅನ್ನಿಸಿತು. ಹಾಗಾಗಿ ನಾನು ಆಚೆಗೆ ಹೋದೆ ಮತ್ತು ಸ್ವತಃ ರೈತನಾದೆ. ನಾನು ತೋಟಗಾರಿಕೆಯನ್ನು ಪ್ರಯತ್ನಿಸಿದೆ, ಆದರೆ ಅದರಲ್ಲಿ ಹೀನಾಯವಾಗಿ ವಿಫಲನಾದೆ' ಎಂದರು.

'ಆದರೆ ಸದ್ಗುರುಗಳ ಕೃಪೆಗೆ ಪಾತ್ರನಾದ ನಂತರ, ನಾನು ಇದನ್ನು ವೈಫಲ್ಯ ಎಂದು ಕರೆಯುವುದಿಲ್ಲ. ಈಗ ಅದು ನನ್ನನ್ನು ಬಾಧಿಸುವುದಿಲ್ಲ, ಏಕೆಂದರೆ ನಾನು ಇದನ್ನು ಯಶಸ್ಸು ಅಥವಾ ವೈಫಲ್ಯ ಎಂದು ವರ್ಗೀಕರಿಸಲು ಬಯಸುವುದಿಲ್ಲ. ಇದರಲ್ಲಿ ಅದೆಷ್ಟೋ ವಿಷಯಗಳನ್ನು ಕಲಿಯಲು ಸಾಧ್ಯವಾಯಿತು; ಇಲ್ಲದಿದ್ದರೆ, ಅವುಗಳನ್ನು ಕಲಿಯಲು ನನಗೆ ಸಾಧ್ಯವಾಗುತ್ತಿರಲಿಲ್ಲ' ಎಂದು ಅವರು ಹೇಳಿದ್ದಾರೆ.

ರಾಜೇಶ್ ಕೃಷಿ ಅನುಭವ

ರಾಜೇಶ್ ಅವರ ಕೃಷಿ ಅನುಭವವು ಸುಗಮವಾಗಿರಲಿಲ್ಲ. ಕೃಷಿ, ಕೃಷಿ ಭೂಮಿ ಮತ್ತು ಮಣ್ಣಿನ ಬಗ್ಗೆ ಅರಿತುಕೊಳ್ಳಲು ತಮಗೆ ಸುಮಾರು ಐದು ವರ್ಷ ಬೇಕಾದವು. ಆ ಅವಧಿಯಲ್ಲಿ ಅವರು ಹಲವು ಹಿನ್ನಡೆಗಳನ್ನು ಎದುರಿಸಿದರು. ಆರಂಭದಲ್ಲಿ ಅವರು ತೋಟಗಾರಿಕೆ ಕೆಲಸ ಕೈಗೊಂಡರು, ಆದರೆ ಸುಮಾರು 35 ವರ್ಷಗಳ ನಂತರ ಆ ಪ್ರದೇಶದಲ್ಲಿ ಸಂಭವಿಸಿದ ಪ್ರವಾಹವು ಅವರು ನೆಟ್ಟಿದ್ದ ಎಲ್ಲವನ್ನೂ ನಾಶಪಡಿಸಿತು.

'ವಿಷಯ ಹೀಗಾಯಿತು - ನಾನು ಗಿಡಗಳನ್ನು ನೆಡಲು ಪ್ರಾರಂಭಿಸಿದೆ. ಆದರೆ, 35 ವರ್ಷಗಳ ನಂತರ ಆ ಪ್ರದೇಶದಲ್ಲಿ ಪ್ರವಾಹ ಬಂದು ಎಲ್ಲವನ್ನೂ ಕೊಚ್ಚಿಕೊಂಡು ಹೋಯಿತು. ಈ ಹಿನ್ನಡೆಯ ಹೊರತಾಗಿಯೂ, ಮತ್ತೆ ಇನ್ನೂ 15,000 ಗಿಡಗಳನ್ನು ನೆಟ್ಟೆ. ಆದರೆ, ಕೋವಿಡ್-19 ಸಾಂಕ್ರಾಮಿಕದಿಂದಾಗಿ ಆ ಪ್ರಯತ್ನಗಳಿಗೂ ಅಡಚಣೆ ಉಂಟಾಯಿತು. ನಂತರ ಮತ್ತೆ ಗಿಡಗಳನ್ನು ನೆಡುವ ಪ್ರಯತ್ನ ಮಾಡಿದೆ, ಆದರೆ ಅಂತರ್ಜಲ ಮಟ್ಟ ಕುಸಿದುಹೋದ ಕಾರಣ ಮತ್ತೊಂದು ಸಮಸ್ಯೆ ಎದುರಿಸಬೇಕಾಯಿತು' ಎಂದರು.

'ಅದು ಕೊನೆಯ ಪ್ರಯತ್ನವಾಗಿತ್ತು... ನನ್ನ ಬಳಿಯಿದ್ದ ಹಣದಲ್ಲಿ ಬೋರ್‌ವೆಲ್‌ಗಾಗಿ 500 ಅಡಿಗಳಷ್ಟು ಕೊರೆಯಿಸಲು ಮಾತ್ರ ಸಾಧ್ಯವಾಯಿತು. ಆದರೆ, ಅದರಲ್ಲಿ ಒಂದು ಹನಿ ನೀರೂ ಸಿಗಲಿಲ್ಲ. ಇವೆಲ್ಲವೂ ಏಕಕಾಲದಲ್ಲಿ ನಡೆಯುತ್ತಿದ್ದವು' ಎಂದು ತಿಳಿಸಿದರು.

Rajesh Kumar with Sadhguru
ಮಹಾಶಿವರಾತ್ರಿಯಂದು ಗೌತಮ್ ಅದಾನಿ ಉಲ್ಲೇಖಿಸಿ ಶುಭಾಶಯ ಹಂಚಿಕೊಂಡ ಸದ್ಗುರು!: ಏಕೆ? ಏನು? ಇಲ್ಲಿದೆ ವಿವರ..

'ಆಧ್ಯಾತ್ಮಿಕತೆಯಿಂದಾಗಿ ಎಂದಿಗೂ ಖಿನ್ನತೆಗೆ ಒಳಗಾಗಿಲ್ಲ'

ರಾಜೇಶ್ ಅವರಿಗೆ ಆದ ಸತತ ನಷ್ಟಗಳು, ಅವರಿಗೆ ಯಾವುದೇ ಸ್ಥಿರ ಆದಾಯದ ಮೂಲವಿಲ್ಲದಿದ್ದ ಸಮಯದಲ್ಲೇ ಸಂಭವಿಸಿದವು. ಆದರೂ, ಆ ಪರಿಸ್ಥಿತಿಗಳು ತಮ್ಮನ್ನು ಭಾವನಾತ್ಮಕವಾಗಿ ಕುಗ್ಗಿಸಲು ಅಥವಾ ಹತೋಟಿಗೆ ತೆಗೆದುಕೊಳ್ಳಲು ಅವರು ಎಂದಿಗೂ ಅವಕಾಶ ನೀಡಲಿಲ್ಲ. ತಾವು ಶಾಂತವಾಗಿರಲು ಆಧ್ಯಾತ್ಮಿಕತೆಯೇ ಕಾರಣ ಎಂದು ರಾಜೇಶ್ ತಿಳಿಸಿದರು.

'ಆಧ್ಯಾತ್ಮಿಕತೆಯ ಕಾರಣದಿಂದಾಗಿ, ನಾನು ಎಂದಿಗೂ ಆತಂಕ, ಖಿನ್ನತೆ, ಹತಾಶೆ ಅಥವಾ ಕೋಪಕ್ಕೆ ಒಳಗಾಗಲಿಲ್ಲ; ಯಾವುದೂ ನನ್ನನ್ನು ಬಾಧಿಸಲಿಲ್ಲ. ಏನೂ ನಡೆಯುತ್ತಿರಲಿಲ್ಲ ಮತ್ತು ಅದು ನಡೆಯುತ್ತಿಲ್ಲ ಎಂಬುದನ್ನು ನಾನು ಗಮನಿಸುತ್ತಿದ್ದೆ. ಆದರೆ ನನ್ನ ಪ್ರಯತ್ನ ಮತ್ತು ಪ್ರಕ್ರಿಯೆ ನಿಲ್ಲಲಿಲ್ಲ. ಆಧ್ಯಾತ್ಮಿಕತೆ ಎಂದರೆ ಅದೇ. ಆರ್ಥಿಕ ಸಂಕಷ್ಟದ ಸಮಯದಲ್ಲಿ, ತಮ್ಮ ಮಗನ ಶಾಲೆಯ ಹೊರಗೆ ತರಕಾರಿಗಳನ್ನು ಮಾರಾಟ ಮಾಡುವ ಹಂತಕ್ಕೂ ಹೋಗಿದ್ದೆ. ಅಂತಹ ಪರಿಸ್ಥಿತಿಯ ಹೊರತಾಗಿಯೂ, ಆ ಅವಧಿಯನ್ನು ತಾವು ಸೋತ ಸಮಯವೆಂದು ಪರಿಗಣಿಸಲಿಲ್ಲ' ಎಂದರು.

2 ಕೋಟಿ ರೂಪಾಯಿ ಸಾಲ

'ಮೇರಿ ಸಹೇಲಿ' (Meri Saheli) ಜೊತೆಗಿನ ಹಿಂದಿನ ಸಂಭಾಷಣೆಯೊಂದರಲ್ಲಿ, ಕೃಷಿಯತ್ತ ತೊಡಗಿಕೊಂಡಾಗಿನಿಂದ ನನಗೆ ಸಾಲದ ಹೊರೆ ಉಂಟಾಗಿತ್ತು ಎಂದು ರಾಜೇಶ್ ಬಹಿರಂಗಪಡಿಸಿದ್ದರು.

'ಯಾವುದೇ ಆದಾಯವಿರಲಿಲ್ಲ, ಆದರೆ ಖರ್ಚುಗಳ ಕಾರಣದಿಂದಾಗಿ ನನ್ನಲ್ಲಿದ್ದ ಎಲ್ಲ ಉಳಿತಾಯವೂ ಖಾಲಿಯಾಗಿತ್ತು. ನಾನು 2 ಕೋಟಿ ರೂಪಾಯಿಗಳ ಸಾಲದ ಸುಳಿಗೆ ಸಿಲುಕಿದೆ. 'ದಿವಾಳಿತನ' ಎಂಬುದು ದೊಡ್ಡ ಪದವಾದರೂ, ಖಂಡಿತವಾಗಿಯೂ ದೀರ್ಘಕಾಲದವರೆಗೆ ನಾನು ಅಂತಹದ್ದೇ ಭಾವನೆಯನ್ನು ಅನುಭವಿಸಿದೆ. ಜೀವನ ನಿರ್ವಹಣೆಗೆ ಬೇಕಾದ ಹಣವನ್ನು ಗಳಿಸಲೂ ನನಗೆ ಸಾಧ್ಯವಾಗುತ್ತಿರಲಿಲ್ಲ. ಇದು ಖಂಡಿತವಾಗಿಯೂ ಒಂದು ಕಠಿಣ ಹಂತವಾಗಿತ್ತು' ಎಂದು ತಿಳಿಸಿದರು.

ಅಂದಿನಿಂದ ರಾಜೇಶ್ ಅವರ ಆರ್ಥಿಕ ಪರಿಸ್ಥಿತಿಯು ಗಣನೀಯವಾಗಿ ಸುಧಾರಿಸಿದೆ. ತಮ್ಮ ಸಾಲವು ಸುಮಾರು 20 ಲಕ್ಷ ರೂಪಾಯಿಗಳಿಗೆ ಇಳಿಕೆಯಾಗಿದೆ ಎಂದು ಅವರು ಏಪ್ರಿಲ್‌ನಲ್ಲಿ ತಿಳಿಸಿದ್ದರು.

'ನಾನು ಈಗ ಆ ಆರ್ಥಿಕ ಸಂಕಷ್ಟದ ಸುಳಿಯಿಂದ ಹೊರಬಂದಿದ್ದೇನೆ. ಕೇವಲ ಶೇ 10-15 ರಷ್ಟು ಸಾಲ ಮಾತ್ರ ಬಾಕಿ ಉಳಿದಿದೆ' ಎಂದು ಅವರು 'ಬಾಲಿವುಡ್ ಬಬಲ್'ಗೆ (Bollywood Bubble) ತಿಳಿಸಿದರು.

ಮತ್ತೆ ನಟನೆಗೆ ಮರಳಿದ ರಾಜೇಶ್ ಕುಮಾರ್

2000ರ ದಶಕದ ಅತ್ಯಂತ ಜನಪ್ರಿಯ ಸಿಟ್‌ಕಾಮ್‌ಗಳಲ್ಲಿ ಒಂದಾದ 'ಸರಾಭಾಯ್ ವರ್ಸಸ್ ಸರಾಭಾಯ್'ನಲ್ಲಿ 'ರೋಶೇಶ್ ಸರಾಭಾಯ್' ಪಾತ್ರವನ್ನು ನಿರ್ವಹಿಸುವ ಮೂಲಕ ರಾಜೇಶ್ ಕುಮಾರ್ ಖ್ಯಾತಿ ಪಡೆದರು. ಕೃಷಿಗಾಗಿ ನಟನೆಯಿಂದ ವಿರಾಮ ಪಡೆದಿದ್ದ ಅವರು, ನಂತರ ಕ್ರಮೇಣ ಮತ್ತೆ ತೆರೆಗೆ ಮರಳಿದರು.

ಇತ್ತೀಚಿನ ವರ್ಷಗಳಲ್ಲಿ ಅವರು 'ಸಯ್ಯಾರಾ', 'ಹೈ ಜವಾನಿ ತೋ ಇಷ್ಕ್ ಹೋನಾ ಹೈ', 'ಓಹ್ ಮೈ ಡಾಗ್' ಮತ್ತು 'ನಿಶಾಂಚಿ'ಯಂತಹ ಚಿತ್ರಗಳು ಹಾಗೂ ಯೋಜನೆಗಳಲ್ಲಿ ಕಾಣಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com