

ಬಾಲಿವುಡ್ ನಟಿ ಮೌನಿ ರಾಯ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರ ಸಿನಿಮಾ ಅಥವಾ ಫೋಟೋಶೂಟ್ಗಾಗಿ ಅಲ್ಲ, ಪಾಪರಾಜಿಗಳ ವರ್ತನೆಯಿಂದ ಕೋಪಗೊಂಡು ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದಕ್ಕಾಗಿ.
ಮುಂಬೈನ ಜನಪ್ರಿಯ ರೆಸ್ಟೋರೆಂಟ್ ಒಂದರಲ್ಲಿ ಗೆಳತಿ ಅನುಷಾ ದಂಡೇಕರ್ ಅವರೊಂದಿಗೆ ಡಿನ್ನರ್ ಮುಗಿಸಿ ಕಾರು ಹತ್ತಿದ ನಟಿ ಮೌನಿ ರಾಯ್, ತಮ್ಮ ಖಾಸಗಿತನಕ್ಕೆ ಧಕ್ಕೆ ತಂದ ಕ್ಯಾಮೆರಾಮೆನ್ಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಕಾರಿನ ಬಾಗಿಲು ಮುಚ್ಚಿದರೂ ಬಿಡದೆ ಕಿಟಕಿಯ ಗಾಜಿನ ಮೂಲಕ ವಿಡಿಯೋ ಚಿತ್ರೀಕರಿಸುತ್ತಿದ್ದ ಪಾಪರಾಜಿಗಳನ್ನು ನೋಡಿ ಕೆರಳಿದ ಮೌನಿ, "ಬಂದ್ ಕರೋ" (ನಿಲ್ಲಿಸಿ) ಎಂದು ಜೋರಾಗಿ ಗದರಿಸಿದ್ದಾರೆ.
ಮಂಗಳವಾರ ಸಂಜೆ ಮುಂಬೈನ ರೆಸ್ಟೋರೆಂಟ್ನಲ್ಲಿ ಆಪ್ತ ಸ್ನೇಹಿತರಾದ ಅರ್ಜುನ್ ಬಿಜ್ಲಾನಿ ಮತ್ತು ಅನುಷಾ ದಾಂಡೆಕರ್ ಅವರೊಂದಿಗೆ ಸಮಯ ಕಳೆಯುತ್ತಿದ್ದ ಮೌನಿ, ಡಿನ್ನಲ್ ಮುಗಿಸಿ ಕಾರಿನಲ್ಲಿ ಕುಳಿತ ತಕ್ಷಣ ಪಾಪರಾಜಿಗಳು ಸುತ್ತುವರಿದು ನಿರಂತರವಾಗಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಿಸಲು ಆರಂಭಿಸಿದ್ದರು.
ಕಪ್ಪು ಬಣ್ಣದ ಸ್ಲೀವ್ಲೆಸ್ ಉಡುಪು ಧರಿಸಿದ್ದ ಮೌನಿ, ಯಾವುದೇ ಮೇಕಪ್ ಇಲ್ಲದೆ ಸರಳ ಲುಕ್ನಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಕಾರಿನ ಕಿಟಕಿಯಿಂದಲೇ ಕ್ಯಾಮೆರಾಗಳನ್ನು ತೋರಿಸುತ್ತಾ ಚಿತ್ರೀಕರಣ ಮುಂದುವರಿಸಿದ್ದರಿಂದ ಅವರು ಅಸಮಾಧಾನಗೊಂಡರು.
ವೈರಲ್ ಆಗಿರುವ ವಿಡಿಯೋದಲ್ಲಿ ಮೌನಿ ರಾಯ್ ಬೆರಳು ತೋರಿಸುತ್ತಾ "ಬಂದ್ ಕರೋ... ಬಂದ್ ಕರೋ" (ನಿಲ್ಲಿಸಿ) ಎಂದು ಪಾಪರಾಜಿಗಳಿಗೆ ಹಲವು ಬಾರಿ ಹೇಳುತ್ತಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಆದರೂ ಕ್ಯಾಮೆರಾಗಳು ನಿಲ್ಲದ ಕಾರಣ ಅವರು ಮತ್ತಷ್ಟು ಕೋಪಗೊಂಡು ಚಿತ್ರೀಕರಣ ನಿಲ್ಲಿಸುವಂತೆ ಸೂಚಿಸಿದರು. ಬಳಿಕ ಅವರ ಕಾರು ಅಲ್ಲಿಂದ ತೆರಳಿತು.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪಾಪರಾಜಿಗಳ ವರ್ತನೆ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ.
ಕಲಾವಿದರಿಗೂ ಖಾಸಗಿ ಜೀವನದ ಹಕ್ಕಿದೆ. ಕಾರಿನೊಳಗೂ ಹಿಂಬಾಲಿಸಿ ಚಿತ್ರೀಕರಿಸುವುದು ಸರಿಯಲ್ಲ" ಎಂದು ಮೌನಿ ಪರ ನಿಂತಿದ್ದಾರೆ.
ಮತ್ತೊಂದೆಡೆ, "ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಫೋಟೋ ತೆಗೆದುಕೊಳ್ಳುವುದು ಪಾಪರಾಜಿಗಳ ಕೆಲಸ" ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ಮೌನಿ ರಾಯ್ ಮತ್ತು ಉದ್ಯಮಿ ಸೂರಜ್ ನಂಬಿಯಾರ್ ವಿಚ್ಛೇದನ ಪಡೆದಿರುವ ಸುದ್ದಿ ಚರ್ಚೆಗೆ ಕಾರಣವಾಗಿತ್ತು. ಈ ಬೆಳವಣಿಗೆಯ ಬಳಿಕ ನಟಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.