

ಮುಂಬೈ: ಭಾರತೀಯ ಚಿತ್ರರಂಗ ಕಂಡ ಬಹುಮುಖ ಪ್ರತಿಭೆಯ ನಟ, ಚಿತ್ರಕಥೆಗಾರ, ನಿರ್ಮಾಪಕ ಹಾಗೂ ನಿರ್ದೇಶಕರಾದ ಆರ್. ಮಾಧವನ್ (ರಂಗನಾಥನ್ ಮಾಧವನ್) Padma Shri ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಾಧವನ್ ಅವರಿಗೆ ಕಲೆ ವಿಭಾಗದಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರದಾನ ಮಾಡಲಾಗಿದೆ. ಭಾರತೀಯ ಚಿತ್ರರಂಗಕ್ಕೆ ಅವರು ನೀಡಿರುವ ವಿಶಿಷ್ಟ ಕೊಡುಗೆ ಮತ್ತು ಮೂರು ದಶಕಗಳಿಗೂ ಹೆಚ್ಚು ಕಾಲದ ಅವರ ಕಲಾ ಪಯಣವನ್ನು ಗುರುತಿಸಿ ಕೇಂದ್ರ ಸರ್ಕಾರ ಈ ಗೌರವವನ್ನು ನೀಡಿದೆ.
ರಂಗನಾಥನ್ ಮಾಧವನ್ ಅವರು ತಮ್ಮ ಅಭಿನಯ, ಕಥೆ ಹೇಳುವ ಶೈಲಿ ಹಾಗೂ ನಿರ್ದೇಶನದ ಮೂಲಕ ಭಾರತೀಯ ಸಿನಿರಂಗದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದಾರೆ. ದೂರದರ್ಶನ ಧಾರಾವಾಹಿಗಳ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಮಾಧವನ್ ಅವರು, ಖ್ಯಾತ ನಿರ್ದೇಶಕ ಮಣಿರತ್ನಂ ಅವರ ‘ಅಲೈಪಾಯುತೇ’ (Alai Payuthey) ಚಿತ್ರದ ಮೂಲಕ ದಕ್ಷಿಣ ಭಾರತೀಯ ಸಿನಿರಂಗದಲ್ಲಿ ದೊಡ್ಡ ಮಟ್ಟದ ಗುರುತನ್ನು ಪಡೆದರು.
ನಂತರ ಬಾಲಿವುಡ್ಗೆ ಕಾಲಿಟ್ಟ ಮಾಧವನ್, ‘ರೆಹ್ನಾ ಹೈ ತೆರೆ ದಿಲ್ ಮೇನ್’ ಚಿತ್ರದ ಮೂಲಕ ದೇಶದಾದ್ಯಂತ ಅಪಾರ ಅಭಿಮಾನಿಗಳನ್ನು ಗಳಿಸಿದರು. ‘ಮ್ಯಾಡಿ’ ಎಂಬ ಪಾತ್ರದ ಮೂಲಕ ಯುವಜನರ ಮನಗೆದ್ದ ಅವರು, ನಂತರ ಹಿಂದಿ ಹಾಗೂ ದಕ್ಷಿಣ ಭಾರತದ ವಿವಿಧ ಭಾಷೆಗಳ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದರು.
‘ರಂಗ್ ದೇ ಬಸಂತಿ’, ‘3 ಇಡಿಯಟ್ಸ್’, ‘ತನು ವೆಡ್ಸ್ ಮನು’, ‘ತನು ವೆಡ್ಸ್ ಮನು ರಿಟರ್ನ್ಸ್’, ‘ಇರುಧಿ ಸುತ್ರು’, ‘ವಿಕ್ರಂ ವೇಧಾ’ ಮತ್ತು ಇತ್ತೀಚಿನ ‘ಶೈತಾನ್’ ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದ ಅವರು ವಿಮರ್ಶಕರ ಮೆಚ್ಚುಗೆಯ ಜೊತೆಗೆ ವಾಣಿಜ್ಯ ಯಶಸ್ಸನ್ನೂ ಗಳಿಸಿದ್ದಾರೆ. ಇತ್ತೀಚೆಗೆ ತೆರೆಕಂಡು ಬಾಕ್ಸಾಫೀಸ್ ನಲ್ಲಿ ಭಾರಿ ಸದ್ದು ಮಾಡಿದ್ದ ಧುರಂದರ್ ಚಿತ್ರದಲ್ಲೂ ನಟ ಮಾಧವನ್ ಭಾರತದ ಭದ್ರತಾ ಸಲಹೆಗಾರ ಅಜಿತ್ ಸನ್ಯಾಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ನಟನಾಗಿ ಮಾತ್ರವಲ್ಲದೆ, ನಿರ್ದೇಶಕ ಮತ್ತು ಚಿತ್ರಕಥೆಗಾರರಾಗಿಯೂ ಮಾಧವನ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಭಾರತದ ಖ್ಯಾತ ವಿಜ್ಞಾನಿ ನಂಬಿ ನಾರಾಯಣನ್ ಅವರ ಜೀವನಾಧಾರಿತ ‘ರಾಕೆಟ್ರಿ: ದ ನಂಬಿ ಎಫೆಕ್ಟ್’ ಚಿತ್ರದ ಮೂಲಕ ಅವರು ನಿರ್ದೇಶಕರಾಗಿ ಪದಾರ್ಪಣೆ ಮಾಡಿದರು. ಈ ಚಿತ್ರವು ದೇಶ-ವಿದೇಶಗಳಲ್ಲಿ ಅಪಾರ ಪ್ರಶಂಸೆಗೆ ಪಾತ್ರವಾಗಿದ್ದು, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.
ಬಹುಮುಖ ಪ್ರತಿಭೆ
ಸಿನಿಮಾದ ಹೊರತಾಗಿಯೂ ಶಿಕ್ಷಣ, ಪರಿಸರ ಸಂರಕ್ಷಣೆ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ತಮ್ಮ ಸರಳ ವ್ಯಕ್ತಿತ್ವ ಮತ್ತು ಶಿಸ್ತುಬದ್ಧ ಜೀವನಶೈಲಿಯಿಂದ ಮಾಧವನ್ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.
ಚಿತ್ರರಂಗದಲ್ಲಿ ನಿರಂತರ ಹೊಸತನಕ್ಕೆ ಒತ್ತು ನೀಡುತ್ತಾ, ವಾಣಿಜ್ಯ ಮತ್ತು ಅರ್ಥಪೂರ್ಣ ಸಿನೆಮಾಗಳ ನಡುವೆ ಸಮತೋಲನ ಕಾಯ್ದುಕೊಂಡಿರುವ ಮಾಧವನ್ ಅವರಿಗೆ ದೊರೆತಿರುವ ಪದ್ಮಶ್ರೀ ಪ್ರಶಸ್ತಿ, ಭಾರತೀಯ ಕಲಾ ಮತ್ತು ಸಂಸ್ಕೃತಿ ಕ್ಷೇತ್ರಕ್ಕೆ ಅವರು ನೀಡಿರುವ ಅಮೂಲ್ಯ ಕೊಡುಗೆಗೆ ಸಂದ ರಾಷ್ಟ್ರೀಯ ಗೌರವವೆಂದು ಪರಿಗಣಿಸಲಾಗಿದೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ಮಾಧವನ್ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಈ ಗೌರವದ ಹಿನ್ನೆಲೆಯಲ್ಲಿ ಚಿತ್ರರಂಗದ ಅನೇಕ ಗಣ್ಯರು, ಅಭಿಮಾನಿಗಳು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು ಮಾಧವನ್ ಅವರಿಗೆ ಅಭಿನಂದನೆ ಸಲ್ಲಿಸಿದ್ದು, ಅವರ ಸಾಧನೆ ಭಾರತೀಯ ಸಿನಿರಂಗಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರೊಮ್ಯಾಂಟಿಕ್ ನಾಯಕನಾಗಿ ಆರಂಭವಾದ ಅವರ ಸಿನಿಪಯಣ, ಇಂದು ರಾಷ್ಟ್ರೀಯ ಮಟ್ಟದ ನಟ, ನಿರ್ದೇಶಕ ಮತ್ತು ಕಥೆಗಾರನಾಗಿ ರೂಪುಗೊಂಡಿದೆ. ಪದ್ಮಶ್ರೀ ಪ್ರಶಸ್ತಿ ಅವರ ಅದ್ಭುತ ವೃತ್ತಿಜೀವನದ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.
Advertisement