'ಕಷ್ಟದಲ್ಲಿ ಸಹಾಯ ಮಾಡದವರು ಈಗ ಅಭಿನಂದಿಸುತ್ತಿದ್ದಾರೆ': ಬಾಲಿವುಡ್ ಕುರಿತು 'ಹನುಮಾನ್ ಅಂಶ್' ನಿರ್ದೇಶಕ ವಿಶಾಲ್ ಚತುರ್ವೇದಿ

ನಾವು ಸೂರತ್‌ಗೆ ಹೋದೆವು, ಅಲ್ಲಿ ಕೇವಲ ಒಂದೇ ಒಂದು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ನಾವು ಅಲ್ಲಿಗೆ ತಲುಪಿದಾಗ ಪ್ರದರ್ಶನ ನಡೆಯುತ್ತಿತ್ತು. ನಮ್ಮನ್ನು ನೋಡಿ ಜನರು ತೋರಿದ ಪ್ರತಿಕ್ರಿಯೆಯನ್ನು ಕಂಡು ಆ ಚಿತ್ರಮಂದಿರದ ಮಾಲೀಕರು ನಿಬ್ಬೆರಗಾದರು ಎಂದರು.
Hanuman Ansh poster
ಹನುಮಾನ್ ಅಂಶ್ ಪೋಸ್ಟರ್
Updated on

'ಹನುಮಾನ್ ಅಂಶ್' (Hanuman Ansh) ಚಿತ್ರವು ಅನಿರೀಕ್ಷಿತ ಯಶಸ್ಸನ್ನು ಕಂಡಿದ್ದು, ಇತ್ತೀಚಿನ ವಾರಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಓಟ ಮುಂದುವರಿಸಿದೆ. ಆಗಸ್ಟ್ 7 ರಂದು ಬಿಡುಗಡೆಯಾದ ಈ ಚಿತ್ರವು, ದೇಶದಾದ್ಯಂತ ನೂರಾರು ಪ್ರದರ್ಶನ ಕಾಣುತ್ತಿದೆ ಎಂದು ವರದಿಯಾಗಿದೆ.

ಆರಂಭದಲ್ಲಿ 'ಹನುಮಾನ್ ಅಂಶ್' ಭಾರತದಾದ್ಯಂತ 350ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿತ್ತು. ಆದರೆ, ಇತರ ಚಿತ್ರಗಳ ಬಿಡುಗಡೆಯಿಂದ ಉಂಟಾದ ಪೈಪೋಟಿಯು ಚಿತ್ರಮಂದಿರಗಳಲ್ಲಿ ಇದರ ಪ್ರದರ್ಶನದ ವ್ಯಾಪ್ತಿಯನ್ನು ಗಣನೀಯವಾಗಿ ತಗ್ಗಿಸಿತು.

'ದಿ ರೌನಕ್ ಪಾಡ್‌ಕಾಸ್ಟ್' (The Raunac Podcast) ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ವಿಶಾಲ್ ಚತುರ್ವೇದಿ, 'ಈ ಚಿತ್ರವನ್ನು ಜನರೇ ಮುನ್ನಡೆಸಿದರು. ದೊಡ್ಡ ಚಿತ್ರಗಳು ಬಿಡುಗಡೆಯಾಗಲಿದ್ದ ಚಿತ್ರಮಂದಿರಗಳು ನಮ್ಮ ಚಿತ್ರದ ಪ್ರದರ್ಶನಗಳ ಸಂಖ್ಯೆಯನ್ನು ಕಡಿತಗೊಳಿಸಿದವು. 250ರಷ್ಟಿದ್ದ ನಮ್ಮ ಪ್ರದರ್ಶನಗಳ ಸಂಖ್ಯೆ 25ಕ್ಕೆ ಇಳಿಯಿತು. ಪ್ರಮುಖ ಸ್ಥಳಗಳಲ್ಲಿದ್ದ ಪಿವಿಆರ್ ಮತ್ತು ಸಿನಿಪೊಲಿಸ್‌ನಂತಹ ಮಲ್ಟಿಪ್ಲೆಕ್ಸ್‌ಗಳು ನಮ್ಮ ಚಿತ್ರವನ್ನು ಪ್ರದರ್ಶಿಸುವ ಬಗ್ಗೆ ಸಂಶಯ ಹೊಂದಿದ್ದವು' ಎಂದು ಹೇಳಿದರು.

ಚಿತ್ರ ಪ್ರದರ್ಶನಗಳ ಸಂಖ್ಯೆಯಲ್ಲಿನ ಹಠಾತ್ ಕುಸಿತವು. ತಾನು ಅತ್ಯಂತ ಆಸಕ್ತಿಯಿಂದ ರೂಪಿಸಿದ್ದ ಆ ಯೋಜನೆ ವಿಫಲವಾಗಿರಬಹುದು ಎಂದು ವಿಶಾಲ್ ಭಾವಿಸುವಂತೆ ಮಾಡಿತ್ತು. ಇಂತಹ ಸಂದರ್ಭದಲ್ಲಿ, ಇನ್‌ಸ್ಟಾಗ್ರಾಂನಲ್ಲಿದ್ದ ಒಂದು ಪೋಸ್ಟ್ ನನಗೆ ಅನಿರೀಕ್ಷಿತವಾದ ಚೈತನ್ಯ ನೀಡಿತು.

'ಈ ಎಲ್ಲ ಅನಿಶ್ಚಿತತೆಯ ನಡುವೆ, ನಾನು ಸಾಮಾನ್ಯವಾಗಿ ನಿರ್ಲಕ್ಷಿಸುತ್ತಿದ್ದ ಇನ್‌ಸ್ಟಾಗ್ರಾಂ ಪೋಸ್ಟ್ ಒಂದನ್ನು ಗಮನಿಸಿದೆ. ಇವು ಜನರು ಸ್ವತಃ ಬರೆದು, 'ಮಹಾರಾಜ್ ಜಿ'ಯವರ ಸಂದೇಶಗಳೆಂದು ಬಿಂಬಿಸುವ ಪೋಸ್ಟ್‌ಗಳಾಗಿದ್ದವು. ನನ್ನ ಸಿನಿಮಾ ಸೋತಿದೆ ಎಂಬ ಭಾವನೆ ನನ್ನ ಮನದಾಳದಲ್ಲಿತ್ತು. ಆದರೆ, ಅಂತಹ ಸಮಯದಲ್ಲಿ ಆ ಪೋಸ್ಟ್‌ನಲ್ಲಿ, 'ನಿನ್ನ ಕೆಲಸವನ್ನು ಮಾಡು, ಉಳಿದದ್ದನ್ನು ನಾನು ನೋಡಿಕೊಳ್ಳುತ್ತೇನೆ' ಎಂಬ ಸಾಲುಗಳಿದ್ದವು. ಮೊದಲ ವಾರದ ಕೊನೆಯಲ್ಲಿ ಆ ಮಾತುಗಳು ನನಗೆ ವಿಚಿತ್ರವಾದ ಸ್ಫೂರ್ತಿಯನ್ನು ನೀಡಿದವು' ಎಂದರು.

Hanuman Ansh poster
'Hanuman Ansh': ಸಿನಿಮಾ ವೀಕ್ಷಿಸಿದ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್! ಹೇಳಿದ್ದೇನು? Video

ವಿಶಾಲ್ ತಮ್ಮ ತಂಡದೊಂದಿಗೆ ಪ್ರಯಾಣಿಸಿ ವೀಕ್ಷಕರನ್ನು ಖುದ್ದಾಗಿ ಭೇಟಿಯಾಗಲು ನಿರ್ಧರಿಸಿದರು. ಸ್ವಾತಂತ್ರ್ಯ ದಿನಾಚರಣೆಗೆ ಮುಂಚಿನ ಶುಕ್ರವಾರದಂದು, ಅವರು ನಟ ಶೋಬಿನವ್ ಸತ್ಯಾ ಮತ್ತು ಸಂಗೀತ ಸಂಯೋಜಕ ರಿಷಿ ಪಾಠಕ್ ಅವರೊಂದಿಗೆ ಸೂರತ್‌ಗೆ ತೆರಳಿದರು. ಚಿತ್ರದ ಪ್ರದರ್ಶನ ನಡೆಯುತ್ತಿದ್ದಾಗಲೇ ಈ ತಂಡ ಅಲ್ಲಿಗೆ ತಲುಪಿತು. ಪ್ರೇಕ್ಷಕರಿಂದ ಅವರಿಗೆ ಸಿಕ್ಕ ಪ್ರತಿಕ್ರಿಯೆಯು, ಆ ಚಿತ್ರದ ಕುರಿತು ಚಿತ್ರಮಂದಿರದ ಮಾಲೀಕರಲ್ಲಿದ್ದ ದೃಷ್ಟಿಕೋನವನ್ನೇ ಬದಲಿಸಿತು.

'ನಾವು ಸೂರತ್‌ಗೆ ಹೋದೆವು, ಅಲ್ಲಿ ಕೇವಲ ಒಂದೇ ಒಂದು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ನಾವು ಅಲ್ಲಿಗೆ ತಲುಪಿದಾಗ ಪ್ರದರ್ಶನ ನಡೆಯುತ್ತಿತ್ತು. ನಮ್ಮನ್ನು ನೋಡಿ ಜನರು ತೋರಿದ ಪ್ರತಿಕ್ರಿಯೆಯನ್ನು—ಅಂದರೆ ನಮ್ಮನ್ನು ಅಪ್ಪಿಕೊಂಡು ಭಾವುಕರಾಗಿ ಕಣ್ಣೀರು ಹಾಕಿದ್ದನ್ನು—ಕಂಡು ಆ ಚಿತ್ರಮಂದಿರದ ಮಾಲೀಕರು ನಿಬ್ಬೆರಗಾದರು. ಅವರು ತಕ್ಷಣವೇ ಇತರ ಚಿತ್ರಮಂದಿರಗಳಿಗೆ ಕರೆ ಮಾಡಲು ಪ್ರಾರಂಭಿಸಿದರು. ಪರಿಣಾಮವಾಗಿ ಪ್ರದರ್ಶನಗಳ ಸಂಖ್ಯೆ ಹೆಚ್ಚಾಯಿತು. ನಂತರ ನಾವು ವಡೋದರಾ ಮತ್ತು ಅಲಿಗಢ ಸೇರಿದಂತೆ ಹಲವು ಸ್ಥಳಗಳಿಗೆ ತೆರಳಿದೆವು ಮತ್ತು ಅಲ್ಲಿ ಪ್ರದರ್ಶನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಯಿತು' ಎಂದರು.

ನಂತರದ ದಿನಗಳಲ್ಲಿ ವಿಶಾಲ್ ಮತ್ತು ಅವರ ತಂಡವು ಹಲವು ಸ್ಥಳಗಳಿಗೆ ಪ್ರಯಾಣ ಬೆಳೆಸಿತು; ಈ ವೇಳೆ ಅವರು ಚಿತ್ರಮಂದಿರಗಳು ಹಾಗೂ ದೇವಾಲಯಗಳಿಗೆ ಭೇಟಿ ನೀಡುವುದರ ಜೊತೆಗೆ ಪ್ರೇಕ್ಷಕರೊಂದಿಗೆ ನೇರವಾಗಿ ಸಂವಾದ ನಡೆಸಿದರು.

ಅಲಿಗಢದಲ್ಲಿ, ಆ ವಾರ ಪ್ರದರ್ಶನಗೊಂಡ ಮೊದಲ ಶೋನ ಎಲ್ಲ ಟಿಕೆಟ್‌ಗಳು ಕೇವಲ 15 ನಿಮಿಷಗಳಲ್ಲಿ ಮಾರಾಟವಾದವು. ನಂತರದ ದಿನಗಳಲ್ಲಿ ಚಿತ್ರದ ಪ್ರದರ್ಶನವು ವೇಗ ಪಡೆದುಕೊಂಡಿತು ಎಂದರು.

ಚಿತ್ರತಂಡ ಹಂಚಿಕೊಂಡಿರುವ ಮಾಹಿತಿ ಪ್ರಕಾರ, 'ಹನುಮಾನ್ ಅಂಶ್' ಈಗ ₹75 ಕೋಟಿ ಗಳಿಕೆಯ ಮೈಲಿಗಲ್ಲನ್ನು ತಲುಪುವ ಹಂತದಲ್ಲಿದೆ. ಅಲ್ಲದೆ, ಈ ಚಿತ್ರವನ್ನು ₹2 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದು, ಇದು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಬಿಡುಗಡೆಯಾಗಲಿದೆ ಎಂದು ಅವರು ಹೇಳಿದ್ದಾರೆ.

'ಹನುಮಾನ್ ಅಂಶ್' ಚಿತ್ರವು 'ಅವಾರಪನ್ 2' ಮತ್ತು 'ಬಟ್ವಾರಾ' ಚಿತ್ರಗಳೊಂದಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ಅಂತಿಮವಾಗಿ ಯಶಸ್ಸನ್ನು ಕಂಡಿದ್ದರೂ, ಸಿನಿಮಾ ಸಂಕಷ್ಟದಲ್ಲಿದ್ದಾಗ ಬಾಲಿವುಡ್‌ನಿಂದ ತಾನು ನಿರೀಕ್ಷಿಸಿದ್ದಂತಹ ಬೆಂಬಲ ತನಗೆ ಸಿಗಲಿಲ್ಲ ಎಂದು ವಿಶಾಲ್ ಹೇಳಿದರು.

'ಸಿನಿಮಾ ಉತ್ತಮ ಪ್ರದರ್ಶನ ಕಾಣಲು ಪ್ರಾರಂಭಿಸಿದ ನಂತರ, ಹಲವರು ನನಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು. ಅವರ ಹೆಸರುಗಳನ್ನು ಹೇಳಲು ನಾನು ಬಯಸುವುದಿಲ್ಲ. ಅಭಿನಂದಿಸಿದವರಲ್ಲಿ ಮಧುರ್ ಭಂಡಾರ್ಕರ್ ಕೂಡ ಒಬ್ಬರು; ಅವರಿಂದ ನಾನು ಯಾವುದೇ ಬೆಂಬಲ ಕೋರಿರಲಿಲ್ಲ. ಆದರೆ, ಇತರರ ಹೆಸರನ್ನು ನಾನು ಪ್ರಸ್ತಾಪಿಸುತ್ತಿಲ್ಲ ಏಕೆಂದರೆ, ಅವರಿಂದ ನಾನು ಸಹಾಯ ಕೋರಿದ್ದರೂ ಅವರು ನನಗೆ ಸಹಾಯ ಮಾಡಿರಲಿಲ್ಲ. ಹೀಗಾಗಿ, ಈಗ ಅವರು ನನಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ ಎಂಬ ಕಾರಣಕ್ಕಾಗಿಯೇ ಅವರ ಹೆಸರುಗಳನ್ನು ಹೇಳಲು ನಾನು ಇಷ್ಟಪಡುವುದಿಲ್ಲ' ಎಂದರು.

'ಏನು ಫಲ ನೀಡುತ್ತದೆ ಎಂಬುದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ, ಆದರೂ ಅವರು ತಮ್ಮ ಜ್ಞಾನವನ್ನು ಇತರರಿಗೆ ಹಂಚುತ್ತಿರುತ್ತಾರೆ. ಈ ಉದ್ಯಮವು ಗೊಂದಲದಲ್ಲಿರುವ ಜನರಿಂದಲೇ ತುಂಬಿದೆ. ಇಲ್ಲಿ ಎರಡು ಬಗೆಯ ಜನರಿದ್ದಾರೆ: ಒಂದು ಗುಂಪಿನವರು ನಿಜವಾಗಿಯೂ ಚಿತ್ರಗಳನ್ನು ನಿರ್ಮಿಸಲು ಬಯಸುವವರು; ಇನ್ನೊಂದು ಗುಂಪಿನವರಿಗೆ ಯಾವುದೇ ಆಸಕ್ತಿಯಿಲ್ಲದಿದ್ದರೂ, ಚಿತ್ರ ನಿರ್ಮಾಣವನ್ನೂ ಒಮ್ಮೆ ಪ್ರಯತ್ನಿಸಿ ನೋಡಬೇಕು ಎಂದುಕೊಳ್ಳುವವರು' ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com