

ಇತ್ತೀಚಿಗೆ ಬಿಡುಗಡೆಯಾದ ನೀಮ್ ಕರೋಲಿ ಬಾಬಾರ ಜೀವನಧಾರಿತ 'ಹನುಮಾನ್ ಅಂಶ' (Hanuman Ansh) ಸಿನಿಮಾವನ್ನು ಮಾಜಿ ಟೀಂ ಇಂಡಿಯಾ ಆಟಗಾರ ವೀರೇಂದ್ರ ಸೆಹ್ವಾಗ್ ವೀಕ್ಷಿಸಿದ್ದಾರೆ. ಬಳಿಕ ಬಾಬಾ ಅವರೊಂದಿಗಿನ ತಮ್ಮ ಗಾಢವಾದ ಸಂಪರ್ಕದ ಬಗ್ಗೆ ಮಾತನಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಏನಿದೆ? ಸುಮಾರು ಒಂದು ದಶಕದ ಹಿಂದೆ ತಮ್ಮ ಆಪ್ತ ಸ್ನೇಹಿತರೊಬ್ಬರ ಮೂಲಕ ಮಹಾರಾಜ್ ಜಿ ಬಗ್ಗೆ ಮೊದಲು ತಿಳಿದುಕೊಂಡಿದ್ದನ್ನು ನೆನಪಿಸಿಕೊಂಡಿದ್ದಾರೆ. ಅಂದಿನಿಂದಲೂ ತಾನು ಆ ಸಂತನ ಜೀವನ ಮತ್ತು ಬೋಧನೆಗಳ ಬಗ್ಗೆ ಓದುವುದನ್ನು ಮತ್ತು ಕೇಳುವುದನ್ನು ಮುಂದುವರಿಸಿದ್ದೇನೆ. ನೀಮ್ ಕರೋಲಿ ಬಾಬಾ ಅವರ ಜೀವನ, ಪ್ರಭಾವ ಮತ್ತು ಆಧ್ಯಾತ್ಮಿಕ ಪ್ರಯಾಣವನ್ನು ಒಂದೇ ಸಿನಿಮಾದಲ್ಲಿ ಸಂಪೂರ್ಣವಾಗಿ ಸೆರೆಹಿಡಿಯಲು ಸಾಧ್ಯವಿಲ್ಲ ಎಂದು ಒಪ್ಪಿಕೊಳ್ಳುತಾ, ಸುಂದರವಾಗಿ ಸಿನಿಮಾ ಮೂಡಿಬಂದಿದೆ ಎಂದು ಅವರು ಹೇಳಿದ್ದಾರೆ.
ಮಹಾರಾಜ್ ಜಿ ಜೊತೆಗೆ ಸೆಹ್ವಾಗ್ ಸಂಪರ್ಕ: ಸುಮಾರು 10 ವರ್ಷಗಳ ಹಿಂದೆ ಅವರ ಬಗ್ಗೆ ನನಗೆ ಆಸಕ್ತಿ ಮೂಡಿತು ಎಂದು ಸೆಹ್ವಾಗ್ ಹೇಳಿಕೊಂಡಿದ್ದಾರೆ. ಮಹಾರಾಜ್ ಜಿ ಮತ್ತು ಭಕ್ತರ ಮೇಲೆ ಅವರಿದ್ದ ಪ್ರಭಾವದ ಬಗ್ಗೆ ತಿಳಿದುಕೊಳ್ಳುತ್ತಾ ಹೋದಂತೆ ವರ್ಷಗಳ ಕಾಲ ತಮ್ಮ ಕುತೂಹಲ ಹೆಚ್ಚುತ್ತಲೇ ಹೋಯಿತು. ಕೆಲವು ಅನುಭವಗಳು ಮತ್ತು ವ್ಯಕ್ತಿಗಳು ಎಂತಹವು ಎಂದರೆ, ಅವುಗಳನ್ನು ವಿವರಿಸಲು ಪದಗಳೇ ಸಾಲದಾಗುತ್ತವೆ. ಅವರ ಬಗ್ಗೆ ಹೇಳಲು ಎಷ್ಟೇ ಪ್ರಯತ್ನಿಸಿದರೂ, ಅದಕ್ಕೆ ಸಂಪೂರ್ಣ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಆ ಸಂತನ ವ್ಯಕ್ತಿತ್ವ, ಭಕ್ತಿ ಮತ್ತು ಜನರ ಜೀವನದ ಮೇಲೆ ಅವರು ಬೀರಿದ ಪ್ರಭಾವದಿಂದಾಗಿ ಅವರ ಬಗ್ಗೆ "ಅಪಾರ ಆಕರ್ಷಣೆ ಉಂಟಾಯಿತು ಎಂದು ಅವರು ಹೇಳಿದರು.
ನೀಮ್ ಕರೋಲಿ ಬಾಬಾ ಅವರ ಜೀವನವನ್ನು ಒಂದೇ ಸಿನಿಮಾದಲ್ಲಿ ತೋರಿಸುವುದು ಕಷ್ಟಕರವಾಗಿದ್ದರೂ,ಅವರ ಜೀವನದ ಪ್ರಮುಖ ಝಲಕ್ ಅನ್ನು ಪ್ರಸ್ತುತಪಡಿಸುವಲ್ಲಿ ಸಿನಿಮಾ ಯಶಸ್ವಿಯಾಗಿದೆ. ಇದನ್ನು ಬಹಳ ಸುಂದರವಾಗಿ ನಿರ್ಮಿಸಲಾಗಿದೆ ಮತ್ತು ಉತ್ತಮವಾಗಿ ಬರೆಯಲಾಗಿದೆ. ಈ ಚಿತ್ರವು ಮಹಾರಾಜ್ ಅವರಿಗೆ ಸಲ್ಲಿಸಿದ ಸುಂದರ ಸಮರ್ಪಣೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.
ಮಹಾರಾಜ್ ಜಿ ಮತ್ತು ಹಾವುಗಳಿಗೆ ಸಂಬಂಧಿಸಿದ ಒಂದು ನಿರ್ದಿಷ್ಟ ದೃಶ್ಯವು ಸೆಹ್ವಾಗ್ ಅವರ ಮನಸ್ಸಿನಲ್ಲಿ ಉಳಿದುಕೊಂಡಿತು. ಆ ದೃಶ್ಯದಲ್ಲಿ, ಭಕ್ತರೊಬ್ಬರು ಅವರನ್ನು ಶಿವನಿಗೆ ಹೋಲಿಸುತ್ತಾರೆ ಮತ್ತು ಅವರನ್ನು 'ಮುಗ್ಧ' ಎಂದು ಕರೆಯುತ್ತಾರೆ. ಅದಕ್ಕೆ ಮಹಾರಾಜ್ ಜಿ, ಮುಗ್ಧರು ನೀವೇ. ನಮ್ಮ ಹೃದಯದಲ್ಲಿ ಏನಿದೆಯೋ ಅದನ್ನೇ ಕಣ್ಣುಗಳು ಕಾಣುತ್ತವೆ ಎಂದು ಉತ್ತರಿಸುತ್ತಾರೆ.
ನೀಮ್ ಕರೋಲಿ ಬಾಬಾ ಅವರು ನಿಧನರಾಗಿ ದಶಕಗಳು ಕಳೆದಿದ್ದರೂ, ಭಕ್ತರ ಮೇಲೆ ಅವರ ಪ್ರಭಾವವು ಮುಂದುವರೆದಿದೆ ಎಂದು ಹೇಳಿದ ಸೆಹ್ವಾಗ್, ಇಂತಹ ಆಧ್ಯಾತ್ಮಿಕ ವ್ಯಕ್ತಿಗಳು ರಾಷ್ಟ್ರವೊಂದರ ಇತಿಹಾಸದಲ್ಲಿ ಅಪರೂಪಕ್ಕೊಮ್ಮೆ ಮಾತ್ರ ಕಾಣಿಸಿಕೊಳ್ಳುತ್ತಾರೆ ಎಂದಿದ್ದಾರೆ.