ನಿಧಿ ಮಸ್ತಿ

ನಿಧಿ ಸುಬ್ಬಯ್ಯ, ಪ್ರತಿಭೆ ಹಾಗೂ ಚೆಲುವಿನ ದೃಷ್ಟಿಯಿಂದ ಕನ್ನಡ ಚಿತ್ರರಂಗದ ಅನಘ್ರ್ಯ ನಿಧಿ ಎಂದು ನಂಬಲಾಗಿತ್ತು...
ನಿಧಿ ಸುಬ್ಬಯ್ಯ
ನಿಧಿ ಸುಬ್ಬಯ್ಯ

ನಿಧಿ ಸುಬ್ಬಯ್ಯ, ಪ್ರತಿಭೆ ಹಾಗೂ ಚೆಲುವಿನ ದೃಷ್ಟಿಯಿಂದ ಕನ್ನಡ ಚಿತ್ರರಂಗದ ಅನಘ್ರ್ಯ ನಿಧಿ ಎಂದು ನಂಬಲಾಗಿತ್ತು.

ಅದಕ್ಕೆ ತಕ್ಕಂತೆ ಆಕೆ `ಪಂಚರಂಗಿ ಪಾಂವ್ ಪಾಂವ್' ಅನ್ನುತ್ತ ದಿಗಂತ್ ಜತೆ ಮಿಂಚಿದ್ದಳು. ನಂತರ ಸರಿಯಾಗಿ ಸಂಭಾವನೆ ಕೊಡದ ಕನ್ನಡ ನಿರ್ಮಾಪಕರ ಸಹವಾಸ ಸಾಕೆನಿಸಿಂಯೋ ಸೂಕ್ತ ಪಾತ್ರಗಳು ಸಿಗುತ್ತಿಲ್ಲ ಅನಿಸಿಯೋ, ಅಂತೂ ಬಾಲಿವುಡ್ ಹೋಗುತ್ತೇನೆಂದು ಆಕೆ ಹೇಳತೊಡಗಿದಳು. ನಂಬುವವರು ನಂಬಿದರು. ಕೈಗೆಟುಕದ ದ್ರಾಕ್ಷಿ ಹುಳಿ ಅನ್ನುತ್ತಾರಲ್ಲ, ಹಾಗೇ ಈಕೆಯ ಎತ್ತರಕ್ಕೆ ಸುದೀಪ್ ಹೊರತುಪಡಿಸಿ ಇನ್ನಾರೂ ಸರಿ ಹೊಂದೋಲ್ಲ ಎಂಬ ಕಂಪ್ಲೇಂಟುಗಳನ್ನು ಕೆಲ ನಿರ್ದೇಶಕರು ಉದುರಿಸಿದರು.

ಅವೆಲ್ಲ ಹಳೇ ಮಾತು. ನಂತರ ಆಕೆ ಅಕ್ಷಯ್ ಕುಮಾರ್ ಜೊತೆಗೆ `ಓ ಮೈ ಗಾಡ್' ಚಿತ್ರದಲ್ಲಿ ಕಾಣಿಸಿಕೊಂಡಳು. ನಿಧಿಯ ಮಾತು ನಿಜ ಅಂತ ನಂಬುವಂತಾಯಿತು. ಅದಾಗಿ ಎರಡು ವರ್ಷವಾಯಿತು. ಕನ್ನಡದಲ್ಲೂ ಯಾವುದೇ ಚಿತ್ರದಲ್ಲಿ ಆಕೆ ಕಾಣಿಸಲಿಲ್ಲ. ಈಗ ಮತ್ತೆ ಬಾಲಿವುಡ್ ಮಾತು. `ಗ್ರಾಂಡ್ ಮಸ್ತಿ 3' ಎಂಬ ಹಿಂದಿ ಚಿತ್ರದಲ್ಲಿ ತಾನು ನಟಿಸುತ್ತಿದ್ದೇನೆ ಎಂದು ನಿಧಿ ಹೇಳಿಕೊಂಡಿದ್ದಾರೆ.

ಇದು ಮಸ್ತಿ, ಗ್ರಾಂಡ್ ಮಸ್ತಿ ನಂತರದ ಸರಣಿಯ ಮೂರನೇ ಚಿತ್ರ. ನಿರ್ದೇಶಕ ಇಂದ್ರ ಕುಮಾರ್. ನಿಧಿ ಸಂತೋಷಪಡಲು ಕಾರಣವಿದೆ- ಆಕೆ ಇದರಲ್ಲಿ ರಿತೇಶ್ ದೇಶಮುಖ್‍ಗೆ ನಾಯಕಿ. ಚಿತ್ರೀಕರಣ ಆರಂಭವಾಗಿದೆ. ಕನ್ನಡದ ಪ್ರತಿಭೆಗಳು ಬೇರೆ ಭಾಷೆಗಳಿಗೆ ಹೋದರೆ ಪರವಾಗಿಲ್ಲ. ಆದರೆ ಇಲ್ಲೂ ಬಂದು ಮುಖ ಕಾಣಿಸಲಿ ಎಂಬುದು ನಮ್ಮ ಆಶಯ. ಆದರೆ ಇಲ್ಲಿನವರೇ ಅವಕಾಶ ನೀಡದಿದ್ದರೆ? ಕನ್ನಡದ ನಿರ್ಮಾಪಕರಿಗೆ ಹೊರಗಿನವರೇ ಬೇಕು. ಆಗ ನಮ್ಮ ಪ್ರತಿಭೆಗಳೂ ಇಲ್ಲಿಂದಲ್ಲಿಗೆ ಜಿಗಿಯುವುದು ಅನಿವಾರ್ಯವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com