ಬೆಂಗಳೂರು: ಗೋವಾದಲ್ಲಿ ಈ ತಿಂಗಳ 20ರಂದು ಆರಂಭವಾಗುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡ ಚಿತ್ರೋದ್ಯಮ ಬಹಿಷ್ಕಾರ ಹಾಕಿದೆ. ಇದರಿಂದಾಗಿ ಈ ವರ್ಷ ಚಲನಚಿತ್ರೋತ್ಸವದಲ್ಲಿ ಯಾವುದೇ ಕನ್ನಡ ಚಿತ್ರಗಳು ಪ್ರದರ್ಶನಗೊಳ್ಳುತ್ತಿಲ್ಲ. ಜತೆಗೆ, ಕನ್ನಡದ ಪ್ರತಿನಿಧಿಗಳೂ ಕಾಣುವುದಿಲ್ಲ.
ಗೋವಾದಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಮತ್ತು ಕಳಸಾ-ಬಂಡೂರಿ ಯೋಜನೆಯ ವಿಚಾರ ದಲ್ಲಿ ಪ್ರಧಾನಿ ಮಧ್ಯಪ್ರವೇಶಕ್ಕೆ ಒತ್ತಾಯಿಸಿ, ಕನ್ನಡ ಚಿತ್ರೋದ್ಯಮ ಒಟ್ಟಾಗಿ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಬಾರಿ ಪಾಲ್ಗೊಳ್ಳದಿರಲು ನಿರ್ಧರಿಸಿದೆ. ಅಲ್ಲದೇ ಗೋವಾ ಸರ್ಕಾರದ ವಿರುದ್ಧ ಧರಣಿ ಸತ್ಯಾಗ್ರಹ ನಡೆಸಲಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ. ರಾ. ಗೋವಿಂದು ತಿಳಿಸಿದರು.
ಉತ್ಸವದ ಉದ್ಘಾಟನೆಯ ದಿನವಾದ ನವೆಂಬರ್ 20 ರಂದು ಕನ್ನಡ ಚಿತ್ರೋದ್ಯಮವೂ ತನ್ನ ಪ್ರತಿರೋಧ ತೋರಿಸಲು ಬೆಂಗಳೂರಿನ ಆನಂದ್ ರಾವ್ ವೃತ್ತದ ಗಾಂಧಿ ಪ್ರತಿಮೆ ಎದುರು ಬೆಳಗ್ಗೆ 11 ಗಂಟೆಯಿಂ ದ ಸಂಜೆ 5 ರವರೆಗೆ ಬೃಹತ್ ಧರಣಿ ಸತ್ಯಾಗ್ರಹ ನಡೆಸಲಿದೆ ಎಂದರು. ಇದು ಸಾಂಕೇತಿಕ ಧರಣಿ ಸತ್ಯಾಗ್ರಹ. ಇದರಲ್ಲಿ ಹಿರಿತೆರೆ ಹಾಗೂ ಕಿರುತೆರೆ ಸೇರಿದಂತೆ
ಕನ್ನಡ ಚಿತ್ರೋದ್ಯಮದ ಎಲ್ಲ ಸಂಘಟನೆಗಳು ಭಾಗವಹಿಸುತ್ತಿವೆ. ಅಗತ್ಯ ಬಿದ್ದರೆ ತಾವು ಪ್ರಧಾನಿ ಭೇಟಿಗೆ ನಿಯೋಗದೊಂದಿಗೆ ದೆಹಲಿಗೆ ತೆರಳಲೂ ಸಿದ್ಧ ಎಂದರು.
ಕನ್ನಡ ವಿರೋಧಿ: ಕಳಸಾ-ಬಂಡೂರಿ ಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡಿಗರ ಮನವಿಗೆ ಗೋವಾ ಮುಖ್ಯ ಮಂತ್ರಿ ಇದುವರೆಗೂ ಸ್ಪಂದಿಸಿಲ್ಲ. ಕುಡಿಯುವ ನೀರಿನ ವಿಚಾರಕ್ಕೂ ರಾಜಕೀಯ ಮಾಡುತ್ತಿದ್ದಾರೆ. ಗೋವಾದಲ್ಲಿರುವ ಕನ್ನಡಿಗರ ಮೇಲೆ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ. ಗೋವಾ ಮುಖ್ಯಮಂತ್ರಿ ಕನ್ನಡ ವಿರೋಧಿಯಾಗಿದ್ದಾರೆಂದು ಕಿಡಿಕಾರಿದರು.
Advertisement