ಅವತ್ತು ಜಗಳ, ಇವತ್ತು ಡ್ಯುಯೆಟ್

ಅವತ್ತು ಬಹಿರಂಗವಾಗಿ ಜಗಳ ಮಾಡಿಕೊಂಡವರು ಇಂದು ನಗುನಗುತ್ತ ಪೋಸ್ ನೀಡಿದರು. ಅಲ್ಲಿಗೆ `ಗೂಳಿಹಟ್ಟಿ' ಚಿತ್ರದ...
ಪವನ್ ಸೂರ್ಯ - ತೇಜಸ್ವಿನಿ
ಪವನ್ ಸೂರ್ಯ - ತೇಜಸ್ವಿನಿ

ಅವತ್ತು ಬಹಿರಂಗವಾಗಿ ಜಗಳ ಮಾಡಿಕೊಂಡವರು ಇಂದು ನಗುನಗುತ್ತ ಪೋಸ್ ನೀಡಿದರು. ಅಲ್ಲಿಗೆ `ಗೂಳಿಹಟ್ಟಿ' ಚಿತ್ರದ ಪ್ರಚಾರದ ಸಂದರ್ಭದಲ್ಲಿ ಆಡಿಕೊಂಡ ಜಗಳ ಗಿಮಿಕ್ ಎಂಬುದು ಖಚಿತವಾಯಿತು.

ಶಶಾಂಕ್‍ರಾಜ್ ನಿರ್ದೇಶನದ `ಗೂಳಿಹಟ್ಟಿ' ಚಿತ್ರದ ಸಕ್ಸಸ್ ಪ್ರೆಸ್‍ಮೀಟ್ ಕರೆದರೂ ಯಾಕೋ ಆ ಚಿತ್ರ ಸದ್ದು ಮಾಡಲಿಲ್ಲ. ಆದರೆ, ಆ ಚಿತ್ರದ ಬಿಡುಗಡೆ ನಂತರ ಪ್ರಚಾರಕ್ಕೆ ಚಿತ್ರದ ನಾಯಕಿ ತೇಜಸ್ವಿನಿ ಬರಲಿಲ್ಲ ಎಂಬುದು ಮಾತ್ರ ದೊಡ್ಡ ಸುದ್ದಿಯಾಯಿತು. `ಗೂಳಿಹಟ್ಟಿ' ಚಿತ್ರದ ನಾಯಕ ಪವನ್ ಸೂರ್ಯ, ನಿರ್ದೇಶಕ ಶಶಾಂಕ್ ರಾಜ್ ಸೇರಿದಂತೆ ಇಡೀ ಚಿತ್ರತಂಡ ತೇಜಸ್ವಿನಿ ಕಡೆಗೆ ಬೊಟ್ಟು ಮಾಡಿತು. ತೇಜಸ್ವಿನಿ ಕೂಡ ಚಿತ್ರದ ನಾಯಕ ಸೇರಿದಂತೆ ಎಲ್ಲರ ವಿರುದ್ಧ ಗರಂ ಆಗಿಯೇ ಮಾತನಾಡಿದರು.

ಖಾಸಗಿ ವಾಹಿನಿಗಳಲ್ಲಿ ಇಬ್ಬರು ಗಂಟೆಗಳ ಕಾಲ ವಾದ- ಪ್ರತಿವಾದ ಮಾಡಿಕೊಂಡು ವಿವಾದ ಮಾಡಿಕೊಂಡರು. ಮುಂದೆ ಇವರು ಒಟ್ಟಿಗೆ ಸಿನಿಮಾ ಮಾಡುವುದೇ ಇಲ್ಲ ಎನ್ನುವಂತೆ ಜಗಳ ಆಡಿಕೊಂಡರು. ಆದರೆ, ಇದೊಂದು ಪ್ರಚಾರದ ಗಿಮಿಕ್ ಇರಬಹುದೇ? ಎನ್ನುವ ಗುಮಾನಿ ಎಲ್ಲರಿಗೂ ಕಾಡಿತು. ಇದು ನಿಜ ಎನಿಸುವುದಕ್ಕೆ ತುಂಬಾ ದಿನ ಹಿಡಿಯಲಿಲ್ಲ. ಯಾಕೆಂದರೆ ಇತ್ತೀಚೆಗೆ ಒಂದು ಚಿತ್ರಕ್ಕೆ ಮುಹೂರ್ತ ನಡೆಯಿತು. ಆ ಚಿತ್ರದ ನಾಯಕ ಅದೇ ಪವನ್ ಸೂರ್ಯ. ಚಿತ್ರದ ನಾಯಕಿ ಇದೇ ತೇಜಸ್ವಿನಿ. ಅವತ್ತು ಬಹಿರಂಗವಾಗಿ ಜಗಳ ಆಡಿಕೊಂಡವರು ಇವತ್ತು ನಗುನಗುತ್ತ ಚಿತ್ರದ ಮುಹೂರ್ತದಲ್ಲಿ ಒಬ್ಬರಿಗೊಬ್ಬರು ಅಂಟಿಕೊಂಡು ಪೋಸ್ ನೀಡಿದರು. ಅಲ್ಲಿಗೆ `ಗೂಳಿಹಟ್ಟಿ'ಯ ಜಗಳ ಕೇವಲ ಗಿಮಿಕ್‍ಗಾಗಿ ನಡೆದದ್ದೆಂದು ಗೊತ್ತಾಗುವುದಕ್ಕೆ ತುಂಬಾ ಹೊತ್ತು ಹಿಡಿಯಲಿಲ್ಲ.

ಅಂದಹಾಗೆ ಹಟ್ಟಿಯಲ್ಲಿ ಹೀಗೆ ಜಗಳ ಆಡಿಕೊಂಡು ಮತ್ತೆ ಪವನ್ ಸೂರ್ಯ ಹಾಗೂ ತೇಜಸ್ವಿನಿ ಒಂದಾಗುತ್ತಿರುವ ಚಿತ್ರದ ಹೆಸರು `ಅತಿರಥ'. ಭುವನ್ ಚಂದ್ರಕಾಂತ್, ಮಹೇಶ್, ಶಂಕರ್‍ರಾಜ್, ಆರ್.ವಿ.ನಾಗೇಶ್ವರ್ ರಾವ್ ಅವರು ಸೇರಿ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ, ಮುತ್ತುರಾಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಇತ್ತೀಚೆಗಷ್ಟೆ ಚಿತ್ರದ ಮುಹೂರ್ತ ನಡೆಯಿತು.`ಗೂಳಿಹಟ್ಟಿ ಚಿತ್ರದಲ್ಲಿ ಇಬ್ಬರು ಜಗಳ ಆಡಿಕೊಂಡವರು ಈಗ ಒಂದಾಗಿದ್ದೀರಲ್ಲ?' ಎಂದರೆ, `ಅದು ವೈಯಕ್ತಿಕ ಜಗಳವಲ್ಲ. ಸಿನಿಮಾಗಾಗಿ ಮಾಡಿಕೊಂಡ ಗಲಾಟೆ. ಇಷ್ಟಕ್ಕೂ ಜಗಳ ಮಾಡಿಕೊಂಡವರು ಮತ್ತೆ ಒಂದಾಗಬಾರದು ಅಂತ ಏನಾದರೂ ರೂಲ್ಸ್ ಇದೆಯಾ?' ಎಂದು ಮರು ಪ್ರಶ್ನೆ ಹಾಕಿ ನಗುತ್ತಾರೆ ನಟಿ ತೇಜಸ್ವಿನಿ.

`ಅತಿರಥ' ಚಿತ್ರಕ್ಕೂ ಹೀಗೆ ಗಿಮಿಕ್ ಜಗಳ ನಡೆಯುತ್ತದೆಯೇ? ಎನ್ನುವ ಪ್ರಶ್ನೆಯೂ ತೂರಿಬಂದಾಗ ಚಿತ್ರದ ನಾಯಕ ಪವನ್ ಸೂರ್ಯ ಸುಮ್ಮನೆ ನಕ್ಕರು. ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವ ಮುತ್ತುರಾಮ್ï ತಮಿಳಿನಿಂದ ಬಂದವರು. ಪ್ರಭುಸಾಲೋಮನ್ ಅವರ ಚಿತ್ರಗಳಿಗೆ ಕೆಲಸ ಮಾಡಿದ ಅನುಭವ. ಕನ್ನಡದಲ್ಲಿ ಮೊದಲ ಬಾರಿಗೆ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ `ಗೂಳಿಹಟ್ಟಿ'ಯಲ್ಲಿ ಗೂಳಿಗಳಂತೆ ಮಾಧ್ಯಮಗಳಲ್ಲಿ ಕಾಳಗ ಮಾಡಿಕೊಂಡವರು, ಈಗ `ಅತಿರಥ' ಚಿತ್ರದಲ್ಲಿ ಒಂದಾಗಿದ್ದಾರೆ. ಎಲ್ಲವೂ ಸಿನಿಮಾ ಮಾಯೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com