ಬೆಂಗಳೂರು: ಬಿರುಕು ಮೂಡಿದ್ದ ಕಿಚ್ಚ ಸುದೀಪ್ ದಾಂಪತ್ಯ ಮತ್ತೆ ಲಯಕ್ಕೆ ಮರಳಿದೆ. ಇದಕ್ಕೆ ಕಾರಣ ಏನೇ ಇದ್ದರೂ ಅವರಿಬ್ಬರು ಮತ್ತೆ ಒಂದಾಗುತ್ತಿರುವುದು ಸುದೀಪ್ ಅಭಿಮಾನಿಗಳಿಗೆ ಸಂತಸ ತಂದಿದೆ.
ಪರಸ್ಪರ ಸಮ್ಮತಿ ಮೇರೆಗೆ ದಂಪತಿ ವಿಚ್ಛೇಧನಕ್ಕೆ ಸುದೀಪ್ ಮತ್ತು ಪ್ರಿಯಾ ದಂಪತಿ ಅರ್ಜಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆಯೂ ಶುರುವಾಗಿತ್ತು. ಆದರೆ ಸುದೀಪ್ ಗೆ ಕಡೇ ಕ್ಷಣದಲ್ಲಿ ಬೇರೆಲ್ಲಕ್ಕಿಂತ ಹೃದಯದ ಸಂಬಂಧವೇ ಮುಖ್ಯ ಅನ್ನಿಸಿದ್ದರಿಂದ ಕಿಚ್ಚನ ಸಂಸಾರದಲ್ಲಿ ಹೊಸ ಬೆಳಕು ಮೂಡಿಕೊಂಡಿದೆ.
ಒಬ್ಬರಿಗೊಬ್ಬರು ಬೆನ್ನು ತಿರುಗಿಸಿ ಹೊರಟಿದ್ದ ಸುದೀಪ್ ಮತ್ತು ಪ್ರಿಯಾ ಮತ್ತೆ ಒಂದಾಗಿ ಮುಗುಳ್ನಗಲು ಕಾರಣ ಕನಸುಗಾರ ರವಿಚಂದ್ರನ್. ಸಾಮಾನ್ಯವಾಗಿ ರವಿಚಂದ್ರನ್ ಇಂಥಾ ಫ್ಯಾಮಿಲಿ ಮ್ಯಾಟರ್ಗಳಿಗಾಗಲಿ, ಚಿತ್ರರಂಗದ ವಿವಾದಗಳ ಸಂದರ್ಭದಲ್ಲಾಗಲಿ ಮಧ್ಯಸ್ಥಿಕೆ ವಹಿಸೋದು ವಿರಳ.
ಹೀಗಿದ್ದರೂ ರವಿಚಂದ್ರನ್ ಸುದೀಪ್ ವಿಚಾರದಲ್ಲಿ ಮಧ್ಯಸ್ತಿಕೆ ವಹಿಸಿಕೊಂಡಿದ್ದಾರೆಂದರೆ ಆಶ್ಚರ್ಯ. ರವಿಚಂದ್ರನ್ ಕಂಗಾಲಾಗಿ ಕೂತಿದ್ದಾಗ ಸುದೀಪ್ ಮಾಣಿಕ್ಯ ಸಿನಿಮಾ ಮಾಡಿ ಅವರಿಗೆ ತಂದೆಯ ಪಾತ್ರ ನೀಡಿದ್ದರು. ಆ ಚಿತ್ರ ಸೂಪರ್ ಹಿಟ್ಟಾಗಿತ್ತು. ರವಿಚಂದ್ರನ್ಗೆ ಸುದೀಪ್ ಮೇಲೆ ಆರಂಭದಿಂದಲೂ ಒಂದು ಹಿಡಿ ಹೆಚ್ಚೇ ಪ್ರೀತಿ ಇದ್ದದ್ದು ಸುಳ್ಳಲ್ಲ. ಎಷ್ಟೋ ಸಂದರ್ಭಗಳಲ್ಲಿ ಸುದೀಪ್ ನನ್ನ ಹಿರಿ ಮಗನಂತೆ ಅಂತಾ ಹೇಳಿದ್ದಾರೆ. ಅಂಥಾ ಪ್ರೀತಿ ಇರೋದರಿಂದಲೇ ರವಿ ಕಿಚ್ಚನ ದಾಂಪತ್ಯವನ್ನು ಮತ್ತೆ ಸರಿ ದಾರಿಗೆ ತಂದು ನಿಲ್ಲಿಸಿದ್ದಾರೆ.
ಕಿಚ್ಚನ ಆಪ್ತ ಮೂಲಗಳೇ ಹೇಳುವ ಪ್ರಕಾರ, ಈ ಸಾಂಸಾರಿಕ ರಾಮಾಯಣ ಶುರುವಾದಾಗಿನಿಂದಲೇ ಈ ಬಗ್ಗೆ ರವಿಚಂದ್ರನ್ ಕಸಿವಿಸಿಗೊಂಡಿದ್ದರು. ಆದರೆ ಇದರ ಹಿಂದೆ ಸಾಂಸಾರಿಕ ಸಮಸ್ಯೆಗಳು ಇದ್ದುದರಿಂದ ಏನೂ ಹೇಳಲಾಗದೆ ಸುಮ್ಮನಿದ್ದರು. ಆದರೆ ಅದ್ಯಾವಾಗ ಸುದೀಪ್ ಪವರ್ ಆಫ್ ಅಟಾರ್ನಿಯನ್ನು ತಮ್ಮ ಸಹೋದರಿಗೆ ನೀಡಿ ಹತ್ತೊಂಬತ್ತು ಕೋಟಿ ಕೊಟ್ಟು ಪ್ರಿಯಾರಿಂದ ದೂರಾಗುವ ನಿರ್ಧಾರ ಪ್ರಟಿಸಿದರೋ, ಆಗ ರವಿಚಂದ್ರನ್ ನಿಜಕ್ಕೂ ಕಂಗಾಲಾಗಿದ್ದರು.
ಈ ನಡುವೆ ತಿಂಗಳ ಹಿಂದೆ ಸುದೀಪ್ರನ್ನು ಭೇಟಿಯಾದ ರವಿಚಂದ್ರನ್ ನಿನ್ನನ್ನು ಫಾಲೋ ಮಾಡೋ ಮಂದಿ ಲಕ್ಷಾಂತರ ಜನರಿದ್ದಾರೆ. ಹೀಗಿರುವಾಗ ಸಾಂಸಾರಿಕ ಕಾರಣಗಳಿಂದ ಹೀಗೆಲ್ಲ ರಂಪ ಮಾಡಿಕೊಳ್ಳಬಾರದು. ಅದೇನಾಗಿದೆಯೋ ಸರಿಪಡಿಸಿಕೊಂಡು ಮತ್ತೆ ಒಂದಾಗಿ ಬಾಳಿ ಅಂದಿದ್ದರಂತೆ. ಪ್ರಿಯಾರನ್ನು ಕೂಡಾ ಫೋನಲ್ಲಿ ಸಂಪರ್ಕಿಸಿದ್ದ ರವಿ, ಆಕೆಗೂ ಇದೇ ರೀತಿ ಬುದ್ಧಿವಾದ ಹೇಳಿದ್ದರಂತೆ.
ರವಿಚಂದ್ರನ್ ಅಂದರೆ ಅಣ್ಣ ಎಂಬಂಥಾ ಗೌರವ ಉಳಿಸಿಕೊಂಡಿರುವ ಕಿಚ್ಚಾ, ಅವರ ಬುದ್ಧಿವಾದವನ್ನು ಸ್ವೀಕರಿಸಿ ಕಡೆಗೂ ಮಡದಿಯೊಂದಿಗೆ ಸಂಸಾರ ನಡೆಸುವ ನಿರ್ಧಾರ ಕೈಗೊಂಡಿದ್ದಾರೆ. ಆದುದರಿಂದಲೇ ಕೌಟುಂಬಿಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಮತ್ತೆ ಕೂಡಿ ಬಾಳುವ ಸಂದೇಶ ರವಾನಿಸಿದ್ದಾರೆ. ಇದು ಒಂದು ಕಾರಣವಾದರೆ, ಸುದೀಪ್ ಕರಗಲು ಮತ್ತೊಂದು ಕಾರಣ ಮುದ್ದಿನ ಮಗಳು ಸಾನ್ವಿ ಮಮತೆಯೂ ಕಾರಣವಾಯ್ತು!
Advertisement