ಪ್ರತ್ಯೂಷಾ ಬ್ಯಾನರ್ಜಿಗೆ ಪೋಷಕರು ಮಾನಸಿಕ ಕಿರುಕುಳ ನೀಡುತ್ತಿದ್ದರು: ರಾಹುಲ್ ರಾಜ್ ಸಿಂಗ್
ನವದೆಹಲಿ: ಕಿರುತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿಗೆ ಆಕೆಯ ಪೋಷಕರು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು, ಪ್ರತ್ಯೂಷಾ ಗೆಳೆಯ ರಾಹುಲ್ ರಾಜ್ ಸಿಂಗ್ ಆರೋಪಿಸಿದ್ದಾರೆ.
ಪ್ರತ್ಯೂಷಾ ಬ್ಯಾನರ್ಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆ ಸತ್ತ ದಿನದಿಂದ ಇಲ್ಲಿಯವರೆಗೂ ಪ್ರತಿನಿತ್ಯ ಹೊಸಹೊಸ ಮಾಹಿತಿಗಳು ಬಹಿರಂಗವಾಗುತ್ತಿವೆ. ಆರೋಪ ಪ್ರತ್ಯಾರೋಪಗಳು ಮುಂದುವರಿದಿವೆ. ಈ ಬೆನ್ನಲ್ಲೇ, ಪ್ರತ್ಯೂಷಾ ಪೋಷಕರು ಹಣಕ್ಕಾಗಿ ಆಕೆಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ರಾಹುಲ್ ರಾಜ್ ಸಿಂಗ್ ಆರೋಪಿಸಿದ್ದಾರೆ.
ನಟಿ ಪ್ರತ್ಯೂಷಾ ಬ್ಯಾನರ್ಜಿ ಹೆಸರಲ್ಲಿ ಯಾವುದೇ ಬ್ಯಾಂಕ್ ಅಕೌಂಟ್ ಇರಲಿಲ್ಲ. ಆಕೆಯ ತಾಯಿ ಸೋಮ ಬ್ಯಾನರ್ಜಿ ಬ್ಯಾಂಕ್ ಖಾತೆ ಹೊಂದಿದ್ದರು. ಒಂದು ವೇಳೆ ಪ್ರತ್ಯೂಷಾ ಹಣ ನನ್ನ ಬಳಿ ಇದ್ದಿದ್ದರೇ, ನನ್ನ ಅಕೌಂಟ್ ಗೆ ಆಕೆಯ ಹಣ ಡೆಪಾಸಿಟ್ ಆಗಬೇಕಿತ್ತು. ಹಣ ಎಲ್ಲಿ ಹೋಯಿತು. ನನ್ನ ಎಲ್ಲಾ ಬ್ಯಾಂಕ್ ದಾಖಲೆಗಳನ್ನು ನಾನು ನೀಡಲು ಸಿದ್ಧನಿದ್ದೇನೆ.
ಆಕೆಯ ಕುಟುಂಬ ಎಲ್ಲಾ ಖರ್ಚು ವೆಚ್ಚಗಳನ್ನು ನಿಬಾಯಿಸಲು ಪ್ರತ್ಯೂಷಾ ಪೋಷಕರು ಆಕೆಯ ಹೆಸರಿನಲ್ಲಿ ಬ್ಯಾಂಕ್ ಗಳಿಂದ ಸಾಲ ತೆಗೆದುಕೊಳ್ಳುತ್ತಿದ್ದರು ಎಂದು ಆರೋಪಿಸಿದ್ದಾರೆ.
ಪ್ರತ್ಯೂಷಾ ಯಾವುದಾದರೂ ಮದುವೆ ಸಮಾರಂಭಗಳಿಗೆ ಹೋಗಬೇಕೆಂದರೂ ಆಕೆಯ ಪೋಶಕರು ಆಕೆಗೆ ಚಿನ್ನಾಭರಣಗಳನ್ನು ನೀಡುತ್ತಿರಲಿಲ್ಲ. ಜೊತೆಗೆ ಆಕೆಗೆ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ದೂರಿದ್ದಾರೆ.