ಕನ್ನಡಕ್ಕೆ ಒಬ್ಬರೇ ಒಬ್ಬ ನಟಸಾರ್ವಭೌಮ, ಅದು ಡಾ.ರಾಜ್: ಪುನೀತ್ ರಾಜ್ ಕುಮಾರ್

ಸ್ಟಾರ್ ಗಳ ಸಿನಿಮಾ ಬಿಡುಗಡೆಯ ದಿನ ಅಭಿಮಾನಿಗಳ ಪಾಲಿಗೆ ಹಬ್ಬ. ಪವನ್ ಒಡೆಯರ್ ನಿರ್ದೇಶನದ ...
ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್

ಸ್ಟಾರ್ ಗಳ ಸಿನಿಮಾ ಬಿಡುಗಡೆಯ ದಿನ ಅಭಿಮಾನಿಗಳ ಪಾಲಿಗೆ ಹಬ್ಬ. ಪವನ್ ಒಡೆಯರ್ ನಿರ್ದೇಶನದ ಪುನೀತ್ ರಾಜ್ ಕುಮಾರ್ ನಟನೆಯ ಸಾರ್ವಭೌಮ ಚಿತ್ರ ಬಿಡುಗಡೆಯಾಗಿದೆ. ಅಪ್ಪು ಫ್ಯಾನ್ಸ್ ಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಚಿಕ್ಕ ವಯಸ್ಸಿನಲ್ಲಿಯೇ ಬಣ್ಣದ ಲೋಕದ ಕುಟುಂಬದಲ್ಲಿ ಬೆಳೆದು ಅಪಾರ ಅಭಿಮಾನಿಗಳನ್ನು ಹೊಂದಿರುವ ಪರಿಸರದಲ್ಲಿ ಬೆಳೆದ ಪುನೀತ್ ಗೆ ಈ ಹಬ್ಬದ ವಾತಾವರಣ ಹೊಸದಲ್ಲ. ಅಭಿಮಾನಿಗಳ ಉತ್ಸಾಹವನ್ನು ತಮಗೆ ಹಾಗೂ ತಮ್ಮ ಕುಟುಂಬಕ್ಕೆ ನೀಡುತ್ತಿರುವ ಗೌರವ ಎಂದು ಅವರು ಭಾವಿಸುತ್ತಾರೆ.

ನಾನು ಪ್ರತಿನಿತ್ಯ ನೂರಾರು ಜನರನ್ನು ಭೇಟಿ ಮಾಡುತ್ತೇನೆ. ಅವರೆಲ್ಲರೂ ನನ್ನ ತಂದೆಯನ್ನು ಹೊಗಳುತ್ತಾರೆ. ಅದು ನನಗೆ ವರ ಎಂದು ಭಾವಿಸುತ್ತೇನೆ. ನನ್ನ ತಾಯಿ ಪಾರ್ವತಮ್ಮ ರಾಜ್ ಕುಮಾರ್ ಜೊತೆಗೆ ನಿರ್ಮಾಪಕನಾಗಿ ಕೆಲಸ ಮಾಡಿದ ಅನುಭವ ಅದ್ಬುತ ಎಂದು ಹೇಳಿಕೊಳ್ಳುತ್ತಾರೆ.

ವಜ್ರೇಶ್ವರಿ ಕಂಬೈನ್ಸ್ ನಲ್ಲಿ ತಾಯಿಯ ಜೊತೆ ಕೆಲಸ ಮಾಡುವಾಗ ಪ್ರತಿ ಸಲ ನಮ್ಮ ಬ್ಯಾನರ್ ನ ಸಿನಿಮಾ ಬಿಡುಗಡೆಯ ದಿನ ಬೆಳಗ್ಗೆ ಪೂಜೆ ಮಾಡಿ, ಥಿಯೇಟರ್ ಗೆ ಹೋಗಿ ಬೆಳಗಿನ ಶೋ ನೋಡಿಕೊಂಡು ಬರುತ್ತಿದ್ದೆವು. ಅಂದು ಬೆಳಗ್ಗೆ 9 ಗಂಟೆಗೆ ನಮ್ಮ ಸಿನಿಮಾ ಬಗ್ಗೆ ಜನರಿಂದ ಪ್ರತಿಕ್ರಿಯೆ ಬರುತ್ತಿತ್ತು. ಆದರೆ ಇಂದು ಮಧ್ಯರಾತ್ರಿಗೇ ಗೊತ್ತಾಗಿಬಿಡುತ್ತದೆ ಎಂದು ಪುನೀತ್ ಹೇಳುತ್ತಾರೆ.

2002ರಲ್ಲಿ ಮುಖ್ಯವಾಹಿನಿಯ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ ನಂತರ ನಾನು ಯಾವತ್ತಿಗೂ ಕೆಲಸವನ್ನು ಪೂಜೆಯ ತರಹ ಶ್ರದ್ಧೆಯಿಂದ ಮಾಡಿಕೊಂಡು ಬಂದಿದ್ದೇನೆ. ಸಿನಿಮಾ ಯಶಸ್ಸಿನಿಂದ ಬೇರೆ ಬೇರೆ ನಿರ್ದೇಶಕರು, ನಟರು, ತಂತ್ರಜ್ಞರೊಂದಿಗೆ ಕೆಲಸ ಮಾಡಬಹುದು. ಇಂದು ಸಿನಿರಂಗದಲ್ಲಿ ನನ್ನದೇ ಆದ ಗುರುತನ್ನು ಹೊಂದಿದ್ದು ಅದನ್ನು ಇನ್ನಷ್ಟು ವಿಸ್ತರಿಸಬೇಕೆಂದು ಹಂಬಲಿಸುತ್ತೇನೆ. ಸಿನಿಮಾರಂಗದಲ್ಲಿ ಇಷ್ಟು ವರ್ಷಗಳಿಂದ ಕೆಲಸ ಮಾಡುತ್ತಿರುವುದು ಏನನ್ನಿಸುತ್ತಿದೆ ಎಂದಾಗ, ಇದು ನನ್ನ ಉದ್ಯೋಗ, ಅದನ್ನು ನಾನು ಮಾಡಲೇಬೇಕು. ದಿನದ ಅಂತ್ಯಕ್ಕೆ ನಾನು ಒಬ್ಬ ನಟ. ಸಿನಿಮಾ ಗೆಲ್ಲಲಿ, ಬಿಡಲಿ ನಾಳೆ ಮತ್ತೆ ನಾನು ಕೆಲಸದಲ್ಲಿ ತೊಡಗಬೇಕು.ಮುಂದಿನ ಸಿನಿಮಾದಲ್ಲಿ ಇನ್ನಷ್ಟು ಉತ್ತಮವಾದುದನ್ನು ಕೊಡಲು ಮುಂದಾಗಬೇಕು ಎನ್ನುತ್ತಾರೆ ಪುನೀತ್ ರಾಜ್ ಕುಮಾರ್.

ನಟ ಸಾರ್ವಭೌಮ ಚಿತ್ರದಲ್ಲಿ ಪುನೀತ್ ಛಾಯಾಗ್ರಾಹಕ ಪತ್ರಕರ್ತನ ಪಾತ್ರ ನಿಭಾಯಿಸಿದ್ದಾರೆ. ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡುವುದು ನಮ್ಮ ಬ್ಯಾನರ್ ನಲ್ಲಿ ಕೆಲಸ ಮಾಡಿದಂತಹ ಅನುಭವವಾಗುತ್ತದೆ. ಇಲ್ಲಿ ಸ್ಟಂಟ್ ಮಾಸ್ಟರ್ ಪೀಟರ್ ಹೈನ್ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಒಳ್ಳೆಯದಾಗಿದೆ ಎನ್ನುತ್ತಾರೆ ಪುನೀತ್.

ಡಾ ರಾಜ್ ಕುಮಾರ್ 100 ಸಿನಿಮಾ ಪೂರೈಸಿದಾಗ ಅವರ ಅಭಿಮಾನಿಗಳು ನಟಸಾರ್ವಭೌಮ ಎಂಬ ಬಿರುದು ಕೊಟ್ಟಿದ್ದರು. ಇಂದು ಅದೇ ಹೆಸರಿನ ಚಿತ್ರದಲ್ಲಿ ಪುನೀತ್ ನಟಿಸಿದ್ದಾರೆ. ಕರ್ನಾಟಕಕ್ಕೆ ಒಬ್ಬನೇ ಒಬ್ಬ ನಟಸಾರ್ವಭೌಮ ಅದು ಡಾ ರಾಜ್ ಕುಮಾರ್, ಮತ್ತಿನ್ಯಾರೂ ಅಲ್ಲ. ಅಪ್ಪನ ಹೆಸರು, ಕೀರ್ತಿ ಹೇಳಿಕೊಂಡು ಮಾಡಿರುವ ಸಿನಿಮಾ ಇದಲ್ಲ. ಚಿತ್ರದ ನಿರ್ದೇಶಕರು, ನಿರ್ಮಾಪಕರು ಇದಕ್ಕೆ ನಟ ಸಾರ್ವಭೌಮ ಎಂದು ಹೆಸರಿಡಲು ಮುಂದಾದಾಗ ಅದು ಕಥೆಗೆ ಸೂಕ್ತವಾಗುತ್ತದೆ ಎಂದು ಯೋಚಿಸಿ ಎಲ್ಲರೂ ಒಪ್ಪಿಕೊಂಡೆವು ಎಂದು ಚಿತ್ರದ ಶೀರ್ಷಿಕೆ ಬಗೆಗಿನ ಸುದ್ದಿಗೆ ತೆರೆ ಎಳೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com