ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟರಾದ ಕಿಚ್ಚ ಸುದೀಪ್ ಮತ್ತು ದರ್ಶನ್ ಮಧ್ಯೆ ಇದ್ದ ಸ್ನೇಹ ಎರಡು ವರ್ಷಗಳ ಹಿಂದೆ ಮುರಿದು ಬಿದ್ದಾಗ ಅವರ ಅಪಾರ ಅಭಿಮಾನಿಗಳಿಗೆ ನೋವಾಗಿತ್ತು. ತೂಗುದೀಪ ದರ್ಶನ್ ಅವರೇ ಟ್ವಿಟ್ಟರ್ ನಲ್ಲಿ, ಇನ್ನು ನಾವಿಬ್ಬರೂ ಗೆಳೆಯರಲ್ಲ, ಕೇವಲ ಕಲಾವಿದರಷ್ಟೇ ಎಂದು ಘೋಷಿಸಿಕೊಂಡಿದ್ದರು.
ಹಿರಿಯ ಕಲಾವಿದರಾದ ವಿಷ್ಣುವರ್ಧನ್, ಅಂಬರೀಷ್ ಅವರಂತೆ ಕುಚಿಕು ಗೆಳೆಯರು ಎಂದು ಕರೆಸಿಕೊಳ್ಳುತ್ತಿದ್ದ ಇವರಿಬ್ಬರೂ ದೂರವಾದ ನಂತರ ಅನೇಕ ಊಹಾಪೋಹಗಳು ಕೇಳಿಬಂದವು.
ಈ ಬಗ್ಗೆ ಇದೀಗ ಸುದೀಪ್ ಮಾಧ್ಯಮವೊಂದರ ಸಂದರ್ಶನ ವೇಳೆ ಮಾತನಾಡಿದ್ದಾರೆ. ಉತ್ತಮ ಗೆಳೆಯರಾಗಿದ್ದ ನಾವು ದೂರವಾದಾಗ ಎಲ್ಲರಿಗೂ ನೋವಾಗಿದ್ದು ನಿಜ. ನನ್ನ ಕಡೆಯಿಂದ ಏನಾದರೂ ತಪ್ಪಾಗಿದ್ದರೆ ಅದನ್ನು ಸರಿಪಡಿಸಿಕೊಂಡು ದರ್ಶನ್ ಜೊತೆ ಮೊದಲಿನಂತೆ ಸ್ನೇಹ ಮಾಡಲು ನಾನು ಸಿದ್ದ. ನಾನು ಯಾರಿಗೂ ಕೆಟ್ಟದ್ದನ್ನು ಬಯಸಿಲ್ಲ. ಟ್ವಿಟ್ಟರ್ ನಲ್ಲಿ ಅವರನ್ನು ಅನ್ ಫಾಲೋ ಮಾಡಿಲ್ಲ. ದರ್ಶನ್ ಒಳ್ಳೊಳ್ಳೆ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅವರ ಮುಂದಿನ ಯಜಮಾನ ನನ್ನ ಪೈಲ್ವಾನ್ ಚಿತ್ರಕ್ಕಿಂತಲೂ ಹೆಚ್ಚಿನ ಯಶಸ್ಸು ಕಾಣಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
ಭವಿಷ್ಯದಲ್ಲಿ ದರ್ಶನ್ ಜೊತೆ ಒಂದಾಗುವ ಅವಕಾಶ ಸಿಕ್ಕರೆ ಖಂಡಿತಾ ಒಂದಾಗಿ ಅವರ ಜೊತೆ ಸಿನಿಮಾ ಮಾಡಲು ಸಿದ್ದನಿದ್ದೇನೆ, ಆದರೆ ಗೌರವ ಸಿಗದ ಕಡೆ ನಾನು ಹೋಗುವುದಿಲ್ಲ ಎಂದು ಹೇಳಿದರು.
Advertisement