ಇತ್ತೀಚಿಗೆ ರುಸ್ತುಂ ಚಿತ್ರದಲ್ಲಿ ಖಾಕಿ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ , ಮತ್ತೊಂದು ಚಿತ್ರದಲ್ಲಿ ಖಾಕಿ ಸಮವಸ್ತ್ರ ಧರಿಸಲಿದ್ದಾರೆ.
ಪ್ರಸ್ತುತ ಭಜರಂಗಿ-2 ಚಿತ್ರದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡರುವ ಟಗರು ಹಿರೋ, ರವಿ ಅರಸು ನಿರ್ದೇಶನದ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ದಕ್ಷಿಣ ಭಾರತದಲ್ಲಿ ಪ್ರಸಿದ್ಧಿಯಾಗಿರುವ ಸತ್ಯ ಜ್ಯೋತಿ ಫಿಲಂಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.
ಟಗರು ಹಾಗೂ ಮಫ್ತಿಯಲ್ಲಿನ ಶಿವಣ್ಣನ ಪಾತ್ರ ನೋಡಿ ನೋಡಿ ಬೆರಗಾದ ನಿರ್ದೇಶಕರು ಪೊಲೀಸ್ ಪಾತ್ರ ಸರಿಹೊಂದುತ್ತದೆ ಎಂದು ಬಗೆದು ಶಿವಣ್ಣನ ಜೊತೆಗೆ ಚಿತ್ರ ಮಾಡಲಿದ್ದಾರೆ. ಅವರೊಂದಿಗೆ ಸತ್ಯ ಜ್ಯೋತಿ ಫಿಲಂಸ್ ಪ್ರೊಢಕ್ಷನ್ ಹೌಸ್ ಕೈ ಜೋಡಿಸಿರುವುದಾಗಿ ನಿರ್ಮಾಪಕ ತ್ಯಾಗರಾಜನ್ ಹೇಳಿದ್ದಾರೆ.
50 ವರ್ಷದಿಂದಲೂ ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಸತ್ಯ ಜ್ಯೋತಿ ಫಿಲಂಸ್ ಇತ್ತೀಚಿಗೆ ತಮಿಳಿನ ಅಜಿತ್ ಕುಮಾರ್ ಅಭಿಯನದ ವಿಶ್ವಾಸಂ ನಿರ್ಮಾಣ ಮಾಡಿತ್ತು. ಶಿವಣ್ಣನ ಜೊತೆಗೆ ನಿರ್ಮಿಸುತ್ತಿರುವ ಈ ಚಿತ್ರ ಕನ್ನಡದ ಎರಡನೇ ಚಿತ್ರವಾಗಿದೆ. ಈ ಹಿಂದೆ 1986ರಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಜೊತೆಗೆ ಸತ್ಯ ಜ್ಯೋತಿ ಸಿನಿಮಾವನ್ನು ನಿರ್ಮಾಣ ಮಾಡಿತ್ತು.
ಆಕ್ಸನ್ ಎಂಟರ್ ಟ್ರೈನರ್ ಚಿತ್ರವಾಗಿದ್ದು, ಶಿವಣ್ಮ ಅವರ ಭಜರಂಗಿ 2 ಚಿತ್ರದ ನಂತರ ಈ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಫೆಬ್ರವರಿ 2020ರಿಂದ ಚಿತ್ರೀಕರಣ ಆರಂಭಿಸುವ ಯೋಚನೆ ಮಾಡಲಾಗಿದೆ ಎಂದು ನಿರ್ಮಾಣ ಸಂಸ್ಥೆಯ ಸದಸ್ಯರೊಬ್ಬರು ತಿಳಿಸಿದ್ದಾರೆ. ಈ ಮಧ್ಯೆ ಪಾತ್ರವರ್ಗ ಹಾಗೂ ತಾಂತ್ರಿಕ ತಂಡವನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
Advertisement