ಕೊರೋನಾ ಲಾಕ್ ಡೌನ್ ಎಫೆಕ್ಟ್: ಒಟಿಟಿಯತ್ತ ಮುಖ ಮಾಡಿದ 'H/34 ಪಲ್ಲವಿ ಟಾಕೀಸ್'

ತಿಲಕ್​-ಯಜ್ಞಾ ಶೆಟ್ಟಿ ಅಭಿನಯದ ನೂತನ ಚಿತ್ರ 'H/34 ಪಲ್ಲವಿ ಟಾಕೀಸ್' ಕೊರೋನಾ ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಬಿಡುಗಡೆಗಾಗಿ ಓಟಿಟಿ ಪ್ಲಾಟ್​ಫಾರ್ಮ್ ನತ್ತ ಮುಖ ಮಾಡಿದೆ.
H/34 ಪಲ್ಲವಿ ಟಾಕೀಸ್ ಚಿತ್ರ
H/34 ಪಲ್ಲವಿ ಟಾಕೀಸ್ ಚಿತ್ರ
Updated on

ಬೆಂಗಳೂರು: ತಿಲಕ್​-ಯಜ್ಞಾ ಶೆಟ್ಟಿ ಅಭಿನಯದ ನೂತನ ಚಿತ್ರ 'H/34 ಪಲ್ಲವಿ ಟಾಕೀಸ್' ಕೊರೋನಾ ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಬಿಡುಗಡೆಗಾಗಿ ಓಟಿಟಿ ಪ್ಲಾಟ್​ಫಾರ್ಮ್ ನತ್ತ ಮುಖ ಮಾಡಿದೆ.

ಮಾರಕ ಕೊರೋನಾ ವೈರಸ್ ಹಾವಳಿ ಕಳೆದ ವರ್ಷದಂತೆ ಈ ವರ್ಷವೂ ಚಿತ್ರೋದ್ಯಮವನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಕೊರೊನಾ ವೈರಸ್​ ಹಾವಳಿಯಿಂದಾಗಿ ಸಿನಿಮಾ ಶೂಟಿಂಗ್​ ಮತ್ತು ಪ್ರದರ್ಶನಕ್ಕೆ ಬ್ರೇಕ್​ ಬಿದ್ದಿದೆ. ಆದರೂ ಈ ಸಾಂಕ್ರಾಮಿಕ ಸಂದರ್ಭದಲ್ಲಿ ಓಟಿಟಿ ಪ್ಲಾಟ್​ಫಾರ್ಮ್ ಗಳು ಚಿತ್ರೋಧ್ಯಮಿಗಳ  ಆಶಾಕಿರಣವಾಗಿದ್ದು, ಸಾಕಷ್ಟು ಚಿತ್ರಗಳು ಇದೀಗ ಬಿಡುಗಡೆಗಾಗಿ ಓಟಿಟಿ ಪ್ಲಾಟ್​ಫಾರ್ಮ್ ನತ್ತ ಮುಖ ಮಾಡಿವೆ. 

ಇದಕ್ಕೆ ನೂತನ ಸೇರ್ಪಡೆಯಾಗಿ ತಿಲಕ್​-ಯಜ್ಞಾ ಶೆಟ್ಟಿ ಅಭಿನಯದ ನೂತನ ಚಿತ್ರ 'H/34 ಪಲ್ಲವಿ ಟಾಕೀಸ್' ಸೇರ್ಪಡೆಯಾಗಿದ್ದು, ಜೂನ್​ ಎರಡನೇ ವಾರದ ವೇಳೆ ಒಟಿಟಿ ಪ್ಲಾಟ್​ಫಾರ್ಮ್​ ಮೂಲಕ ಈ ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ.

ಈಗಾಗಲೇ ಚಿತ್ರ ಬಿಡುಗಡೆಗೆ ರೆಡಿಯಾಗಿತ್ತಾದರೂ ಕೊರೋನಾ ವೈರಸ್ ಹಾವಳಿಯಿಂದಾಗಿ ಚಿತ್ರ ಬಿಡುಗಡೆ ಮುಂದೂಡಿಕೆಯಾಗಿತ್ತು. ಆದರೆ ಇದೀಗ ಚಿತ್ರ ತಂಡ ಒಟಿಟಿ ಪ್ಲಾಟ್​ಫಾರ್ಮ್​ ಮೂಲಕ ಈ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದೆ. ಈಗಾಗಲೇ ಚಿತ್ರತಂಡ ಚಿತ್ರದ ಒಂದು ಲಿರಿಕಲ್​ ವಿಡಿಯೋ ರಿಲೀಸ್​  ಮಾಡಿತ್ತು. ‘ಬರೆವೆ ಬರೆವೆ ಒಲವ ಕವನ..’ ಎಂಬ ಹಾಡನ್ನು ಆನಂದ್​ ಆಡಿಯೋ ಮೂಲಕ ಬಿಡುಗಡೆ ಮಾಡಲಾಗಿತ್ತು. ಇದಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸಿದ್ದಾರೆ.  

ಸಚೇಂದ್ರ ಪ್ರಸಾದ್, ಅವಿನಾಶ್, ಸುಧಾ ಬೆಳವಾಡಿ, ಅಚ್ಯುತ್​ ಕುಮಾರ್, ಪದ್ಮಜಾ ರಾವ್, ಕುರಿ ಪ್ರತಾಪ್, ವಿಶ್ವ, ಅಮೃತಾ ಮಯೂರಿ, ರಾಜೇಶ್ವರಿ, ರಾಕ್ ಲೈನ್ ಸುಧಾಕರ್, ಅಜಯ್ ರಾಜ್ ಮುಂತಾದವರು ‘H/34 ಪಲ್ಲವಿ ಟಾಕೀಸ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಕಾಲಭೈರವ ಆರ್ಟ್ಸ್ ಲಾಂಛನದಲ್ಲಿ  ತಯಾರಾಗಿರುವ ಈ ಚಿತ್ರಕ್ಕೆ ಮಂಜುನಾಥ್ ಕೆ. ಮತ್ತು ರವಿಕಿರಣ್ ಎಂ. ಗೌಡ ಬಂಡವಾಳ ಹೂಡಿದ್ದಾರೆ. ಹಾರರ್​, ಸಸ್ಪೆನ್ಸ್​-ಥ್ರಿಲ್ಲರ್​ ಮಾದರಿಯಲ್ಲಿ ಈ ಚಿತ್ರ ಮೂಡಿಬಂದಿದ್ದು, ನಿರ್ದೇಶನದ ಜೊತೆ ಕಥೆ, ಚಿತ್ರಕತೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನೂ ಶ್ರೀನಿವಾಸ್​ ಚಿಕ್ಕಣ್ಣ ಅವರೇ ನಿಭಾಯಿಸಿದ್ದಾರೆ.  ಮನೋಹರ್​ ಜೋಶಿ ಛಾಯಾಗ್ರಹಣ ಹಾಗೂ ಅಕ್ಷಯ್​ ಪಿ. ರಾವ್​ ಸಂಕಲನ ಮಾಡಿದ್ದಾರೆ. 

ಕೃಷ್ಣ ಟಾಕೀಸ್‌ ವಿಚಾರ ದುರದೃಷ್ಟಕರ
ಈ ಬಗ್ಗೆ ಮಾತನಾಡಿರುವ ಚಿತ್ರದ ನಿರ್ದೇಶಕರು, 'ಮುಂದಿನ 10 ದಿನಗಳಲ್ಲಿ ಅಧಿಕೃತ ಟ್ರೈಲರ್ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ. ನಾವು ಭಯಾನಕ ಅಂಶವನ್ನು ಹೊಂದಿರುವ ಚಿತ್ರಕಥೆಯನ್ನು ರೂಪಿಸಿದ್ದೇವೆ. ಇದು ಹೆಚ್ಚು ಸೈಕೋ-ಥ್ರಿಲ್ಲರ್ ಆಗಿದೆ, ಇದಕ್ಕಾಗಿ ನಾವು ಪ್ರಪಂಚದಾದ್ಯಂತ ನಡೆಯುತ್ತಿರುವ  ಕೆಲವು ಭಯಾನಕ ಘಟನೆಗಳ ಸ್ಪೂರ್ತಿಯಿಂದ ಕೆಲ ಸನ್ನಿವೇಶಗಳನ್ನು ಮತ್ತು ಅಂಶಗಳನ್ನು ತೆಗೆದುಕೊಂಡು ಚಿತ್ರೀಕರಿಸಿದ್ದೇವೆ ಎಂದು ಹೇಳಿದ್ದಾರೆ.

ಇದೇ ವೇಳೆ ಕೃಷ್ಣಾ ಟಾಕೀಸ್ ಚಿತ್ರದ ಕಥಾಹಂದರ ಮತ್ತು ಈ ಚಿತ್ರದ ನಡುವಿನ ಹೋಲಿಕೆಗಳ ಕುರಿತು ಮಾತನಾಡಿದ ಅವರು, ಈ ಬಗ್ಗೆ ನನ್ನ ಗಮನಕ್ಕೂ ಬಂದಿದೆ. ಆದರೆ ಆ ಬಗ್ಗೆ ನಾನು ಚರ್ಚಿಸಲು ಇಚ್ಚಿಸುವುದಿಲ್ಲ. ನಾನು ಅದನ್ನು ದುರದೃಷ್ಟಕರ ಎಂದು ಭಾವಿಸುತ್ತೇನೆ. ನಾನು ಏಳು ವರ್ಷಗಳ ಹಿಂದೆ ಚಿತ್ರದ  ಕೆಲಸವನ್ನು ಪ್ರಾರಂಭಿಸಿದ್ದೆ. ಅವರು ನಂತರ ಪ್ರಾರಂಭಿಸಿದರು. ನನ್ನ ಕಥಾವಸ್ತುವನ್ನು ಮತ್ತು ನನ್ನ ಒನ್-ಲೈನ್ ಕಥೆಯನ್ನು ಯಾರೋ ಸೋರಿಕೆ ಮಾಡಿದ್ದಾರೆ. ಕೃಷ್ಣ ಟಾಕೀಸ್‌ನ ತಯಾರಕರು ಅದನ್ನು ನನ್ನ ಮುಂದೆ ಬಿಡುಗಡೆ ಮಾಡುವ ಅದೃಷ್ಟ ಹೊಂದಿದ್ದರು ಎಂದು ಹೇಳಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com