ಆತ್ಮಹತ್ಯೆ ಮಾಡಿಕೊಂಡಿಲ್ಲ, ಹುಡುಗಾಟ ಮಾಡಲು ಹೋಗಿ ದುರಂತ: ಸಂಪತ್ ಜಯರಾಮ್ ಸಾವು ಕುರಿತು ನಟ ರಾಜೇಶ್ ಧ್ರುವ ಸ್ಪಷ್ಟನೆ

ಕಿರುತೆರೆಯ ಖ್ಯಾತ ನಟ ಸಂಪತ್‌ ಜಯರಾಮ್‌ ಸಾವು ಪ್ರಕರಣ ಸಾಕಷ್ಟು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದ್ದು, ಈ ಕುರಿತು ನಟ ಹಾಗೂ ಸಂಪತ್ ಅವರ ಸ್ನೇಹಿತ ರಾಜೇಶ್ ಧ್ರುವ ಅವರು ಸ್ಪಷ್ಟನೆ ನೀಡಿದ್ದಾರೆ.
ನಟ ಸಂಪತ್ ಕುಮಾರ್ ಹಾಗೂ ರಾಜೇಶ್ ಧ್ರುವ
ನಟ ಸಂಪತ್ ಕುಮಾರ್ ಹಾಗೂ ರಾಜೇಶ್ ಧ್ರುವ

ಬೆಂಗಳೂರು: ಕಿರುತೆರೆಯ ಖ್ಯಾತ ನಟ ಸಂಪತ್‌ ಜಯರಾಮ್‌ ಸಾವು ಪ್ರಕರಣ ಸಾಕಷ್ಟು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದ್ದು, ಈ ಕುರಿತು ನಟ ಹಾಗೂ ಸಂಪತ್ ಅವರ ಸ್ನೇಹಿತ ರಾಜೇಶ್ ಧ್ರುವ ಅವರು ಸ್ಪಷ್ಟನೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ವಿಡಿಯೋ ಮೂಲಕ ಪೋಸ್ಟ್ ಹಾಕಿರುವ ರಾಜೇಶ್ ಧ್ರುವ ಅವರು, ಸಂಪತ್ ಜಯರಾಮ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಹುಡುಗಾಟ ಮಾಡಲು ಹೋಗಿ ದುರಂತ ಸಂಭವಿಸಿದೆ ಎಂದು ಹೇಳಿದ್ದಾರೆ.

ಸಂಪತ್‌ ಜಯರಾಮ್‌ ನನ್ನ ಪ್ರಾಣ ಸ್ನೇಹಿತ. ನಮ್ಮನ್ನು ಬಿಟ್ಟು ಅಗಲಿದ್ದಾರೆ. ಬಾಲಾಜಿ ಫೋಟೊ ಸ್ಟುಡಿಯೊ ಸಿನಿಮಾ ಅವರ ನಟನೆಗೆ ತುಂಬ ಒಳ್ಳೆಯ ಹೆಸರು ತಂದು ಕೊಟ್ಟಿತ್ತು. ಸಿನಿಮಾ ನೋಡಿರುವ ಪ್ರತಿಯೊಬ್ಬರೂ ಒಂದೊಳ್ಳೆ ನಟ ಸಿಕ್ಕಿದ್ದಾನೆ ನಮ್ಮ ಇಂಡಸ್ಟ್ರಿಗೆ ಎಂದು ತುಂಬಾ ಖುಷಿ ಪಟ್ಟಿದ್ದಾರೆ. ʻಅಗ್ನಿಸಾಕ್ಷಿʼ ಧಾರಾವಾಹಿಯಿಂದ ತುಂಬಾ ಒಳ್ಳೆ ಹೆಸರು ಪಡೆದುಕೊಂಡಿದ್ದರು. ಚಿಕ್ಕಮಗಳೂರು ಮತ್ತು ಕೊಪ್ಪ ಅವರ ಊರು, ಅವರಿಂದ ನನಗೆ ಆ ಊರು ತಂಬಾ ಹತ್ತಿರವಾಗಿದೆ. ಸಂಪತ್ ಮತ್ತು ನಾನು ಒಟ್ಟಿಗೆ ಇಂಡಸ್ಟ್ರಿಗೆ ಬಂದವರು. 2013ರಿಂದ ಜತೆ ಜತೆಗೆ ಅಗ್ನಿಸಾಕ್ಷಿ ಸೀರಿಯಲ್ ಮಾಡಿದ್ದೀವಿ. ಪ್ರತಿಭೆನೇ ಸಂಪತ್‌ಗೆ ತುಂಬಾ ದೊಡ್ಡ ಆಸ್ತಿ’.

ಸಂಪತ್ ಸಾವಿನ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ, ನನ್ನ ಕಣ್ಣಿಗೂ ಒಂದೆರಡು ವಿಡಿಯೊಗಳು ಬಿತ್ತು. ನಿಮ್ಮ ನಿಮ್ಮ ದೃಷ್ಟಿಯಿಂದ ಹೇಳಿಕೆ ಕೊಟ್ಟರೆ ಅದು ಸತ್ಯ ಆಗುವುದಿಲ್ಲ. ಯಾಕೆ ಈ ರೀತಿ ಮನವಿ ಮಾಡುತ್ತಿರುವೆ ಅಂದರೆ ಸಂಪತ್‌ ಅವರಿಗೆ ಅವರದ್ದೇ ಆದ ಕುಟುಂಬ ಇದೆ. ನಮ್ಮಂತೆ ತುಂಬಾ ಜನ ಸ್ನೇಹಿತರಿದ್ದಾರೆ. ನೆಗೆಟಿವ್ ಕಾಮೆಂಟ್ ಮಾಡಿ ನಮ್ಮ ಎಮೋಷನ್‌ನ ತುಂಬಾ ಹರ್ಟ್‌ ಮಾಡುತ್ತಿದ್ದೀರಿ. ಸುಳ್ಳು ಸುದ್ದಿ ಬೇಡ. ನಿಜಾಂಶ ಏನಿದೆ ಅದನ್ನು ಜನರಿಗೆ ತಿಳಿಸುವ ಕೆಲಸ ನಿಮ್ಮಂದ ಆಗಲಿ ಅಷ್ಟೆ. ತುಂಬಾ ಭಾರವಾದ ಮನಸ್ಸಿನಿಂದ ಈ ವಿಡಿಯೊ ಮಾಡುತ್ತಿರುವೆ’ ಎಂದು ಹೇಳಿದ್ದಾರೆ.

ಏಪ್ರಿಲ್‌ 21ರ ರಾತ್ರಿ 2 ಗಂಟೆಗೆ ರವಿ ಅವರಿಂದ ದೂರವಾಣಿ ಕರೆ ಬಂದಿತ್ತು. ನಾನು ಕೂಡ ನಿದ್ರೆಯಲ್ಲಿದ್ದೆ. ಫೋನ್‌ ಸೈಲೆಂಟ್‌ನಲ್ಲಿ ಇರಲಿಲ್ಲ. ರಿಂಗ್ ಆಗಿದ್ದಕ್ಕೆ ಪಿಕ್ ಮಾಡಿ ಮಾತನಾಡಿದೆ. ಸಂಪತ್‌ಗೆ ತುಂಬಾ ಸೀರಿಯಸ್‌ ಎಂದು ಹೇಳಿದರು. ನೋಡಿದಾಗ ಸಂಪತ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಯಾಕೆ ಸಂಪತ್ ಈ ರೀತಿ ಮಾಡಿಕೊಂಡರು ಎಂದು ವಿಚಾರಿಸಿದಾಗ ಅಲ್ಲಿ ಬಂದ ಕಾಮನ್ ಉತ್ತರ ಒಂದೇ. ಹುಡುಕಾಟ ಆಡಲು ಹೋಗಿ ಈ ರೀತಿ ಆಗಿದೆ ಎಂದು.

ಇತ್ತೀಚೆಗೆ ಮದುವೆ ಮಾಡಿಕೊಂಡಿದ್ದ. ಒಂದು ವರ್ಷ ಕೂಡ ಆಗಿರಲಿಲ್ಲ. ಪತ್ನಿ ಚೈತನ್ಯ 5 ತಿಂಗಳ ಗರ್ಭಿಣಿ. 11 ಅಥವಾ 12 ವರ್ಷಗಳ ಕಾಲ ಪ್ರೀತಿಸಿ ಇಬ್ಬರೂ ಮನೆಯಲ್ಲಿ ಒಪ್ಪಿಸಿ ಇಂಟರ್‌ ಕಾಸ್ಟ್‌ ಮದುವೆ ಮಾಡಿಕೊಂಡಿದ್ದರು. ತುಂಬಾ ಚೆನ್ನಾಗಿ ಜೀವನ ಲೀಡ್ ಮಾಡುತ್ತಿದ್ದರು. ಅವರಿಬ್ಬರ ಜೀವನದಲ್ಲಿ ಒಂದು ಹುಳುಕೂ ಇರಲಿಲ್ಲ. ಅವರ ಮದುವೆ ಪ್ರೀ-ವೆಡ್ಡಿಂಗ್ ಶೂಟ್‌ನ ನಾನೇ ಮಾಡಿಕೊಟ್ಟಿದ್ದು. ಮದುವೆಯಲ್ಲಿ ಭಾಗಿಯಾಗಿರುವೆ. ಅವರ ಲವ್‌ ಸ್ಟೋರಿ ಪ್ರತಿಯೊಂದೂ ನಮಗೆ ಗೊತ್ತು’.

ಸಂಪತ್ ಹೇಗೆ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತು. ಅಷ್ಟು ಸಿಂಪಲ್ ವ್ಯಕ್ತಿ. ಆತ್ಮಹತ್ಯೆ ಮಾಡಿಕೊಳ್ಳುವ ವೀಕ್ ಮೈಂಡ್ ಹುಡುಗ ಅಲ್ಲ. ಏಕೆಂದರೆ ಅನೇಕರಿಗೆ ತಿದ್ದಿ ಬುದ್ಧಿ ಹೇಳಿದ್ದಾರೆ. ಮಾನಸಿಕ ನೆಮ್ಮದಿ ಇರಲಿಲ್ಲ, ಆರ್ಥಿಕ ಸಮಸ್ಯೆ ಇತ್ತು, ಗಂಡ-ಹೆಂಡತಿ ನೆಮ್ಮದಿಯಾಗಿ ಇರಲಿಲ್ಲ, ಅವಕಾಶ ಸಿಗಲಿಲ್ಲ ಎಂದು ಡಿಪ್ರೆಶನ್‌ನಲ್ಲಿದ್ದ, ಹಾಗೆ ಹೀಗೆ ಅಂತ ವೀಡಿಯೊ ಹರಿದಾಡುತ್ತಿದೆ. ನೀವು ತಪ್ಪಾಗಿ ಮಾತನಾಡುತ್ತಿದ್ದೀರಾ. ಹೌದು, ಚಾನ್ಸ್‌ ಇರಲಿಲ್ಲ ನಮ್ಮ ತಂಡದಲ್ಲಿ ನಮಗೆ ನಾವೇ ಚಾನ್ಸ್‌ ಸೃಷ್ಟಿ ಮಾಡಿಕೊಳ್ಳುತ್ತಿದ್ವಿ. ಸ್ವಲ್ಪ ವರ್ಷದಲ್ಲಿ ಒಂದೊಳ್ಳೆ ನಟ ಅಂತ ಹೆಸರು ಮಾಡುವ ಸಾಮರ್ಥ್ಯ ಇತ್ತು. ಅಗ್ನಿಸಾಕ್ಷಿ ಧಾರಾವಾಹಿ ನೋಡಿ ಅನೇಕರು ಆತನ ನಟನೆ ಮೆಚ್ಚಿಕೊಂಡಿದ್ದರು. ಸಂಸಾರದಲ್ಲಿ ಸಣ್ಣ ಪುಟ್ಟ ಮಾತುಕತೆ ಅಂತ ಬಂದಾಗ ಹುಡುಗಾಟ ಮಾಡಿಕೊಳ್ಳಲು ಹೋಗಿ ಈ ರೀತಿ ಪರಿಣಾಮ ಬೀರಿದೆ. ದಯವಿಟ್ಟು ಕೆಟ್ಟ ಗಾಸಿಪ್‌ ಮಾಡಬೇಡಿ. ಗಂಡ ಹೆಂಡತಿ ನಡುವೆ ಆದ ಚಿಕ್ಕ ಜಗಳಕ್ಕೆ ನಾನು ಸತ್ತು ಹೋಗುತ್ತೀನಿ, ಹಾಗೆ ಹೀಗೆ ಎಂದು ಹೆದರಿಸಿದ್ದಾನೆ, ಈ ವೇಳೆ ಕುತ್ತಿಗೆ ಲಾಕ್ ಅಗಿ. ದುರಂತ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಕೆಟ್ಟ ಮನಸ್ಸು ಅವನಿಗಿರಲಿಲ್ಲ ಎಂದು ರಾಜೇಶ್ ತಿಳಿಸಿದ್ದಾರೆ.

ಹರಿದಾಡು ಮಾತುಗಳು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಆದವು. ಖಿನ್ನತೆ, ಕುಟುಂಬ ಕಲಹ, ಅವಕಾಶಗಳಿಂದ ವಂಚಿತನಾಗಿ ಆತ್ಮಹತ್ಯೆ ಮಾಡಿಕೊಂಡರು ಎಂಬ ಸುದ್ದಿಗಳು ಹರಿದಾಡುತ್ತಿದ್ದಂತೆ ನಟ ರಾಜೇಶ್ ಧ್ರುವ ಆಪ್ತ ಸ್ನೇಹಿತನ ಬಗ್ಗೆ ಈ ರೀತಿ ಮಾತನಾಡಬೇಡಿ ಎಂದು ವಿಡಿಯೊ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಕಾರಣವನ್ನು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com