ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿಯವರು ಬಾರದ ಲೋಕಕ್ಕೆ ಪಯಣ ಬೆಳೆಸಿ ಇಂದು ಭಾನುವಾರಕ್ಕೆ ಮೂರು ದಿನ ಕಳೆದಿದೆ. ಅಂತಿಮ ಕ್ರಿಯೆ ಕಾರ್ಯದಲ್ಲಿ ಅವರ ಪುತ್ರ ವಿನೋದ್ ರಾಜ್ ಪತ್ನಿ ಅನು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಲೀಲಾವತಿ ಅಮ್ಮನವರು ಎಷ್ಟು ದೊಡ್ಡ ಕಲಾವಿದೆ ಆದರೂ ಜೀವನದಲ್ಲಿ ಬಹಳ ಶಿಸ್ತುಬದ್ಧವಾಗಿದ್ದರು. ಅವರ ಗುಣಗಳನ್ನು ನಾನು ನನ್ನ ಮಗನಿಗೂ ಹೇಳಿಕೊಟ್ಟಿದ್ದೇನೆ. ಅತ್ತೆಯವರಿಂದಲೇ ಅಷ್ಟು ಉತ್ತಮ ಗುಣನಡತೆ, ಶಿಸ್ತುಬದ್ಧ ಜೀವನ, ಸಾಧನೆ ಸಾಧ್ಯವಾಯಿತು. ಅವರನ್ನು ನೋಡಿ ಜೀವನದಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ಅವರಂಥ ಅತ್ತೆ ಪಡೆಯುವುದಕ್ಕೂ ನಾನು ಮತ್ತು ಅವರಂಥ ಅಜ್ಜಿ ಪಡೆಯುವುದಕ್ಕೂ ನನ್ನ ಮಗ ಪುಣ್ಯ ಮಾಡಿದ್ದೇವೆ ಎಂದರು.
ಲೀಲಾವತಿ ಅಮ್ಮನವರು ತೋಟಗಾರಿಕೆ, ಇತರ ಕೆಲಸಗಳಲ್ಲಿ ಬಹಳ ಶಿಸ್ತುಬದ್ಧವಾಗಿ ಇರುತ್ತಿದ್ದರು. ಅವರಂತೆ ಬದುಕಲು, ಸಾಧನೆ ಮಾಡಲು ನಮ್ಮಿಂದ ಸಾಧ್ಯವಿಲ್ಲ, ಆದರೂ ನಮ್ಮಿಂದಾದಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಅವರು ನಟಿಸಿದ ಚಿತ್ರಗಳೆಲ್ಲ ನನಗೆ ಇಷ್ಟ. ಅವರ ಸಾಮಾಜಿಕ ಕಾರ್ಯ ಮಾದರಿ. ಜೀವನವೇ ಬೇರೆಯವರಿಗೆ ಮೀಸಲಿಟ್ಟರು ಎಂದರು.
ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಕನ್ನಡದ ಹಿರಿಯ ನಟಿ ಲೀಲಾವತಿ!
ತಾಯಿ ಕಳೆದುಕೊಂಡ ವಿನೋದ್ ರಾಜ್ ಅವರು ತುಂಬ ದುಃಖದಲ್ಲಿದ್ದಾರೆ. ತಾಯಿ ಪ್ರೀತಿಯನ್ನು ಯಾರೂ ನೀಡಲು ಸಾಧ್ಯವಿಲ್ಲ, ಆದಷ್ಟು ಪ್ರೀತಿ ವಿಶ್ವಾಸ ತೋರಿಸಿ ವಿನೋದ್ ಅವರು ಖುಷಿಯಾಗಿರುವಂತೆ ನೋಡಿಕೊಳ್ಳುತ್ತೇವೆ ಎಂದು ಲೀಲಾವತಿ ಅವರ ಚೆನ್ನೈಯಲ್ಲಿ ವಾಸಿಸುತ್ತಿರುವ ಸೊಸೆ ವಿನು ಹೇಳಿದರು.
ಇನ್ನು ವಿನೋದ್ ರಾಜ್ ಪುತ್ರ ಯುವರಾಜ್, ಮಧ್ಯಮ ವರ್ಗದ ಕುಟುಂಬದಿಂದ ಬಂದು ಇಷ್ಟು ದೊಡ್ಡ ಸಾಧನೆ ಮಾಡಿದ ನಮ್ಮ ಅಜ್ಜಿಯವರು ಸಮಾಜಕ್ಕೆ ಒಂದು ಸ್ಫೂರ್ತಿ ಎಂದರು.
ಲೀಲಾವತಿಯವರ ಸಾವಿನ ಸುದ್ದಿ ಕೇಳುತ್ತಿದ್ದಂತೆ ವಿನೋದ್ ರಾಜ್ ಅವರ ಪತ್ನಿ ಅನು ಮತ್ತು ಮಗ ಯುವರಾಜ್ ಸಹ ಚೆನ್ನೈನಿಂದ ಆಗಮಿಸಿ ಲೀಲಾವತಿಯವರ ಅಂತಿಮ ದರ್ಶನ ಪಡೆದಿದ್ದಾರೆ. ವಿನೋದ್ ರಾಜ್ ಅವರ ಪುತ್ರ ಯುವರಾಜ್, ಚೆನ್ನೈನಲ್ಲಿಯೇ ಅಮ್ಮನ ಜತೆಗೆ ಬೆಳೆಯುತ್ತಿದ್ದಾನೆ. ಸದ್ಯ ಎಂಜಿನಿಯರಿಂಗ್ ಮುಗಿಸಿ ಚೆನ್ನೈಯಲ್ಲಿ ಉದ್ಯೋಗ ಮಾಡುತ್ತಿದ್ದಾನೆ. ಆಗಾಗ ಅಮ್ಮನ ಜತೆಗೆ ಅಪ್ಪ ವಿನೋದ್ ರಾಜ್ ಮನೆಗೆ ಬಂದು ಹೋಗುತ್ತಿದ್ದನು.
ಲೀಲಾವತಿಯವರ ಆರೋಗ್ಯ ಹದಗೆಟ್ಟ ಬಳಿಕವೂ ಅಜ್ಜಿಯನ್ನು ನೋಡಲು ತಾಯಿ ಅನು ಜತೆ ಯುವರಾಜ್ ಆಗಾಗ ಆಗಮಿಸುತ್ತಿದ್ದನು.
Advertisement