ಬೆಂಗಳೂರು: ಬಿಡುಗಡೆಗೂ ಮೊದಲೇ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿದ್ದ ನಟ ದರ್ಶನ್ ಅಭಿನಯದ, ತರುಣ್ ಸುಧೀರ್ ನಿರ್ದೇಶಿಸಿರುವ ‘ಕಾಟೇರ’ ಇದೀಗ ರಾಜ್ಯದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕಾಟೇರ ಸಿನಿಮಾಗೆ ಸಿನಿಪ್ರಿಯರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಬಿಡುಗಡೆಯಾದ ಎರಡೇ ದಿನಕ್ಕೆ ಗಲ್ಲಾಪೆಟ್ಟಿಯಲ್ಲಿ ಕಮಾಲ್ ಮಾಡಿದೆ.
ಡಿಸೆಂಬರ್ 29ರಂದು ಚಿತ್ರ ರಾಜ್ಯದಾದ್ಯಂತ ತೆರೆಕಂಡಿದ್ದು, ಆನ್ಲೈನ್ ಮೂಲಕವೇ ಒಂದು ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟ ಕಂಡಿತ್ತು. ಇದೀಗ ಚಿತ್ರ ಬಿಡುಗಡೆಯಾದ ಎರಡನೇ ದಿನಕ್ಕೆ ಕಾಟೇರ ಸಿನಿಮಾ ಬರೋಬ್ಬರಿ 17.35 ಕೋಟಿ ರೂ. ಸಂಗ್ರಹಿಸಿದೆ. ಚಿತ್ರ ಬಿಡುಗಡೆಯಾದ ಮೊದಲನೇ ದಿನವೇ ಕಾಟೇರ 19.79 ಕೋಟಿ ರೂ. ಗಳಿಸಿತ್ತು. ಈ ಮೂಲಕ ಚಿತ್ರ ಎರಡು ದಿನದಲ್ಲಿ 37.14 ಕೋಟಿ ರೂ. ಬಾಚಿಕೊಂಡಿದೆ.
ಭರ್ಜರಿ ಓಪನಿಂಗ್ ಪಡೆದುಕೊಂಡಿರುವ ಕಾಟೇರ ಎರಡನೇ ದಿನ ಕೂಡ ಅಬ್ಬರಿಸಿದೆ. ಬಾಕ್ಸ್ ಆಫೀಸ್ನಲ್ಲಿ ತನ್ನ ನಾಗಾಲೋಟ ಮುಂದುವರೆಸಿದೆ. ಈ ಚಿತ್ರದ ಮೂಲಕ ಕನಸಿನ ರಾಣಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ್ದಾರೆ.
ಇನ್ನುಳಿದಂತೆ ಚಿತ್ರದಲ್ಲಿ ಹಿರಿಯ ನಟರಾದ ಬಿರಾದಾರ್, ಜಗಪತಿ ಬಾಬು, ಕುಮಾರ್ ಗೋವಿಂದ್, ಮಾಸ್ಟರ್ ರೋಹಿತ್ ಮತ್ತು ಡ್ಯಾನಿಶ್ ಅಖ್ತರ್ ಸೈಫಿ ನಟಿಸಿದ್ದಾರೆ. ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆದಿದ್ದು, ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ, ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
Advertisement