ನಟಿ ರಮ್ಯಾ ಅವರ ನಿರ್ಮಾಣ ಸಂಸ್ಥೆ ಆ್ಯಪಲ್ ಬಾಕ್ಸ್ ಸ್ಟುಡಿಯೋ ಮತ್ತು ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರ ಲೈಟರ್ ಬುದ್ಧ ಫಿಲ್ಮ್ಸ್ ಸಹಯೋಗದಲ್ಲಿ ನಿರ್ಮಾಣವಾಗಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೆ’ ಚಿತ್ರದ ಶೀರ್ಷಿಕೆಗೆ ನಗರದ ಹೆಚ್ಚುವರಿ ಸಿವಿಲ್ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಒಂದಿಲ್ಲೊಂದು ಕಾರಣಗಳಿಗಾಗಿ ಸದ್ದು ಮಾಡುತ್ತಿರುವ ಈ ಸಿನಿಮಾ ಈ ಹಿಂದೆ ಶೂಟಿಂಗ್ಗೆ ಮುಂಚೆಯೇ ರಮ್ಯಾ ಬದಲಿಗೆ ನಾಯಕಿಯಾಗಿ ಸಿರಿ ರವಿಕುಮಾರ್ ಅವರನ್ನು ಘೋಶಿಸಿತು.
ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಸಿನಿಮಾ ಶೀರ್ಷಿಕೆಯಿಂದಾಗಿ ಇದೀಗ ತೊಂದರೆ ಎದುರಿಸುತ್ತಿದೆ. ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಆಕ್ಷೇಪ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿರುವ ನ್ಯಾಯಾಲಯ 'ಸ್ವಾತಿ ಮುತ್ತಿನ ಮಳೆ ಹನಿಯೆ' ಶೀರ್ಷಿಕೆಯನ್ನು ಬಳಸದಂತೆ ತಡೆಯಾಜ್ಞೆ ನೀಡಿದೆ.
ರಾಜೇಂದ್ರಸಿಂಗ್ ಬಾಬು ಅವರು ದಿ. ಅಂಬರೀಶ್ ಮತ್ತು ಸುಹಾಸಿನಿ ಅಭಿನಯದ ಚಿತ್ರಕ್ಕಾಗಿ ‘ಸ್ವಾತಿ ಮುತ್ತಿನ ಮಳೆ ಹನಿಯೆ’ ಎಂಬ ಶೀರ್ಷಿಕೆ ನೋಂದಣಿ ಮಾಡಿದ್ದಾರೆ. ಶೇ 80ರಷ್ಟು ಭಾಗ ಚಿತ್ರೀಕರಣ ಮುಗಿದಿದೆ. ದುರದೃಷ್ಟವಶಾತ್, ಅಂಬರೀಶ್ ಅವರ ನಿಧನದಿಂದ ಚಿತ್ರದ ಚಿತ್ರೀಕರಣವು ಸ್ಥಗಿತವಾಗಿತ್ತು. ಈ ಶೀರ್ಷಿಕೆಯು ರಾಜೇಂದ್ರಸಿಂಗ್ ಬಾಬು ಅವರೇ ನಿರ್ದೇಶಿಸಿರುವ ಬಣ್ಣದ ಗೆಜ್ಜೆ (1990) ಚಿತ್ರದ ಹಾಡಿನಿಂದ ಈ ಶೀರ್ಷಿಕೆಯನ್ನು ಪಡೆಯಲಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಪರವಾಗಿ ಆದೇಶವನ್ನು ನೀಡಿದೆ. ಯಾವುದೇ ಚಿತ್ರತಂಡ ಈ ಶೀರ್ಷಿಕೆಯನ್ನು ಬಳಸದಂತೆ ನಿರ್ಬಂಧಿಸಲಾಗಿದೆ. ರಾಜೇಂದ್ರ ಸಿಂಗ್ ಬಾಬು ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದರು.
ಪೊಗರು ನಿರ್ಮಾಪಕ ಬಿ.ಕೆ. ಗಂಗಾಧರ್ ಅವರು ಕೆಎಫ್ಸಿಸಿಯಲ್ಲಿ 'ಸ್ವಾತಿ ಮುತ್ತಿನ ಮಳೆ ಹನಿಯೆ' ಎಂಬ ಶೀರ್ಷಿಕೆಯನ್ನು ನೋಂದಾಯಿಸಿದ್ದು, ಶೀರ್ಷಿಕೆ ಹಕ್ಕುಗಳನ್ನು ರಮ್ಯಾ ಅವರಿಗೆ ನೀಡಲು ಇಚ್ಛೆ ವ್ಯಕ್ತಪಡಿಸಿದ್ದು, ತಡೆಯಾಜ್ಞೆ ಆದೇಶದಲ್ಲಿ ಅವರ ಹೆಸರನ್ನು ಉಲ್ಲೇಖಿಸಲಾಗಿದೆ. ಈ ಬಗ್ಗೆ ಫಿಲಂ ಚೇಂಬರ್ ಜೊತೆ ಚರ್ಚಿಸಿ, ಅಗತ್ಯವಿದ್ದರೆ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ.
ಇದೇ ವೇಳೆ ಹಾಲಿ ಕೆಎಫ್ಸಿಸಿ ಅಧ್ಯಕ್ಷೆ ಬಾ.ಮ. ಹರೀಶ್ ಅವರ ಸಮ್ಮುಖದಲ್ಲಿ ರಾಜೇಂದ್ರ ಸಿಂಗ್ ಬಾಬು ಅವರು ಕೂಡ ನೋಂದಣಿ ಪ್ರಕ್ರಿಯೆಯಲ್ಲಿ ಸ್ಪಷ್ಟತೆ ಇಲ್ಲದಿರುವ ಬಗ್ಗೆ ಚರ್ಚೆ ನಡೆಸಿ, ತಮ್ಮ ಒಪ್ಪಿಗೆಯಿಲ್ಲದೆ ಶೀರ್ಷಿಕೆ ಬಳಕೆ ಮಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ರಾಜೇಂದ್ರ ಸಿಂಗ್ ಬಾಬು ಅವರು ಈ ಶೀರ್ಷಿಕೆಯನ್ನು ತಾವೇ ಇಟ್ಟುಕೊಳ್ಳುವ ಮತ್ತು ಅದನ್ನು ತಮ್ಮ ಮುಂದಿನ ಚಿತ್ರದಲ್ಲಿ ಬಳಸುವುದರಲ್ಲಿ ಕಟ್ಟುನಿಟ್ಟಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.
Advertisement