
ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರ ಡಿಸೆಂಬರ್ 25 ರಂದು ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರತಂಡ ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು, ಚಿತ್ರದ ಬಗ್ಗೆ ವ್ಯಾಪಕ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈ ವರ್ಷದ ಕೊನೆಯಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು, ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಯಲ್ಲಿ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಬಡಿಸಲು ಸಿದ್ಧವಾಗಿದೆ.
ಮ್ಯಾಕ್ಸ್ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆದಿದ್ದು, ಕೋಟೆ ನಾಡಲ್ಲಿ ಕಾರ್ಯಕ್ರಮ ನಡೆಸುವುದಾಗಿ ನೀಡಿದ್ದ ಭರವಸೆಯನ್ನು ಸುದೀಪ್ ಉಳಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಕೃಷ್ಣ, ಧನಂಜಯ್, ವಿನಯ್ ರಾಜ್ಕುಮಾರ್, ಯುವ ರಾಜಕುಮಾರ್, ನಿರ್ದೇಶಕ ಎಪಿ ಅರ್ಜುನ್ ಸೇರಿದಂತೆ ಅವರ ಕುಟುಂಬ ಮತ್ತು ಉದ್ಯಮದ ಸಹೋದ್ಯೋಗಿಗಳು ಭಾಗಿಯಾಗಿದ್ದರು. ಚಿತ್ರಪ್ರೇಮಿಗಳು ಒಗ್ಗಟ್ಟಾಗಿ ನಿಲ್ಲಬೇಕು ಎಂದು ಕರೆ ನೀಡಿದ ಅವರು, ಬೇರೆ ಭಾಷೆಯ ಚಿತ್ರಗಳಿಗೆ ನೀಡುವ ಬೆಂಬಲವನ್ನು ಕನ್ನಡ ಚಿತ್ರಗಳಿಗೂ ನೀಡಬೇಕು ಎಂದು ಒತ್ತಾಯಿಸಿದರು. 'ನಿಮ್ಮ ಬೆಂಬಲವಿಲ್ಲದಿದ್ದರೆ ಚಿತ್ರಮಂದಿರಗಳು ಇರಲ್ಲ, ಕನ್ನಡ ಚಿತ್ರಗಳು ಬರಲ್ಲ' ಎಂದು ಸುದೀಪ್ ಹೇಳಿದರು.
ಕನ್ನಡದ ನಟರು ಮತ್ತು ತಂತ್ರಜ್ಞರು ಅಪಾರವಾದ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ, ಒಗ್ಗಟ್ಟು ಮತ್ತು ಪ್ರೇಕ್ಷಕರು ನೀಡುವ ಬೆಂಬಲದಿಂದ ಮಾತ್ರ ಕನ್ನಡ ಚಿತ್ರರಂಗವು ನಿಜವಾಗಿಯೂ ಅಭಿವೃದ್ಧಿ ಹೊಂದಲು ಸಾಧ್ಯ ಎಂದ ಅವರು, ಕನ್ನಡ ಚಿತ್ರರಂಗದ ಉಳಿವು ಮತ್ತು ಭವಿಷ್ಯಕ್ಕಾಗಿ ಪ್ರೇಕ್ಷಕರಿಗೆ ಸಂದೇಶ ನೀಡಿದರು.
ಬಹಳ ಸಮಯದ ನಂತರ ತಮ್ಮ ಅಭಿನಯದ ಚಿತ್ರ ಬಿಡುಗಡೆಯಾಗುತ್ತಿರುವುದಕ್ಕೆ ಕ್ಷಮೆಯಾಚಿಸಿದ ಸುದೀಪ್, 'ನಾನು ನಿಮ್ಮನ್ನು ಕಾಯುವಂತೆ ಮಾಡಿದ್ದೇನೆ ಎಂಬುದು ನನಗೆ ತಿಳಿದಿದೆ ಮತ್ತು ನಾನು ಟ್ರೋಲ್ಗಳನ್ನು ನೋಡಿದ್ದೇನೆ. ಇದು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ. ನಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ ಮತ್ತು ಕಡಿಮೆ ಸಮಯದಲ್ಲಿ ನಿಮಗೆ ಹೆಚ್ಚಿನ ಸಿನಿಮಾಗಳನ್ನು ನೀಡುತ್ತೇನೆ ಎಂದು ಭರವಸೆ ನೀಡುತ್ತೇನೆ' ಎಂದರು. ಕಾರ್ಯಕ್ರಮದಲ್ಲಿ ತಮ್ಮನ್ನು ಬೆಂಬಲಿಸಿದ ನಟರು ಮತ್ತು ತಂತ್ರಜ್ಞರಿಗೆ ಕೃತಜ್ಞತೆ ಸಲ್ಲಿಸಿದರು. 'ನಮ್ಮನ್ನು ಮುನ್ನಡೆಸುವ ಒಗ್ಗಟ್ಟಿನ ಕನ್ನಡ ಚಲನಚಿತ್ರೋದ್ಯಮವನ್ನು ನೋಡಲು ನಾನು ಬಯಸುತ್ತೇನೆ' ಎಂದು ಹೇಳಿದರು.
ಯಶಸ್ವಿ ಪ್ರದರ್ಶನ ಕಾಣುತ್ತಿರುವ ಉಪೇಂದ್ರ ಅವರ 'UI' ಗೆ ಹೆಚ್ಚಿನ ಬೆಂಬಲ ನೀಡಿದ ಕನ್ನಡ ಪ್ರೇಕ್ಷಕರಿಗೆ ಧನ್ಯವಾದಗಳನ್ನು ತಿಳಿಸಿದ ಅವರು, ಮ್ಯಾಕ್ಸ್ ಮತ್ತು ಇತರ ಮುಂಬರುವ ಕನ್ನಡ ಚಿತ್ರಗಳನ್ನು ಬೆಂಬಲಿಸುವ ಮೂಲಕ ಪ್ರತಿಯೊಬ್ಬರೂ ಅದೇ ವೇಗವನ್ನು ಮುಂದುವರಿಸಲು ನೆರವಾಗಬೇಕೆಂದು ಒತ್ತಾಯಿಸಿದರು.
ಮ್ಯಾಕ್ಸ್ ಸಿನಿಮಾಗೆ ಈಗಾಗಲೇ ಹೌಸ್ಫುಲ್ ಬುಕಿಂಗ್ಗಳು ಆಗಿವೆ. ಮುಂಜಾನೆ ಶೋಗಳು 6.30ಕ್ಕೆ ಪ್ರಾರಂಭವಾಗಲಿವೆ. ಚಿತ್ರದಲ್ಲಿ ಸಂಯುಕ್ತಾ ಹೊರನಾಡ್, ಸುಕೃತಾ ವಾಗ್ಲೆ, ವರಲಕ್ಷ್ಮಿ ಶರತ್ಕುಮಾರ್, ಉಗ್ರಂ ಮಂಜು ಸೇರಿದಂತೆ ಹೆಚ್ಚಿನ ತಾರಾಗಣವಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಶೇಖರ್ ಚಂದ್ರು ಅವರ ಛಾಯಾಗ್ರಹಣವಿದೆ.
Advertisement