
ವಿಭಿನ್ನ ಚಿತ್ರಕಥೆಗಳನ್ನು ಆರಿಸಿಕೊಳ್ಳುವ ಮೂಲಕ ತನ್ನದೇ ಆದ ಛಾಪು ಮೂಡಿಸಿರುವ ನಟ ರಿಷಿ ಇದೀಗ ಮತ್ತೊಂದು ಕುತೂಹಲಕಾರಿ ಯೋಜನೆಯೊಂದಿಗೆ ಬರಲು ಸಿದ್ಧರಾಗಿದ್ದಾರೆ. ಈ ಬಾರಿ, ಅವರು ಮಂಗಳೂರು ಮೂಲದ ತಂಡದೊಂದಿಗೆ 'ಮಂಗಳಾಪುರಂ' ಎಂಬ ಚಿತ್ರಕ್ಕಾಗಿ ಕೈಜೋಡಿಸುತ್ತಿದ್ದಾರೆ. ಚಿತ್ರವು ಸಸ್ಪೆನ್ಸ್, ನಿಗೂಢತೆ ಮತ್ತು ನಂಬಿಕೆಯ ಅಂಶಗಳನ್ನು ಒಳಗೊಂಡಿರಲಿದೆ. ಉಮಿಲ್ ಮತ್ತು ಡೊಂಬರಾಟದಂತಹ ತುಳು ಚಿತ್ರಗಳಿಗೆ ಹೆಸರುವಾಸಿಯಾದ ರಂಜಿತ್ ರಾಜ್ ಸುವರ್ಣ ಮಂಗಳಾಪುರಂ ಚಿತ್ರ ನಿರ್ದೇಶಿಸಲಿದ್ದಾರೆ. ದಿವಂಗತ ನಟ-ನಿರ್ಮಾಪಕ ಕಾಶಿನಾಥ್ ಅವರ ಪುತ್ರ ಅಭಿಮನ್ಯು ಕಾಶಿನಾಥ್ ಅವರೊಂದಿಗೆ ರಿಷಿ ಮೊದಲ ಬಾರಿಗೆ ತೆರೆ ಹಂಚಿಕೊಳ್ಳಲಿದ್ದಾರೆ.
ಚಿತ್ರದ ಫಸ್ಟ್ಲುಕ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಸಣ್ಣ ಪಟ್ಟಣದಲ್ಲಿನ ಕೊಲೆ ರಹಸ್ಯದ ಝಲಕ್ ಅನ್ನು ನೀಡುತ್ತದೆ. ಕಾಲ್ಪನಿಕ ಪಟ್ಟಣವಾದ ಮಂಗಳಾಪುರಂನಲ್ಲಿ ನಂಬಿಕೆ, ಮೂಢನಂಬಿಕೆ ಮತ್ತು ಪವಾಡಗಳ ವಿಚಾರಗಳ ಕುರಿತು ಹೇಳುತ್ತದೆ.
ರಿಷಿ ಕೊನೆಯ ಬಾರಿಗೆ ರುದ್ರ ಗರುಡ ಪುರಾಣದಲ್ಲಿ ಕಾಣಿಸಿಕೊಂಡಿದ್ದರು. ಅಭಿಮನ್ಯು ಸೂರಿ ಲವ್ಸ್ ಸಂಧ್ಯಾ ಚಿತ್ರದಲ್ಲಿ ಕೊನೆಯ ಬಾರಿಗೆ ನಟಿಸಿದ್ದರು. ಇದೀಗ ಇಬ್ಬರು ಮಂಗಳಾಪುರಂ ಚಿತ್ರದ ಮೂಲಕ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೇಳಲು ಮುಂದಾಗಿದ್ದಾರೆ.
ಚಿತ್ರವನ್ನು ವಿದ್ವಾನ್ ಪ್ರಸನ್ನ ತಂತ್ರಿ ಮೂಡುಬಿದಿರೆ ಮತ್ತು ರಾಮ್ ಪ್ರಸಾದ್ ನಿರ್ಮಿಸಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಅವರ ಸಂಗೀತ ಸಂಯೋಜನೆ ಮತ್ತು ಅಭಿಷೇಕ್ ಕಾಸರಗೋಡು ಅವರ ಛಾಯಾಗ್ರಹಣವಿದೆ.
ಮಂಗಳಾಪುರಂ ಚಿತ್ರದ ಚಿತ್ರೀಕರಣ ಜೂನ್ನಲ್ಲಿ ಪ್ರಾರಂಭವಾಗಲಿದ್ದು, ಕಾರ್ಕಳ, ತೀರ್ಥಹಳ್ಳಿ, ಮಡಿಕೇರಿ ಮತ್ತು ಬೆಂಗಳೂರಿನಾದ್ಯಂತ ಚಿತ್ರೀಕರಣ ನಡೆಯಲಿದೆ. ಕುತೂಹಲಕಾರಿ ಕಥೆ ಮತ್ತು ತೆರೆಯ ಮೇಲಿನ ಹೊಸ ಜೋಡಿಯೊಂದಿಗೆ ನಿರೀಕ್ಷೆ ಮೂಡಿಸಿದೆ.
Advertisement