
ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ನಟಿಸಿರುವ ಕುಲದಲ್ಲಿ ಕೀಳ್ಯಾವುದೊ ಚಿತ್ರದ ‘ನಮ್ ಪೈಕಿ ಒಬ್ಬ ಹೋಗ್ಬುಟ..’ ಹಾಡು ಇತ್ತೀಚೆಗೆ ಬಿಡುಗಡೆ ಆಗಿದೆ. ಈ ಹಾಡು ಪ್ರೇಕ್ಷಕರ ಗಮನ ಸೆಳೆದಿದೆ.
ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದು, ಮನೋಮೂರ್ತಿಯವರ ಸಂಗೀತ ನೀಡಿದ್ದಾರೆ. ಆಂಥೋನಿ ದಾಸ್ ಅವರ ಕಂಠಸಿರಿಯಲ್ಲಿ ಈ ಹಾಡು ಮೂಡಿಬಂದಿದೆ. ಈ ಹಾಡನ್ನು ವಿಶೇಷ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ನಾಯಕ ನಟ ಮನು ಬ್ಯಾಂಡ್ ಬಾರಿಸಿಕೊಂಡು ಬ್ಯಾಂಡ್ ಸೆಟ್ ಅವರ ಹಾಗೂ ಅರ್ಕೆಸ್ಟ್ರಾ ಕಲಾವಿದರ ಜೊತೆಗೆ ವೇದಿಕೆಗೆ ಬಂದು ಈ ಹಾಡನ್ನು ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ನನಗೆ ಕಾಮಿಡಿ ಕಿಲಾಡಿಗಳು ಸಮಯದಲ್ಲಿ ಮನು ನಟನೆ ನೋಡಿ ನೀನು ಇಲ್ಲಿ ಮಾತ್ರ ಅಲ್ಲ. ಸಿನಿಮಾಗೂ ಸಲ್ಲುವವನು ಅಂತ ಹೇಳಿದ್ದೆ. ಈ ಚಿತ್ರದ ಕಥೆ ನಾನು ಹಾಗೂ ಇಸ್ಲಾಮುದ್ದೀನ್ ಸೇರಿ ಬರೆದಿದ್ದೇವೆ. ಈ ಕಥೆಗೆ ಮನು ಸೂಕ್ತ ನಾಯಕ. ಈ ಹಾಡನ್ನು ನಾನು ಬರೆಯಲು ಮನೋಮೂರ್ತಿ ಅವರ ಕಾರು ಚಾಲಕ ಸ್ಪೂರ್ತಿ. ಆತ ಇಂದು ನಮ್ಮೊಂದಿಗಿಲ್ಲ. ಆತನ ಸಾವು ಹಾಗೂ ಆನಂತರ ನಡೆದ ಸನ್ನಿವೇಶಗಳೇ ನಾನು ಹಾಡು ಬರೆಯಲು ಕಾರಣ ಎಂದು ಯೋಗರಾಜ್ ಭಟ್ ಅವರು ಹೇಳಿದರು.
ಸಂಗೀತ ನಿರ್ದೇಶಕ ಮನೋಮೂರ್ತಿಯವರು ಮಾತನಾಡಿ, ನಾನು ನನ್ನ ಜಾನರ್ ಹೊರತು ಪಡಿಸಿ ಸಂಗೀತ ನೀಡಿರುವ ಎರಡನೇ ಚಿತ್ರ ಇದು. ಇಂದು ಬಿಡುಗಡೆಯಾಗಿರುವ ಈ ಹಾಡನ್ನು ಯೋಗರಾಜ್ ಭಟ್ ಮನಮುಟ್ಟುವ ಹಾಗೆ ಬರೆದಿದ್ದಾರೆ ಎಂದು ಹೇಳಿದರು.
ತಾವೇ ಒಬ್ಬ ನಿರ್ದೇಶಕನಾಗಿದರೂ ನನಗೆ ಸಿನಿಮಾ ನಿರ್ದೇಶನಕ್ಕೆ ಅವಕಾಶ ಕೊಟ್ಟಿದ್ದು ಸಂತೋಷ್ ಅವರ ದೊಡ್ಡ ಗುಣ. ಇನ್ನ ಮನೋಮೂರ್ತಿ ಅವರ ಸಂಗೀತ ನಿರ್ದೇಶನದಲ್ಲಿ ಈ ಚಿತ್ರದ ಎಲ್ಲಾ ಹಾಡುಗಳು ಚೆನ್ನಾಗಿ ಬಂದಿದೆ. ಇಂದು ಮೊದಲ ಹಾಡು ಬಿಡುಗಡೆಯಾಗಿದೆ ಎಂದರು.
ನಟ ಮಡೇನೂರು ಮನು ಮಾತನಾಡಿ, ನನಗೆ ಒಂದು ದೊಡ್ದ ಬ್ಯಾನರ್ನಲ್ಲಿ ನಟಿಸುವ ಆಸೆ ಇತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ. ಈ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ಯೋಗರಾಜ್ ಭಟ್ ಅವರಿಗೆ ಧನ್ಯವಾದ. ನಾನು ಮೂಲತಃ ಆರ್ಕೇಸ್ಟ್ರಾ ಕಲಾವಿದ. ಈ ಚಿತ್ರದಲ್ಲೂ ನನ್ನದು ಅದೇ ಪಾತ್ರ ಎಂದರು.
ಯೋಗರಾಜ್ ಸಿನಿಮಾಸ್ ಅರ್ಪಿಸುತ್ತಿರುವ ಈ ಚಿತ್ರವನ್ನು ಪರ್ಲ್ ಸಿನಿ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ಸಂತೋಷ್ ಹಾಗೂ ವಿದ್ಯಾ ದಂಪತಿ ನಿರ್ಮಾಣ ಮಾಡುತ್ತಿದ್ದಾರೆ. ರಾಮ್ ನಾರಾಯಣ್ ನಿರ್ದೇಶಿಸುತ್ತಿದ್ದಾರೆ. ಮನೋಮೂರ್ತಿ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಮಡೆನೂರ್ ಮನು, ಮೌನ ಗುಡ್ಡೆಮನೆ, ಶರತ್ ಲೋಹಿತಾಶ್ವ, ತಬಲನಾಣಿ, ಸೋನಾಲ್ ಮೊಂತೆರೊ, ಕರಿಸುಬ್ಬು, ಡ್ಯಾಗನ್ ಮಂಜು, ಸೀನ ಮುಂತಾದವರು ನಟಿಸಿದ್ದಾರೆ.
Advertisement