
ಬಘೀರ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ರೋರಿಂಗ್ ಸ್ಟಾರ್ ಶ್ರೀಮುರಳಿ ಹೊಸ ಸಿನಿಮಾಗಾಗಿ ತೆಲುಗಿನ ಜನಪ್ರಿಯ ಚಲನಚಿತ್ರ ನಿರ್ಮಾಣ ಸಂಸ್ಥೆ 'ಪೀಪಲ್ ಮೀಡಿಯಾ ಫ್ಯಾಕ್ಟರಿ'ಯೊಂದಿಗೆ ಕೈಜೋಡಿಸುತ್ತಿದ್ದಾರೆ ಎಂದು ಈ ಹಿಂದೆಯೇ ವರದಿ ಮಾಡಿದ್ದೆವು. ಶ್ರೀಮುರಳಿ ಅವರ ಹುಟ್ಟುಹಬ್ಬದಂದು ಹೊಸ ಚಿತ್ರವನ್ನು ಘೋಷಿಸಲಾಗಿತ್ತು. ಆದರೆ, ಚಿತ್ರಕ್ಕೆ ಯಾರ ನಿರ್ದೇಶನವಿದೆ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.
ಟಿಜಿ ವಿಶ್ವ ಪ್ರಸಾದ್ ನಿರ್ಮಾಣದ ಬಹು ನಿರೀಕ್ಷಿತ ಈ ಚಿತ್ರಕ್ಕೆ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ 'ತತ್ಸಮ ತದ್ಭವ' ಚಿತ್ರದ ನಿರ್ದೇಶಕ ವಿಶಾಲ್ ಅತ್ರೇಯ ಅವರು ನಿರ್ದೇಶನ ಮಾಡಲಿದ್ದಾರೆ ಎಂದು ಸಿನಿಮಾ ಎಕ್ಸ್ಪ್ರೆಸ್ ಮೂಲಗಳು ತಿಳಿಸಿವೆ.
ಮೇಘನಾ ರಾಜ್ ಸರ್ಜಾ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ 'ತತ್ಸಮ ತದ್ಭವ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ನಿರ್ದೇಶಕರಾಗಿ ಎಂಟ್ರಿ ನೀಡಿದ ವಿಶಾಲ್, ತಮ್ಮ ತೀಕ್ಷ್ಣ ಮತ್ತು ಸಂಕೀರ್ಣವಾದ ಕಥೆ ಹೇಳುವಿಕೆಗಾಗಿ ಪ್ರಶಂಸೆ ಗಳಿಸಿದರು. ಇದೀಗ ಈ ಹೊಸ ಪ್ರಾಜೆಕ್ಟ್ನೊಂದಿಗೆ ಶ್ರೀಮುರಳಿಯಂತಹ ದೊಡ್ಡ ತಾರೆಯ ಚಿತ್ರ ನಿರ್ದೇಶಿಸುವ ಅವಕಾಶ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ವಿಶಾಲ್ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂಬರುವ ಚಿತ್ರವು ಪೀಪಲ್ ಮೀಡಿಯಾ ಫ್ಯಾಕ್ಟರಿಯ 47ನೇ ಚಿತ್ರವಾಗಿದ್ದು, ಇದನ್ನು ಬಹು ಭಾಷೆಗಳಲ್ಲಿ ಬಿಡುಗಡೆ ಮಾಡುವ ಯೋಜನೆಯೊಂದಿಗೆ ದೊಡ್ಡ ಪ್ರಮಾಣದಲ್ಲಿ ನಿರ್ಮಿಸುವ ನಿರೀಕ್ಷೆಯಿದೆ.
ನಿರ್ದೇಶಕರು ಮತ್ತು ಕಥಾಹಂದರದ ಬಗ್ಗೆ ಅಧಿಕೃತ ಪ್ರಕಟಣೆ ಇನ್ನೂ ಹೊರಬರಬೇಕಿದ್ದರೂ, ಶ್ರೀಮುರಳಿ ಮತ್ತು ವಿಶಾಲ್ ಆತ್ರೇಯ ನಡುವಿನ ಸಹಯೋಗವು ಖಂಡಿತವಾಗಿಯೂ ಹೊಸದಾದ ಭರವಸೆ ಹುಟ್ಟುಹಾಕಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ನಟ ಶ್ರೀಮುರಳಿ ಹಾಲೇಶ್ ಕೋಗುಂಡಿ ನಿರ್ದೇಶನದ ಪರಾಕ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಮಾರ್ಚ್ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಇದಾದ ನಂತರ, ವಿಶಾಲ್ ಆತ್ರೇಯ ಅವರ ನಿರ್ದೇಶನದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.
Advertisement