ಸತೀಶ್ ನೀನಾಸಂ ನಟನೆಯ 'ದಿ ರೈಸ್ ಆಫ್ ಅಶೋಕ' ಜುಲೈನಲ್ಲಿ ತೆರೆಗೆ; ತ್ರಿಭಾಷೆಗಳಲ್ಲಿ ಬಿಡುಗಡೆ
'ಅಶೋಕ ಬ್ಲೇಡ್' ಒಂದು ಕಾಲದಲ್ಲಿ ನಟ ಸತೀಶ್ ನೀನಾಸಂ ಅವರ ಹೃದಯಕ್ಕೆ ಹತ್ತಿರವಾದ ಕನಸಿನ ಯೋಜನೆಯಾಗಿತ್ತು. ಆದರೆ, ಚಿತ್ರದ ನಿರ್ದೇಶಕ ವಿನೋದ್ ದೊಂಡಾಲೆ ಅವರ ದುರಂತ ಮರಣದ ನಂತರ ಚಿತ್ರವನ್ನು ಕೈಬಿಡಲಾಗಿತ್ತು. ನಿರ್ಮಾಪಕರೊಂದಿಗೆ ಸತೀಶ್ ನೀನಾಸಂ ಅವರೇ ಮುಂದೆ ಹೆಜ್ಜೆ ಇಟ್ಟಿರುವುದರಿಂದ ಈ ಮಹತ್ವಾಕಾಂಕ್ಷೆಯ ಯೋಜನೆ ಇದೀಗ ಬೆಳಕನ್ನು ಕಾಣಲು ಸಜ್ಜಾಗಿದೆ. ಚಿತ್ರವು 'ಅಶೋಕ ಬ್ಲೇಡ್'ನಿಂದ 'ದಿ ರೈಸ್ ಆಫ್ ಅಶೋಕ' ಎಂದು ಶೀರ್ಷಿಕೆಯನ್ನು ಬದಲಿಸಿಕೊಂಡಿದೆ.
ಕ್ಷೇತ್ರಪತಿ ಮತ್ತು ಅವತಾರ ಪುರುಷ ಚಿತ್ರಗಳಿಗೆ ಹೆಸರಾಗಿರುವ ಸಂಕಲನಕಾರ ಮನು ಶೇಡ್ಗಾರ್ ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಮೊದಲಿನಿಂದಲೂ ವಿನೋದ್ ದೊಂಡಾಲೆ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿರುವ ಮನು ಅವರಿಗೆ ಚಿತ್ರದ ಬಗ್ಗೆ ದೃಷ್ಟಿ ಮತ್ತು ಪ್ರಗತಿಯ ಬಗ್ಗೆ ಜ್ಞಾನ ಹೊಂದಿದ್ದಾರೆ. ಈಗ ಚಿತ್ರದ ಉಳಿದ ಭಾಗಗಳಿಗೆ ಮತ್ತೆ ಜೀವ ತುಂಬಲು ಮುಂದಾಗಿದ್ದಾರೆ. ಈಗಾಗಲೇ ಚಿತ್ರದ ಸುಮಾರು 80 ಪ್ರತಿಶತದಷ್ಟು ಕೆಲಸಗಳು ಪೂರ್ಣಗೊಂಡಿದ್ದು, ಇನ್ನುಳಿದ ಕೆಲಸವನ್ನು ಚಿತ್ರತಂಡ ಕೈಗೆತ್ತಿಕೊಳ್ಳಲಿದೆ. ಜನವರಿ 9 ರಂದು ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಲಿದೆ.
'ದಿ ರೈಸ್ ಆಫ್ ಅಶೋಕ' ಚಿತ್ರವು ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ತೆರೆಕಾಣಲಿದೆ. ವೃದ್ಧಿ ಕ್ರಿಯೇಷನ್ಸ್ ಮತ್ತು ಸತೀಶ್ ಪಿಕ್ಚರ್ ಹೌಸ್ ನಿರ್ಮಿಸಿರುವ ಈ ಚಿತ್ರವು ಬಿ ಸುರೇಶ್, ಅಚ್ಯುತ್ ಕುಮಾರ್ ಮತ್ತು ಸಂಪತ್ ಮೈತ್ರೇಯ ಸೇರಿದಂತೆ ಇತರ ತಾರಾಬಳಗವನ್ನು ಹೊಂದಿದೆ.
'ಅಯೋಗ್ಯ 2' ಚಿತ್ರದಲ್ಲಿ ಬ್ಯುಸಿಯಾಗಿರುವ ನಟ ಸತೀಶ್ ಅವರಿಗೆ ಈ ಚಿತ್ರದ ಭಾಗವಾಗಿರುವುದಕ್ಕೆ ಸಂತೋಷವಿದೆ. 'ಚಿತ್ರವು ನಿಜವಾಗಿಯೂ ಚೆನ್ನಾಗಿ ಮೂಡಿಬಂದಿದೆ. ಇದು ವಿನೋದ್ ಅವರ ಕನಸಾಗಿತ್ತು ಮತ್ತು ಅವರ ಕನಸನ್ನು ಗೌರವಿಸುವುದು ಮುಖ್ಯ ಎಂದು ನಾವು ಭಾವಿಸಿದ್ದೇವೆ. ಇದು ವಿಶಿಷ್ಟವಾದ ಕಥೆಯನ್ನು ಹೊಂದಿರುವ ಸಿನಿಮಾವಾಗಿದೆ ಮತ್ತು ಅದನ್ನು ನಾವು ಹಾಗೆಯೇ ಉಳಿಯಲು ಬಿಡುವುದಿಲ್ಲ. ಈ ಪಾತ್ರ ಈವರೆಗಿನ ನನ್ನ ವೃತ್ತಿಜೀವನದಲ್ಲಿ ನಾನು ಮಾಡಿದ ಪಾತ್ರಕ್ಕಿಂತ ಭಿನ್ನವಾಗಿದೆ. ಈ ವರ್ಷ ಜುಲೈ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡಲು ನಾವು ಸಿದ್ಧರಿದ್ದೇವೆ' ಎನ್ನುತ್ತಾರೆ ನಟ.
'ದಿ ರೈಸ್ ಆಫ್ ಅಶೋಕ' ಚಿತ್ರದ ತಾಂತ್ರಿಕ ತಂಡದಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ರವಿ ವರ್ಮಾ ಮತ್ತು ವಿಕ್ರಮ್ ಮೋರ್ ಅವರ ಸಾಹಸ ಮತ್ತು ಲವಿತ್ ಅವರ ಛಾಯಾಗ್ರಹಣವನ್ನು ಹೊಂದಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ