
ಕೊಚ್ಚಿ: ಮಲಯಾಳಂನ ಖ್ಯಾತ ಕಿರುತೆರೆ ಹಾಗೂ ಚಿತ್ರ ಕಲಾವಿದ ವಿಷ್ಣು ಪ್ರಸಾದ್ ನಿಧನರಾಗಿದ್ದಾರೆ. ಅವರಿಗೆ 49 ವರ್ಷ ವಯಸ್ಸಾಗಿತ್ತು. ಲಿವರ್ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ವಿಷ್ಣು ಪ್ರಸಾದ್ ಅವರು ಶುಕ್ರವಾರ ಬೆಳಗಿನ ಜಾವ 1.09 ರ ಸುಮಾರಿಗೆ ನಿಧನರಾದರು ಎಂದು ಆಸ್ಟರ್ ಮೆಡ್ಸಿಟಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ವಿಭಾಗ ಹೇಳಿಕೆಯಲ್ಲಿ ತಿಳಿಸಿದೆ. ಯಕೃತ್ತಿನ ಕಸಿಗೆ ಸಿದ್ಧತೆ ನಡೆಸಲಾಗುತಿತ್ತು. ಆದರೆ ಅವರ ನಿಧನ ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಆಘಾತವನ್ನುಂಟುಮಾಡಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ.
ಈ ಸುದ್ದಿಯನ್ನು ನಟ ಮತ್ತು ಸ್ನೇಹಿತ ಕಿಶೋರ್ ಸತ್ಯ ಖಚಿತಪಡಿಸಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. ವಿಷ್ಣು ಪ್ರಸಾದ್ ಅವರು ಯಕೃತ್ತಿನ ಕಸಿ ಮಾಡಲು ತಯಾರಿ ನಡೆಸುತ್ತಿದ್ದರು, ಅವರ ಮಗಳು ದಾನಿಯಾಗಿ ಮುಂದೆ ಬಂದಿದ್ದರು.
ಶಸ್ತ್ರ ಚಿಕಿತ್ಸೆಗೆ ರೂ. 30 ಲಕ್ಷ ಭರಿಸಬೇಕಾದ್ದರಿಂದ ಅವರ ಕುಟುಂಬ ಸಾಕಷ್ಟು ತೊಂದರೆಗೆ ಸಿಲುಕಿತ್ತು. ಅಸೋಸಿಯೇಷನ್ ಆಫ್ ಟೆಲಿವಿಷನ್ ಮೀಡಿಯಾ ಆರ್ಟಿಸ್ಟ್ಸ್ (ATMA)ನಿಧಿಸಂಗ್ರಹಣೆ ಅಭಿಯಾನವನ್ನು ಪ್ರಾರಂಭಿಸಿತು, ಆದರೆ ಗುರುವಾರ ರಾತ್ರಿ ಅವರ ಸ್ಥಿತಿ ತೀವ್ರವಾಗಿ ಹದಗೆಟ್ಟು ಸಾವನ್ನಪ್ಪಿದ್ದಾರೆ. ಅವರು ತಮ್ಮ ಪುತ್ರಿಯರಾದ ಅಭಿರಾಮಿ ಮತ್ತು ಅನಾನಿಕಾ ಅವರನ್ನು ಅಗಲಿದ್ದಾರೆ.
ವಿಷ್ಣು ಪ್ರಸಾದ್ ಅವರು ಸಿನಿಮಾ ಮತ್ತು ಕಿರುತೆರೆ ಎರಡರಲ್ಲೂ ಉತ್ತಮ ಅಭಿನಯಕ್ಕಾಗಿ ಹೆಸರುವಾಸಿಯಾಗಿದ್ದರು. 2001ರಲ್ಲಿ ಅವರು ನಟಿಸಿದ ಕಾಸಿ, ಕೈಯೆತುಂ ದೂರತ್ (2002) ರನ್ವೇ (2004), ಲಯನ್ (2006), ಲೋಕನಾಥನ್ ಐಎಎಸ್ (2005) ಮತ್ತಿತರ ಚಲನಚಿತ್ರಗಳಲ್ಲಿನ ಅವರ ಪಾತ್ರ ಜನರ ಮನ ಗೆದ್ದಿತ್ತು. ಮಲಯಾಳಂ ಕಿರುತೆರೆಯಲ್ಲಿ ಸಾಕಷ್ಟು ಮಿಂಚಿದ್ದರು.
Advertisement