
ಬೆಂಗಳೂರು: ಪಹಲ್ಗಾಮ್ ನಲ್ಲಿ 24 ಹಿಂದೂಗಳು ಸೇರಿದಂತೆ 26 ಪ್ರವಾಸಿಗರ ನರಮೇಧಕ್ಕೆ ಭಾರತ ಪ್ರತಿಕಾರದ ಸಲುವಾಗಿ ಆಪರೇಷನ್ ಸಿಂಧೂರ್ ಹೆಸರಲ್ಲಿ ಪ್ರಮುಖ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿತ್ತು. ಆದರೆ ಇದನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಇದಕ್ಕೆ ಪ್ರತಿಯಾಗಿ ಭಾರತ ಡ್ರೋನ್ ಮತ್ತು ಕ್ಷಿಪಣಿಗಳನ್ನು ಹಾರಿಸಿದ್ದು ಪಾಕಿಸ್ತಾನದ ಪ್ರಮುಖ ನಗರಗಳು ದಾಳಿಗೊಳಗಾಗಿವೆ.
ಭಾರತೀಯ ಸೇನೆ ಯಶಸ್ವಿಯಾಗಿ ಆಪರೇಷನ್ ಸಿಂಧೂರ್ ನಡೆಯುತ್ತಿದೆ. ಆಪರೇಷನ್ ಸಿಂಧೂರ್ ಭಾರತೀಯರ ಭಾವನಾತ್ಮಕತೆಯನ್ನು ಮುಟ್ಟಿದೆ. ಈಗ ಇದನ್ನೇ ಲಾಭ ಮಾಡಿಕೊಳ್ಳುವ ಸಲುವಾಗಿ ಭಾರತೀಯ ಚಿತ್ರರಂಗದ ನಿರ್ಮಾಪಕರು ಆಪರೇಷನ್ ಸಿಂಧೂರ್ ಟೈಟಲ್ ಗಾಗಿ ಮುಗಿಬೀಳುತ್ತಿದ್ದಾರೆ. ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಾದ ಮಹಾವೀರ್ ಜೈನ್ ಕಂಪನಿ, ಟಿ ಸೀರಿಸ್, ಝೀ ಸ್ಟುಡಿಯೋಸ್, ನಿರ್ದೇಶಕರಾದ ಮಧುರ್ ಭಂಡಾರ್ಕರ್, ಅಶೋಕ್ ಪಂಡಿತ್ ಸಹ ಟೈಟಲ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಚಿತ್ರದ ಟೈಟಲ್ ಗಾಗಿ ಪೈಪೋಟಿ ಎದುರಾಗಿದ್ದು ಕೇವಲ ಎರಡು ದಿನಗಳಲ್ಲಿ 30ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಬರೋಬ್ಬರಿ ಖ್ಯಾತ 15 ಸಿನಿಮಾ ನಿರ್ಮಾಣ ಸಂಸ್ಥೆಗಳು ಈ ಪಟ್ಟಿಯಲ್ಲಿವೆ. ಆಪರೇಷನ್ ಸಿಂಧೂರ್ ನಂತರ ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘ (IMPPA), ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಿರ್ಮಾಪಕರ ಮಂಡಳಿ (IFTPC), ಮತ್ತು ಪಶ್ಚಿಮ ಭಾರತ ಚಲನಚಿತ್ರ ನಿರ್ಮಾಪಕರ ಸಂಘ (WIFPA) ಆಪರೇಷನ್ ಸಿಂಧೂರ್ಗೆ ಸಂಬಂಧಿಸಿದ ಚಲನಚಿತ್ರ ಶೀರ್ಷಿಕೆಗಳಿಗಾಗಿ ಅರ್ಜಿಗಳಲ್ಲಿ ಹೆಚ್ಚಳ ಕಂಡಿವೆ. ಮಿಲಿಟರಿ ಕಾರ್ಯಾಚರಣೆಗೆ ಸಂಬಂಧಿಸಿದ ಇಮೇಲ್ ಮೂಲಕ ಮೂರು ಸಂಸ್ಥೆಗಳು ಒಟ್ಟಾಗಿ 30 ಕ್ಕೂ ಹೆಚ್ಚು ಶೀರ್ಷಿಕೆ ಅರ್ಜಿಗಳನ್ನು ಸ್ವೀಕರಿಸಿವೆ.
ಸದ್ಯದ ಪೈಪೋಟಿ ನೋಡಿದರೆ ಈ ಸಂಖ್ಯೆಗಳು 50–60ಕ್ಕೆ ಏರಬಹುದು. ಇದು ಹೊಸದೇನಲ್ಲ. ಹೆಚ್ಚಿನ ಜನರು ಆಪರೇಷನ್ ಸಿಂಧೂರ್ ಮತ್ತು ಮಿಷನ್ ಸಿಂಧೂರ್ ನಂತಹ ಶೀರ್ಷಿಕೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು IMPPA ಕಾರ್ಯದರ್ಶಿ ಅನಿಲ್ ನಾಗರತ್ ತಿಳಿಸಿದ್ದಾರೆ. ಒಬ್ಬ ವ್ಯಕ್ತಿ ಯಾವುದೇ ಸಂಖ್ಯೆಯ ಶೀರ್ಷಿಕೆಗಳಿಗೆ ಅರ್ಜಿ ಸಲ್ಲಿಸಬಹುದು. ಆದರೆ ಮೊದಲು ಅರ್ಜಿ ಸಲ್ಲಿಸಿದ ವ್ಯಕ್ತಿಗೆ ಶೀರ್ಷಿಕೆಯನ್ನು ನೀಡಲಾಗುತ್ತದೆ. ಚಲನಚಿತ್ರ ನಿರ್ಮಿಸಲು ಬಯಸುವ ಯಾವುದೇ ನಿರ್ಮಾಪಕರು ಸಾಮಾನ್ಯವಾಗಿ ಸುದ್ದಿಯಲ್ಲಿರುವ ವಿಷಯಗಳನ್ನು ಹುಡುಕುತ್ತಾರೆ. ಇದು ಭಾರತ ಹೆಮ್ಮೆಪಡುವ ವಿಷಯ, ಆದ್ದರಿಂದ ಚಲನಚಿತ್ರ ನಿರ್ಮಾಪಕರು ಈ ಕಥೆಯನ್ನು ಪರದೆಯ ಮೇಲೆ ತರಲು ಉತ್ಸುಕರಾಗಿದ್ದಾರೆ ಎಂದು ನಾಗರತ್ ತಿಳಿಸಿದರು.
ಕಾರ್ಗಿಲ್, ಉರಿ, ಕುಂಭ ಮತ್ತು ಇತರ ಶೀರ್ಷಿಕೆಗಳಿಗೆ ಅರ್ಜಿ ಸಲ್ಲಿಸುವುದರೊಂದಿಗೆ ಹಿಂದೆಯೂ ಇದೇ ರೀತಿಯ ಪೈಪೋಟಿ ಕಂಡುಬಂದಿತ್ತು. ಹಿಂದೂಸ್ತಾನ್ ಕಾ ಸಿಂಧೂರ್, ಮಿಷನ್ ಆಪರೇಷನ್ ಸಿಂಧೂರ್ ಮತ್ತು ಸಿಂಧೂರ್ ಕಾ ಬದ್ಲಾ ಸೇರಿದಂತೆ ಇತರ ಶೀರ್ಷಿಕೆಗಳಿಗೆ ಅರ್ಜಿ ಸಲ್ಲಿಸಲಾಗುತ್ತಿದೆ. ಪಹಲ್ಗಮ್: ದಿ ಟೆರರ್ ಅಟ್ಯಾಕ್ ಮತ್ತು ಪಹಲ್ಗಮ್ ಅಟ್ಯಾಕ್ ಮುಂತಾದ ಪಹಲ್ಗಮ್ಗೆ ಸಂಬಂಧಿಸಿದ ಶೀರ್ಷಿಕೆಗಳಿಗೂ ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ಮತ್ತೊಂದೆಡೆ ಸ್ಯಾಂಡಲ್ವುಡ್ ನಲ್ಲೂ ಶೀರ್ಷಿಕೆಗಾಗಿ ಪೈಪೋಟಿ ಶುರುವಾಗಿದೆ. ಕನ್ನಡದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಆಪರೇಷನ್ ಸಿಂಧೂರ್ ಟೈಟಲ್ ಗೆ ಅರ್ಜಿ ಸಲ್ಲಿಸಿ ರಿಜಿಸ್ಟ್ರೇಶನ್ ಮಾಡಿಸಿಕೊಂಡಿದ್ದಾರೆ.
Advertisement