
ಅನಿರೀಕ್ಷಿತ ವಿಳಂಬದ ನಂತರ ನಾಲ್ಕು ವರ್ಷಗಳ ಕಾಯುವಿಕೆ ಅಂತ್ಯಗೊಂಡಿದ್ದು, ನಟ ದಿಗಂತ್ ನಟಿಸಿರುವ ಕ್ರೈಮ್ ಥ್ರಿಲ್ಲರ್ 'ಎಡಗೈಯೇ ಅಪಘಾತಕ್ಕೆ ಕಾರಣ' ಚಿತ್ರವು ಜೂನ್ 13 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. ನಿರ್ದೇಶಕ ಸಮರ್ಥ್ ಕಡ್ಕೋಲ್ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರವು ಆರಂಭದಿಂದಲೂ ಹಲವು ಸವಾಲುಗಳನ್ನು ಎದುರಿಸುತ್ತಿದೆ.
ಸ್ವತಂತ್ರ ಚಲನಚಿತ್ರ ನಿರ್ಮಾಣದ ಹೋರಾಟಗಳು ಮತ್ತು ಅನಿಶ್ಚಿತತೆಗಳು ವಿಶೇಷವಾಗಿ ನಮ್ಮಂತಹ ಹೊಸಬರಿಗೆ ತುಂಬಾ ಕಷ್ಟ. ಆರಂಭದಲ್ಲಿ ನಾನು ರಿಷಬ್ ಶೆಟ್ಟಿ ನಟಿಸಿದ ಅಂತಗೋಣಿ ಶೆಟ್ಟಿ ಎಂಬ ಯೋಜನೆಯೊಂದಿಗೆ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸುವ ಗುರಿಯನ್ನು ಹೊಂದಿದ್ದೆ ಮತ್ತು ಸದ್ಯ ಸ್ಥಗಿತಗೊಂಡಿರುವ ರಿಷಬ್ ನಿರ್ದೇಶನದ ರುದ್ರಪ್ರಯಾಗ ಚಿತ್ರದ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದೆ. ಆದರೆ, ನನ್ನ ಪ್ರಯಾಣವು ಎಡಗೈಯೇ ಅಪಘಾತಕ್ಕೆ ಕಾರಣ ಚಿತ್ರಕ್ಕೆ ತಿರುವು ಪಡೆಯಿತು. ಕೋವಿಡ್ ನಂತರ ಸವಾಲುಗಳು ಮತ್ತಷ್ಟು ಹೆಚ್ಚಿದವು. ಆದರೆ, ನನ್ನ ಪ್ಯಾಶನ್ ಚಿತ್ರದ ಮೇಲಿನ ಉತ್ಸಾಹವನ್ನು ಜೀವಂತವಾಗಿರಿಸಿತು' ಎಂದು ಸಮರ್ಥ್ ಹೇಳುತ್ತಾರೆ.
ಕಾಲಾನಂತರದಲ್ಲಿ ಚಿತ್ರದ ನಿರ್ಮಾಪಕರು ಬದಲಾದರು. ಬ್ಲಿಂಕ್ ಚಿತ್ರದ ನಿರ್ಮಾಪಕ ರವಿಚಂದ್ರನ್ ಎಜೆ ಮತ್ತು ಶಾಕಾಹಾರಿ ಚಿತ್ರದ ನಿರ್ಮಾಪಕ ರಾಜೇಶ್ ಕೀಳಂಬಿ ಈಗ ಬೆಂಬಲ ನೀಡಿದ್ದಾರೆ. 'ಚಿತ್ರವನ್ನು ನೋಡಿದ ನಂತರ, ಅವರು ಅದರ ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟರು ಮತ್ತು ಅದಕ್ಕೆ ಅಗತ್ಯವಾದ ಪ್ರೋತ್ಸಾಹವನ್ನು ನೀಡಿದರು. ಅವರ ಬೆಂಬಲವು ಯೋಜನೆಗೆ ಹೊಸ ಜೀವ ತುಂಬಿದೆ' ಎಂದು ಸಮರ್ಥ್ ಹೇಳುತ್ತಾರೆ.
ಎಡಗೈಯೇ ಅಪಘಾತಕ್ಕೆ ಕಾರಣ ಚಿತ್ರವನ್ನು ವಿಶಿಷ್ಟ ಪರಿಕಲ್ಪನೆಯೊಂದಿಗೆ ಕ್ರೈಮ್ ಥ್ರಿಲ್ಲರ್ ಎಂದು ವಿವರಿಸಲಾಗಿದೆ. ಬಲಗೈ ಜಗತ್ತಿನಲ್ಲಿ ಎಡಗೈ ವ್ಯಕ್ತಿಗಳ ಜೀವನ ಮತ್ತು ಹೋರಾಟಗಳ ಕುರಿತು ಹೇಳುತ್ತದೆ. ದಿಗಂತ್ ಈ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಅವರ ಹಿಂದಿನ ಚಿತ್ರಗಳಿಗಿಂತ ಬಹಳ ಭಿನ್ನವಾದ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರೊಂದಿಗೆ ನಿಧಿ ಸುಬ್ಬಯ್ಯ ಮತ್ತು ಧನು ಹರ್ಷ ನಟಿಸಿದ್ದಾರೆ. ನಟ ನಿರೂಪ್ ಭಂಡಾರಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರಕ್ಕೆ ಪ್ರದ್ಯೋತ್ತನ್ ಸಂಗೀತ ಸಂಯೋಜಿಸಿದ್ದಾರೆ, ಅಭಿಮನ್ಯು ಸದಾನದನ್ ಅವರ ಛಾಯಾಗ್ರಹಣವಿದೆ.
Advertisement