
ಬೆಂಗಳೂರು: ಕಾರ್ಯಕ್ರಮವೊಂದರಲ್ಲಿ ಕನ್ನಡಿಗರ ಭಾವನೆಗೆ ಧಕ್ಕೆಯಾಗುವಂತೆ ಮಾತನಾಡಿದ್ದ ಖ್ಯಾತ ಗಾಯಕ ಸೋನು ನಿಗಮ್ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ರದ್ದು ಮಾಡುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದು, ಅರ್ಜಿ ಸ್ವೀಕರಿಸಿರುವ ಕೋರ್ಟ್ ವಿಚಾರಣೆಯನ್ನು ಮೇ 15ಕ್ಕೆ ಮುಂದೂಡಿದೆ.
ಕನ್ನಡಿಗರ ಭಾವನೆಗೆ ಧಕ್ಕೆ ಆಗುವಂತೆ ಮಾತನಾಡಿದ ಬಳಿಕ ಹಲವರ ಆಕ್ರೋಶಕ್ಕೆ ಗುರಿಯಾಗಿದ್ದ ಪ್ರಖ್ಯಾತ ಗಾಯಕ ಸೋನು ನಿಗಮ್ (Sonu Nigam) ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆ ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡ ಪೊಲೀಸರು ಸೋನು ಅವರಿಗೆ ನೊಟೀಸ್ ಕಳುಹಿಸಿದ್ದರು.
ಈ ನೊಟೀಸ್ಗೆ ಉತ್ತರ ನೀಡಲು ಏಳು ದಿನ ಗಡುವು ನೀಡಿದ್ದರು. ಆದರೆ ಸೋನು ನಿಗಮ್ ಪೊಲೀಸರ ನೊಟೀಸ್ಗೆ ಉತ್ತರ ನೀಡದ ಹಿನ್ನೆಲೆ ಸದ್ಯ ಖಾಕಿ ಗಾಯಕನಿಗೆ ಎರಡನೇ ನೊಟೀಸ್ ಕಳುಹಿಸಲು ಸಜ್ಜಾಗಿದ್ದಾರೆ.
ಏಪ್ರಿಲ್ 22 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್ ಅವರ ಹೇಳಿಕೆ ವಿವಾದದ ಸ್ಪರೂಪ ಪಡೆದಿತ್ತು. ನಂತರ ಕರ್ನಾಟಕ ಪೊಲೀಸರು ಮೇ 3 ರಂದು ಎಫ್ಐಆರ್ ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸುತ್ತಿರುವ ಆವಲಹಳ್ಳಿ ಪೊಲೀಸರು ಅವರಿಗೆ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಕೇಳಿಕೊಂಡಿದ್ದಾರೆ.
ಅಂತೆಯೇ ಸೋನು ನಿಗಮ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 351(2) (ಕ್ರಿಮಿನಲ್ ಬೆದರಿಕೆ), 352 (ಸಾರ್ವಜನಿಕ ಕಿಡಿಗೇಡಿತನವನ್ನು ಪ್ರಚೋದಿಸುವ ಹೇಳಿಕೆಗಳು) ಮತ್ತು 352(1) (ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸುವ ಅಥವಾ ಇನ್ನೊಂದು ಅಪರಾಧವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮರಾಜ್ ಎ. ಅವರು ಸಲ್ಲಿಸಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
ಏನಿದು ಘಟನೆ?
ಕಾರ್ಯಕ್ರಮವೊಂದರಲ್ಲಿ ಗಾಯಕ ಸೋನು ನಿಗಮ್ ಹಾಡುತ್ತಿದ್ದ ವೇಳೆ ಯುವಕನೊಬ್ಬ ಕನ್ನಡ ಹಾಡು ಹಾಡುವಂತೆ ಕೇಳಿಕೊಂಡಿದ್ದ. ಈ ವಿಚಾರ ಸೋನ್ ನಿಗಮ್ ಅವರ ಸಿಟ್ಟಿಗೆ ಕಾರಣವಾಗಿತ್ತು. ‘ಕನ್ನಡ, ಕನ್ನಡ.. ಇದೇ ಕಾರಣದಿಂದ ಪಹಲ್ಗಾಮ್ನಲ್ಲಿ ದಾಳಿಯಾಗಿದ್ದು’ ಎಂದು ಹೇಳಿದ್ದರು. ಸೋನು ನಿಗಮ್ ವಿವಾದಿತ ಹೇಳಿಕೆ ನೀಡಿದ್ದು, ಕನ್ನಡ ಪರ ಸಂಘಟನೆಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಈ ಸಂಬಂಧ ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೋನು ನಿಗಂ ವಿರುದ್ಧ ಅಸಹಕಾರ ಪ್ರದರ್ಶಿಸುವುದಾಗಿ ಹೇಳಿತ್ತು. ವಿವಾದ ಹೆಚ್ಚಾಗುತ್ತಿದ್ದಂತೆ ಸೋನು ನಿಗಮ್ 'ಸಾರಿ ಕರ್ನಾಟಕ… ನನ್ನ ಅಹಂ ಗಿಂತ ನನ್ನ ಪ್ರೀತಿ ದೊಡ್ಡದು, ನಾನು ಯಾವಾಗಲೂ ನಿಮ್ಮನ್ನು ಇಷ್ಟ ಪಡುತ್ತೇನೆ' ಎಂದು ಪೋಸ್ಟ್ ಮಾಡಿ ಕ್ಷಮೆ ಯಾಚಿಸಿದ್ದರು.
ಇದರ ಬೆನ್ನಲ್ಲೇ ಗಾಯಕ ಸೋನು ನಿಗಮ್ ಕೂಡ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದಿಗೆ ಸೋನು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ದೂರನ್ನು ರದ್ದು ಮಾಡುವಂತೆ ಹೈಕೋರ್ಟ್ ಗೆ ಸೋನು ನಿಗಮ್ ಅರ್ಜಿಯಲ್ಲಿ ಸಲ್ಲಿಸಿದ್ದಾರೆ. ಮೇ.15 ರಂದು ಅವರ ಅರ್ಜಿ ವಿಚಾರಣೆಗೆ ಬರಲಿದೆ. ಹೈಕೋರ್ಟ್ ನ್ಯಾ. ಶಿವಶಂಕರ್ ಅಮರಣ್ಣನವರ್ ಅವರ ಪೀಠದಲ್ಲಿ ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ.
Advertisement