
ಬೆಂಗಳೂರು: ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅವರ ನಾಗವಾರದ ನಿವಾಸದಲ್ಲಿ ಇಂದು ಇದಕ್ಕಿದ್ದಂತೆ ಸೀಕ್ರೆಟ್ ಮೀಟಿಂಗ್ ನಡೆದಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಸಭೆಯಲ್ಲಿ ಗಣೇಶ್, ದುನಿಯಾ ವಿಜಯ್, ಧ್ರುವಾ ಸರ್ಜಾ ಸೇರಿದಂತೆ ಹಲವು ನಟರು ಭಾಗಿಯಾಗಿದ್ದರು. ಸಿನಿಮಾ ಪ್ರದರ್ಶಕರು ಮತ್ತು ವಿತರಕರು ಕೂಡ ಮೀಟಿಂಗ್ನಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.
ಕನ್ನಡ ಚಿತ್ರರಂಗ ಸದ್ಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಥೀಯೇಟರ್ಗೆ ಜನ ಬರುತ್ತಿಲ್ಲ. ಕನ್ನಡ ಸಿನಿಮಾಗಳಿಗೆ ಥೀಯೇಟರ್ ಕೊರತೆ, ಟಿಕೆಟ್ ಬೆಲೆ ವಿಚಾರ, ದಿನೇ ದಿನೇ ಕಡಿಮೆ ಆಗುತ್ತಿರೋ ಕನ್ನಡ ಸಿನಿಮಾಗಳು, ಪ್ರೊಡ್ಯೂಸರ್ಗಳ ಸಂಕಷ್ಟ, ವಿತರಕರು-ಪ್ರದರ್ಶಕರ ಸಂಕಷ್ಟ ಹೀಗೇ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆದಿದೆ.
ಸಭೆ ಬಳಿಕ ಮಾಹಿತಿ ನೀಡಿರುವ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು, ಥಿಯೇಟರ್ ಸಮಸ್ಯೆ ದೂರ ಮಾಡಲು, ಶಿವಣ್ಣ ಮನೇಲಿ ಸಭೆ ಆಯೋಜಿಸಲಾಗಿತ್ತು. ಶೀಘ್ರದಲ್ಲೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ನಿರ್ಧಾರ ಮಾಡಲಾಗಿದೆ. ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆದಿದೆ. ಹೀರೋಗಳು ಐದು ವರ್ಷಕ್ಕೆ ಒಂದು ಸಿನಿಮಾ ಮಾಡುವ ಬದಲು, ವರ್ಷಕ್ಕೆ ಎರಡು ಸಿನಿಮಾಗಳು ಮಾಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ಥಿಯೇಟರ್ ಮುಚ್ಚುತ್ತಿರೋದರ ಕುರಿತು ಬಹುಮುಖ್ಯವಾಗಿ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.
ಸ್ಟಾರ್ ಸಿನಿಮಾಗಳಿಂದ ಥಿಯೇಟರ್ಗಳು ಉಳಿಯುತ್ತವೆ. ಹೀಗಾಗಿ ಸ್ಟಾರ್ಗಳು ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಬೇಕು. ಥಿಯೇಟರ್ಗಳಿಗೆ ಜನ ಬರುತ್ತಿಲ್ಲ, ಇದು ದೊಡ್ಡ ಸಮಸ್ಯೆ ಆಗಿದೆ. ಥಿಯೇಟರ್ಗಳಿಗೆ ಲ್ಯಾಂಡ್ ಟ್ಯಾಕ್ಸ್, ಸಬ್ಸಿಡಿ, ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವಂತೆ ಮುಖ್ಯಮಂತ್ರಿ ಬಳಿ ಬೇಡಿಕೆ ಇಡಲಾಗುವುದು ಎಂದು ಅವರು ಹೇಳಿದರು.
Advertisement