

ಬೆಂಗಳೂರು: ಕಿರುತೆರೆ ನಟ, Biggboss Kannada ಸೀಸನ್-12ರ ಮಾಜಿ ಸ್ಪರ್ಧಿ ಧ್ರುವಂತ್ ಅಲಿಯಾಸ್ ಚರಿತ್ ಬಾಳಪ್ಪಗೆ ಟ್ರೋಲಿಗರ ಕಾಟ ಶುರುವಾಗಿದೆ. ಧ್ರುವಂತ್ ನೀಡಿದ ಒಂದು ಸಂದರ್ಶನದ ತುಣುಕುಗಳನ್ನು ಇಟ್ಟುಕೊಂಡು ಟ್ರೋಲಿಗರು ಅಶ್ಲೀಲವಾಗಿ ಕಮೆಂಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಧ್ರುವಂತ್ ಕೆಲವು ಟ್ರೋಲ್ ಪೇಜ್ಗಳ ವಿರುದ್ಧ ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಠಾಣೆ ಹಾಗೂ ಬಸವೇಶ್ವರ ನಗರ ಸೈಬರ್ ಸೆಲ್ ನಲ್ಲಿ ದೂರು ದಾಖಲಿಸಿದ್ದಾರೆ.
ನಾನು ಕಿರುತೆರೆ ನಟನಾಗಿದ್ದು ಬಿಗ್ ಬಾಸ್ ನಿಂದಾಗಿ ಸಮಾಜದಲ್ಲಿ ಗೌರವ ಮತ್ತು ವಿಶ್ವಾಸವನ್ನು ಸಂಪಾದಿಸಿದ್ದೇನೆ. ಆದರೆ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಮೂಲಕ ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ನಿರಂತರವಾಗಿ ಅಶ್ಲೀಲ, ಮಾನಹಾನಿಕಾರಕ ರೀತಿಯ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ ಎಂದು ಧ್ರುವಂತ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದರಿಂದ ನನಗೆ ಮಾನಸಿಕವಾಗಿ ಕುಂದುಹೋಗುತ್ತಿದ್ದೇನೆ. ನನಗೆ ಅವಕಾಶಗಳು ಸಿಗದಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇದರಿಂದ ನನಗೆ ತೀವ್ರ ಮಾನಸಿಕಯಾತನೆ ಉಂಟಾಗುತ್ತಿದೆ. ಆದ್ದರಿಂದ ಟ್ರೋಲಿಗರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ನನ್ನ ತಂಟೆಗೆ ಬಾರದಂತೆ ಮಾಡಿ ಎಂದು ಧ್ರುವಂತ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.