

ಹೈದರಾಬಾದ್: ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರು ತಮ್ಮ ಹಿಂದಿನ ಸಿನಿಮಾ ‘ಪೆದ್ದಿ’ ಶೂಟಿಂಗ್ ವೇಳೆ ಸಂಭವಿಸಿದ ಮಣಿಕಟ್ಟಿನ ಗಾಯಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ .
ಚಿಕಿತ್ಸೆಗಾಗಿ ಅವರು ಹೈದರಾಬಾದ್ನ ಬೇಗಂಪೇಟೆ ವಿಮಾನ ನಿಲ್ದಾಣದಿಂದ ಕೊಯಮತ್ತೂರಿಗೆ ತೆರಳಿದ್ದಾರೆ. ಅಲ್ಲಿನ ಪ್ರಸಿದ್ಧ ಗಂಗಾ ಆಸ್ಪತ್ರೆಯಲ್ಲಿ ನಾಳೆ ಈ ಶಸ್ತ್ರಚಿಕಿತ್ಸೆ ನಡೆಯಲಿದ್ದು, ಕೈ ಮತ್ತು ಮಣಿಕಟ್ಟು ಶಸ್ತ್ರಚಿಕಿತ್ಸಾ ತಜ್ಞರು ಈ ಪ್ರಕ್ರಿಯೆಯನ್ನು ನಡೆಸಿಕೊಡಲಿದ್ದಾರೆ.
ಮಗನ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ತಂದೆ ಮೆಗಾಸ್ಟಾರ್ ಚಿರಂಜೀವಿ, ತಾಯಿ ಸುರೇಖಾ, ಪತ್ನಿ ಉಪಾಸನಾ ಹಾಗೂ ಕುಟುಂಬದ ಇತರ ಸದಸ್ಯರು ಕೊಯಮತ್ತೂರಿನ ಆಸ್ಪತ್ರೆಯಲ್ಲಿ ರಾಮ್ ಚರಣ್ ಜೊತೆಯಾಗಲಿದ್ದಾರೆ.
‘ಪೆದ್ದಿ’ ಚಿತ್ರದ ಚಿತ್ರೀಕರಣದ ಅವಧಿಯಲ್ಲಿ ರಾಮ್ ಚರಣ್ ಎರಡು ಪ್ರಮುಖ ಗಾಯಗಳಿಗೆ ತುತ್ತಾಗಿದ್ದರು. ಈ ವರ್ಷದ ಆರಂಭದಲ್ಲಿ ಅವರಿಗೆ ಹಣೆ ಭಾಗಕ್ಕೆ ತೀವ್ರ ಗಾಯವಾಗಿದ್ದು, ಹೈದರಾಬಾದ್ನ ಅಪೋಲೋ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು.
ಅದರ ಬೆನ್ನಲ್ಲೇ ಶೂಟಿಂಗ್ ವೇಳೆ ಮಣಿಕಟ್ಟಿನ ತೀವ್ರವಾದ ಉಳುಕಿನ ಸಮಸ್ಯೆಯೂ ಅವರನ್ನು ಬಾಧಿಸಿತ್ತು. ಈ ಸಮಸ್ಯೆಗೆ ಶಸ್ತ್ರಚಿಕಿತ್ಸೆಯೇ ಶಾಶ್ವತ ಪರಿಹಾರ ಎಂದು ಹೈದರಾಬಾದ್ ವೈದ್ಯರು ಸಲಹೆ ನೀಡಿದ್ದರು. ಹೀಗಾಗಿ ಹಲವು ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ನಂತರ, ಕೊಯಮತ್ತೂರಿನ ಗಂಗಾ ಆಸ್ಪತ್ರೆಯಲ್ಲೇ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ನಟ ನಿರ್ಧರಿಸಿದ್ದಾರೆ.